‘ಸ್ಪೂರ್ತಿಧಾಮ’ ನೀಡುವ ‘ಬೋಧಿವೃಕ್ಷ’ ಪ್ರಶಸ್ತಿಗೆ ಎಸ್‌.ಆರ್ ಹಿರೇಮಠ್‌ ಆಯ್ಕೆ

Date:

ಬೆಂಗಳೂರಿನ ‘ಸ್ಪೂರ್ತಿಧಾಮ’ ಕೊಡಮಾಡುವ ‘ಬೋಧಿವೃಕ್ಷ’ ಹಾಗೂ ‘ಬೋಧಿವರ್ಧನ’ ಪ್ರಶಸ್ತಿಗಳಿಗೆ ಈ ಬಾರಿ ಹಿರಿಯ ಹೋರಾಟಗಾರ ಎಸ್‌.ಆರ್‌ ಹಿರೇಮಠ್‌ ಹಾಗೂ ನಾಲ್ವರಿಗೆ ಆಯ್ಕೆಯಾಗಿದ್ದಾರೆ. ‘ಬೋಧಿವೃಕ್ಷ’ ಪ್ರಶಸ್ತಿಗೆ ಎಸ್‌.ಆರ್‌ ಹಿರೇಮಠ್ ಹಾಗೂ ‘ಬೋಧಿವರ್ಧನ’ ಪ್ರಶಸ್ತಿಗೆ ರಾಮ್‌ದೇವ್ ರಾಖೆ, ಸುಶೀಲ ನಾಡ, ಹಸನಬ್ಬ ಮತ್ತು ಜಿ.ಕೆ.ಪ್ರೇಮ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗಳ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ‘ಸ್ಪೂರ್ತಿಧಾಮ’ದ ಅಧ್ಯಕ್ಷ ಎಸ್ ಮರಿಸ್ವಾಮಿ, “ಏಪ್ರಿಲ್ 14ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮವು ಏಪ್ರಿಲ್ 14ರ ಸಂಜೆ 5 ಗಂಟೆಗೆ ‘ಸ್ಪೂರ್ತಿಧಾಮ’ದ ಆಡಿಟೋರಿಯಂನಲ್ಲಿ ನಡೆಯಲಿದೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಶ್ರಾಂತ ಉಪಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಟಿ.ಆರ್.ಚಂದ್ರಶೇಖರ ಕಾರ್ಯಕ್ರಮದಲ್ಲಿ ಇರಲಿದ್ದಾರೆ” ಎಂದು ತಿಳಿಸಿದ್ದಾರೆ.

“ಕಳೆದ 16 ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ‘ಅಂಬೇಡ್ಕರ್ ಹಬ್ಬ’ವಾಗಿ ‘ಸ್ಪೂರ್ತಿಧಾಮ’ ಆಚರಿಸುತ್ತಿದೆ. ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಮತ್ತು ‘ಭೋಧಿವರ್ಧನ’ ಹೆಸರಿನ ರಾಷ್ಟ್ರ ಪ್ರಶಸ್ತಿಗಳನ್ನು ನೀಡುತ್ತಿದೆ. ‘ಬೋಧಿವೃಕ್ಷ’ ಪ್ರಶಸ್ತಿಗೆ ಪ್ರಶಸ್ತಿ ಫಲಕ ಮತ್ತು 1 ಲಕ್ಷ ರೂ. ನಗದು ಹಾಗೂ ಐದು ‘ಭೋಧಿವರ್ಧನ’ ಪ್ರಶಸ್ತಿಗೆ ಪ್ರಶಸ್ತಿ ಫಲಕ ಮತ್ತು ತಲಾ 25,000 ರೂ. ನಗದು ನೀಡಲಾಗುತ್ತದೆ” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬೋಧಿವೃಕ್ಷ ಪ್ರಶಸ್ತಿಗೆ ಆಯ್ಕೆಯಾಗಿರುವ ಎಸ್.ಆರ್.ಹಿರೇಮಠ್ ಅವರು ಭಾರತೀಯ ಪರಿಸರವಾದಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿದ್ದಾರೆ. ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧದ ನಿರಂತರ ಹೋರಾಟ ನಡೆಸಿದ್ದಾರೆ. ಅವರ ಹೋರಾಟದಿಂದಾಗಿ ಬಳ್ಳಾರಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸಹಾಯವಾಯಿತು. ಪ್ರಬಲ ಗಣಿ ನಿರ್ವಾಹಕರು, ರಾಜಕೀಯ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ನಿರ್ಭಯವಾಗಿ ಎದುರಿಸಿದ್ದಾರೆ. ಅವರಿಗೆ, ಭಾರತದ ಅತ್ಯುನ್ನತ ಪರಿಸರ ಗೌರವ ‘ಇಂದಿರಾ ಗಾಂಧಿ ಪರ್ಯಾವರಣ ಪುರಸ್ಕಾರ’ ಸಹ ದೊರೆತಿದೆ.

ಬೋಧಿವರ್ಧನ ಪ್ರಶಸ್ತಿ
ರಾಮ್‌ದೇವ್ ರಾಖೆ – ಅವರು ಅಂಬೇಡ್ಕರ್ ಚಿಂತನೆಗಳ ಹಾದಿಯಲ್ಲಿ ನಡೆಯುತ್ತಿದ್ದಾರೆ. ಧ್ವನಿ ಇಲ್ಲದವರ ಪರವಾಗಿ ‘ಶೋಷಿತ’ ಪತ್ರಿಕೆಯನ್ನು ಅವರು ಆರಂಭಿಸಿದ್ದರು. ಈಗ ಆ ಪತ್ರಿಕೆಯನ್ನು ‘ಪಂಚಮ’ ಎಂದು ಬದಲಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಹುಟ್ಟಿನಿಂದಲೂ ಅದರೊಂದಿಗಿದ್ದಾರೆ. ದಲಿತ ಚಳುವಳಿಯ ಮೊದಲ ಪೂರ್ಣಪ್ರಮಾಣದ ಕಾರ್ಯಕರ್ತ ರಾಮದೇವ್ ರಾಖೆ ಎಂದು ಕೊಟಿಗಾನಹಳ್ಳಿ ರಾಮಯ್ಯ ಬಣ್ಣಿಸಿದ್ದಾರೆ.

ಸುಶೀಲ ನಾಡ – ಮೈಸೂರು ಹಾಗೂ ಕೊಡಗು ಜಿಲ್ಲೆಯ ಜೇನುಕುರುಬ, ಬೆಟ್ಟಕುರುಬ, ಎರವ, ಸೋಲಿಗ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಸಲರು ಹಾಗೂ ಗೊಂಡರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಹಾಗೂ ಮಲೆಕುಡಿಯರು ಮುಂತಾದ ಕರ್ನಾಟಕದ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದಲ್ಲಿ ಇವರು ಸಕ್ರಿಯರಾಗಿದ್ದಾರೆ ಮತ್ತು ಈ ಸಮುದಾಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಒಕ್ಕೂಟದ ಪ್ರಯತ್ನದಿಂದಾಗಿ ೧೨ ಅರಣ್ಯ ಮೂಲಬುಡಕಟ್ಟು ಸಮುದಾಯಗಳಿಗೆ ಅರಣ್ಯ ಹಕ್ಕು, ಪೌಷ್ಟಿಕ ಆಹಾರ, ಆಶ್ರಮ ಶಾಲೆಗಳ ಉನ್ನತೀಕರಣ ಸಾಧ್ಯವಾಗಿದೆ.

ಹಸನಬ್ಬ – ಕಳೆದ ಮೂರು ದಶಕಗಳಿಂದ ಬೆಳ್ತಂಗಡಿಯ ಚಾರ್ಮಡಿ ಘಾಟ್‌ನಲ್ಲಿ ಉಂಟಾಗುವ ಅಪಘಾತಗಳಲ್ಲಿ ಸಿಕ್ಕಿ ಗಾಯಗೊಂಡವರನ್ನು ಆಸ್ಪತ್ರಗೆ ಸಾಗಿಸಿ ಅವರಿಗೆ ಚಿಕಿತ್ಸೆ ಕೊಡಿಸಿ ಅವರ ಪ್ರಾಣ ಉಳಿಸುವ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಹೀಗೆ ನೂರಾರು ಜೀವ ಉಳಿಸಿದ್ದಾರೆ. ಸರ್ಕಾರಿ ಆಂಬುಲೆನ್ಸ್ಗಳು ತಡಮಾಡಿದಾಗ ಅವರು ತಮ್ಮ ಸ್ವಂತ ಗಾಡಿಯಲ್ಲಿ ಗಾಯಾಳುಗಳನ್ನು ಸಾಗಿಸಿ ಬದುಕಿಸಿದ್ದಾರೆ. ಹಸನಬ್ಬ ಅವರ ಈ ಕೆಲಸವನ್ನು ಮೆಚ್ಚಿ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಜಿ.ಕೆ.ಪ್ರೇಮ – ಕರ್ನಾಟಕದ ಕೆಲ ಭಾಗಗಳಲ್ಲಿ ಋತುಮತಿ ಆದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಒಂದು ಸಣ್ಣ ಗುಡಿಸಿಲಿನಲ್ಲಿ ಅಥವಾ ಮರದ ಕೆಳಗೆ ಬಿಟ್ಟುಬರುವುದು ಒಂದು ವಾಡಿಕೆ. ನಂತರ ಪ್ರತಿ ಸಾರಿ ಮುಟ್ಟಾದಾಗ ಅವರು ಹೀಗೇ ಇರಬೇಕಾಗುತ್ತದೆ. ಅನೇಕ ವೇಳೆ ಹಾವು ಕಚ್ಚಿ ಅಥವಾ ಇನ್ಯಾವುದೋ ಕಾರಣಕ್ಕೆ ಅನೇಕರು ಪ್ರಾಣ ಕಳೆದುಕೊಂಡಿರುತ್ತಾರೆ. ಇಂತಹ ಒಂದು ಅನಿಷ್ಟ ಪದ್ಧತಿಯ ವಿರುದ್ಧ ಟೊಂಕ ಕಟ್ಟಿ ನಿಂತಿರುವವರು ಜಿ.ಕೆ.ಪ್ರೇಮ. ಅವರ ಈ ಪ್ರಯತ್ನದಿಂದಾಗಿ ಅವರ ಕಾಡುಗೊಲ್ಲ ಸಮುದಾಯದ ಮಹಿಳೆಯರು ಈ ಪದ್ಧತಿಯಿಂದ ಹೊರಬರಲು ಸಾಧ್ಯವಾಗಿದೆ. ತುಮಕೂರು, ಚಿತ್ರದುರ್ಗ ಚಿಕ್ಕಮಗಳೂರು, ಹಾಸನ, ಬಳ್ಳಾರಿ ಜಿಲ್ಲೆಗಳ ಕನಿಷ್ಠ 10 ಹಳ್ಳಿಗಳಲ್ಲಿ ಈ ಪದ್ಧತಿ ನಿಂತಿದೆ ಮತ್ತು ಇವರ ಶ್ರಮದಿಂದ ಇತರ ಹಳ್ಳಿಗಳವರೂ ಈ ಬಗ್ಗೆ ಯೋಚಿಸುವಂತಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ, ಎನ್‌ಸಿಬಿಸಿ ಅಧ್ಯಕ್ಷರಿಂದ ಹಿಂದುಳಿದ ವರ್ಗಗಳನ್ನು ದಿಕ್ಕು ತಪ್ಪಿಸುವ ಕೆಲಸ: ದ್ವಾರಕಾನಾಥ್

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಕೇಂದ್ರದ ದ್ರೋಹ ಸಮರ್ಥಿಸಿದ ಪ್ರಲ್ಹಾದ್‌ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು: ಸಿದ್ದರಾಮಯ್ಯ ಕರೆ

ರಾಜ್ಯದ ಜನರ ತೆರಿಗೆ ಹಣಕ್ಕೆ ಕೇಂದ್ರದಿಂದ ಆದ ದ್ರೋಹವನ್ನು ಸಮರ್ಥಿಸಿದ ಪ್ರಲ್ಹಾದ್‌...

ʼಈ ದಿನʼ ಸಮೀಕ್ಷೆ | ಮೋದಿಗಿಂತಲೂ ಸಿದ್ದರಾಮಯ್ಯ ರಾಜ್ಯದ ಜನರಿಗೆ ಹೆಚ್ಚು ಇಷ್ಟ!

ರಾಜಕಾರಣದಲ್ಲಿ ಸದಾ ದ್ವೇಷದ ಕುದುರೆಯೇರಿ ದಿಬ್ಬಣ ಹೊರಡುವ ಮದುಮಗನಂತೆ ಕಾಣುವ ಪ್ರಧಾನಿ...