- ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ
- ಅನ್ನಭಾಗ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಮಾತನ್ನು ಉಳಿಸಿಕೊಂಡಿದ್ದೇವೆ
ಪ್ರತಿಭಟನಾನಿತರ ಸಂಘಸಂಸ್ಥೆಗಳ ಮೇಲೆ ಪೊಲೀಸರು ಸುಳ್ಳು ಕೇಸು ದಾಖಲಿಸಿ, ಸದ್ಯ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳನ್ನು ಹಿಂಪಡೆಯುವ ಸಲುವಾಗಿ ಅದನ್ನು ಪರಿಶೀಲಿಸಲು ಸಚಿವ ಸಂಪುಟವು ಉಪಸಮಿತಿಯೊಂದನ್ನು ನೇಮಿಸಲು ನಿರ್ಧಾರ ತೆಗೆದುಕೊಂಡಿರುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ ಪಾಟೀಲ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಹಲವಾರು ಸಂಘಸಂಸ್ಥೆಗಳ ಪ್ರತಿನಿಧಿಗಳು ಹಲವು ಪ್ರತಿಭಟನೆಗಳ ಸಂದರ್ಭದಲ್ಲಿ ಪೊಲೀಸರು ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ. ಹೀಗಾಗಿ ಅವುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಹೀಗಾಗಿ, ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಬಗ್ಗೆ ಹಿಂಪಡೆಯುವುದನ್ನು ಪರಿಶೀಲಿಸಲು ಸಲುವಾಗಿ ಸಚಿವ ಸಂಪುಟವು ಉಪಸಮಿತಿಯೊಂದನ್ನು ನೇಮಿಸಲು ನಿರ್ಧಾರ ತೆಗೆದುಕೊಂಡಿದೆ. ಈ ಉಪಸಮಿತಿಯ ರಚನೆ ಹಾಗೂ ಸದಸ್ಯರ ನೇಮಕದ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅನ್ನಭಾಗ್ಯ: ಅಕ್ಕಿ ಬದಲು ಹಣ ನೀಡಲು ಸರ್ಕಾರ ನಿರ್ಧಾರ
ಯಾವುದೇ ಸಂಘಟನೆ ಇರಲಿ. ಅವರು ನಿರಪರಾಧಿಗಳು, ಸುಳ್ಳು ಆರೋಪ ಅಥವಾ ಅನ್ಯಾಯವಾಗಿದೆ ಎಂಬುವುದು ಕಂಡುಬಂದರೆ ಈ ಉಪಸಮಿತಿ ಅವುಗಳನ್ನು ಪರಿಗಣಿಸುತ್ತದೆ. ಪೊಲೀಸರ ಕೆಟ್ಟ ನಿರ್ಣಯಗಳಿಂದ ಜನರಿಗೆ ತೊಂದರೆ, ಕಿರುಕುಳ ಆಗುವಂತಹ ಪ್ರಕರಣಗಳು ದಾಖಲಾಗಿದ್ದರೆ ನ್ಯಾಯವನ್ನು ಸರ್ಕಾರ ನೀಡುತ್ತದೆ ಎಂಬ ಸಂದೇಶ ಇದರಲ್ಲಿದೆ ಎಂದು ಕಾನೂನು ಸಚಿವ ಪಾಟೀಲ್ ಸಂಪುಟದ ಈ ನಿರ್ಣಯಕ್ಕೆ ಸ್ಪಷ್ಟನೆ ನೀಡಿದರು.
ಹಲವು ಪ್ರತಿಭಟನಾಕಾರರ ಮೇಲೆ ಪೊಲೀಸರು ದಾಖಲಿಸಿರುವ ಸುಳ್ಳು ಕೇಸುಗಳನ್ನು ಹಿಂಪಡೆಯಬೇಕೆಂದು ಇತ್ತೀಚೆಗೆ ಹಲವು ಸಂಘಸಂಸ್ಥೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದ್ದವು.