- ಹೃದಯದಲ್ಲಿ ರಕ್ತದ ಹರಿಯುವಿಕೆಯ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ
- ಪರೀಕ್ಷೆಗಳಿಗೆ ಒಳಪಡಿಸಿದಾಗ ಕ್ಯಾಲ್ಸಿಫಿಕ್ ಮಹಾಅಪಧಮನಿಯ ಸ್ಟೆನೋಸಿಸ್ ಸಮಸ್ಯೆ ಪತ್ತೆ
ರಾಜ್ಯ ರಾಜಧಾನಿ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯ ವೈದ್ಯರು 91 ವರ್ಷದ ಹಿರಿಯ ವ್ಯಕ್ತಿಗೆ ಪ್ರಜ್ಞೆ ಇರುವಾಗಲೇ ಯಶಸ್ವಿಯಾಗಿ ಹೃದಯದ ಟ್ಯಾನ್ಸ್ಕ್ಯಾಥೆಟರ್ ಮಹಾಪಧಮನಿ ಕವಾಟ ಬದಲಾವಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ನಿರ್ದೇಶಕ ರಾಜ್ಪಾಲ್ ಸಿಂಗ್, “91 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಅವರ ಹೃದಯದ ಮಹಾಅಪಧಮನಿ ಕವಾಟದಲ್ಲಿ ದೀರ್ಘಕಾಲದ ಸಮಸ್ಯೆ ಹೊಂದಿದ್ದರು. ಹೃದಯದಲ್ಲಿ ರಕ್ತದ ಹರಿಯುವಿಕೆಯ ಪ್ರಮಾಣ ಕಡಿಮೆಯಾಗಿ ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು” ಎಂದರು.
“ಹೀಗಾಗಿ, ಹಿರಿಯ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಅವರಿಗೆ ಕ್ಯಾಲ್ಸಿಫಿಕ್ ಮಹಾಅಪಧಮನಿಯ ಸ್ಟೆನೋಸಿಸ್ ಸಮಸ್ಯೆ ಇರುವುದು ಪತ್ತೆಯಾಯಿತು. ಇದು ತೀವ್ರವಾಗಿದೆ ಎಂಬುದು ಗೊತ್ತಾಯಿತು. ಬಳಿಕ ರೋಗಿಗೆ ವಯಸ್ಸಾದ ಕಾರಣ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡುವುದು ಅಪಾಯವಿತ್ತು. ಹಾಗಾಗಿ, ಟ್ರಾನ್ಸ್ಕ್ಯಾಥೆಟರ್ ಮಹಾಅಪಧಮನಿಯ ಕವಾಟದ ಬದಲಾವಣೆ ಮಾಡುವುದೇ ಸೂಕ್ತವೆಂದು ಅನಿಸಿತು. ರೋಗಿಗೆ ಚಿಕಿತ್ಸೆ ನೀಡಲು ಈ ವಿಧಾನವನ್ನು ಆಯ್ಕೆ ಮಾಡಿಕೊಂಡೆವು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗ್ರಾಹಕರೇ ನಕಲಿ ಬಿಲ್ ಬಗ್ಗೆ ಎಚ್ಚರವಿರಲಿ ಎಂದ ಬೆಸ್ಕಾಂ
“ಕ್ಯಾಲ್ಸಿಫಿಕ್ ಮಹಾಅಪಧಮನಿಯ ಸ್ಟೆನೋಸಿಸ್ ಸಮಸ್ಯೆ ಇದ್ದಾಗ ಹೃದಯದ ಕವಾಟ ಕಿರಿದಾಗುತ್ತದೆ. ಇದರಿಂದ ದೇಹಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯಾಗುವುದಿಲ್ಲ. ಇನ್ನೂ ವಯಸ್ಸಾದಂತೆ ಈ ಕವಾಟಗಳಿಗೆ ಹಾನಿಯಾಗುವ ಸಮಸ್ಯೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಇಂತಹ ಕಾಯಿಲೆ ಕಾಣಿಸಿಕೊಂಡಾಗ ಹಾನಿಗೊಳಗಾದ ಕವಾಟಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಬದಲಾಯಿಸಲಾಗುತ್ತದೆ” ಎಂದು ಹೇಳಿದರು.
“ರೋಗಿಗೆ 91 ವರ್ಷ ವಯಸ್ಸಾದ ಕಾರಣ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡುವುದು ಅಪಾಯವಿತ್ತು. ಹಾಗಾಗಿ, ಅತ್ಯಾಧುನಿಕ ತಂತ್ರಜ್ಞಾನವಾದ ಟಿಎವಿಐ (TAVI) ವಿಧಾನದ ಮೂಲಕ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡುವ ವೇಳೆ ರೋಗಿಯು ಪ್ರಜ್ಞೆ ಇರುವಾಗಲೇ ಸಂಪೂರ್ಣ ಅಳವಡಿಕೆ ಮಾಡಲಾಗಿದೆ. ಟಿಎವಿಐ(TAVI) ವಿಧಾನದ ಮರುದಿನವೇ ರೋಗಿಯನ್ನು ಬಿಡುಗಡೆಗೊಳಿಸಲಾಗಿದ್ದು, ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ” ಎಂದು ವಿವರಿಸಿದರು.