- ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸದನದಲ್ಲಿ ವಾಗ್ವಾದ
- ಬಿಜೆಪಿ ಶಾಸಕನ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ
ವಿಧಾನಮಂಡಲ ಅಧಿವೇಶನದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವೆ ವಾಗ್ವಾದ ನಡೆಯಿತು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವರ್ಗಾವಣೆಯಲ್ಲಿ ವ್ಯಾಪಾರ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಆಗ ಕುರ್ಚಿಯಿಂದ ಎದ್ದ ಡಿ ಕೆ ಶಿವಕುಮಾರ್, ಏ.. ಕೂತ್ಕೋಳಯ್ಯಾ ಎಂದು ಏಕವಚನದಲ್ಲೇ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
“ಸಿಎಂ ಹುದ್ದೆ 2,500 ಕೋಟಿ ರೂ. ಮಂತ್ರಿ ಹುದ್ದೆನೂ ಸಾವಿರ ಕೋಟಿ ಎಂದು ಹೇಳುತ್ತಿದ್ದವರು ನೀವು. ಏ.. ಕುತ್ಕೋಳಯ್ಯ ಕಂಡಿದ್ದೀನಿ. ಏನೇನು ಮಾತಾಡಿದ್ದೀರಿ, ಏನೇನು ಕಥೆ ಎನ್ನುವ ಹಿಸ್ಟರಿ ನಮ್ಮತ್ರ ಇದೆ. ಅರ್ಥ ಆಯಿತಾ. ಆವಾಗ ನಿಮ್ಮ ಸಿಎಂ ಸುಮ್ಮನಿದ್ದರೆಂದು ನಾವು ಸುಮ್ಮನಿರಕ್ಕೆ ತಯಾರಿಲ್ಲ. ನಿನ್ ಮಾತ್ ಮೇಲೆ, ನಾಲಿಗೆ ಮೇಲೆ ಹಿಡಿತವಿರಬೇಕು. ಆವತ್ತು ಅವರು ಸುಮ್ಮನಿದ್ದರು. ನನ್ನಂತವನಾಗಿದ್ದರೆ ಆವತ್ತೇ 24 ಗಂಟೆಯಲ್ಲಿ ಪಾರ್ಟಿಯಿಂದ ಡಿಸ್ಮಿಸ್ ಮಾಡುತ್ತಿದ್ದೆ. ನಿಮ್ಮಂತರಿಂದಲೇ ಇವತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವುದು ಎಂದು ಡಿ.ಕೆ. ಶಿವಕುಮಾರ್ ಗುಡುಗಿದರು.
ಈ ವೇಳೆ ಆಕ್ರೋಶಗೊಂಡ ಬಸನಗೌಡ ಪಾಟೀಲ್ ಯತ್ನಾಳ್, “ನೀವು ಭ್ರಷ್ಟ ಬಂಡೆ.. ನಾನೇಕೆ ಹೆದರಬೇಕು. ನಿಮ್ಮಂತಹ ಪಕ್ಷಕ್ಕೆ ನಾನು ಏಕೆ ಬರುತ್ತಿದ್ದೆ ಹೇಳಿ. ನನ್ನ ಉಚ್ಛಾಟನೆ ಮಾಡಲು ಇವನ್ಯಾರು, ಹೂ ಇಸ್ ದಿಸ್” ಎಂದು ಸಿಟ್ಟಿನಿಂದಲೇ ಪ್ರಶ್ನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಅದಕ್ಕೇ ನಾನು ಈ ಕಡೆ ಬಂದು ಕುಳಿತಿರೋದು ಎಂದು ಹೇಳಿದರು. ಆಗ ಏನ್ ಮಾಡ್ತಾರೋ ನೋಡೇ ಬಿಡೋಣ ಎಂದು ಯತ್ನಾಳ್ ಸಿಟ್ಟಿಗೆದ್ದರು. ಅದಲ್ಲದೇ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕೆಂದು ಯತ್ನಾಳ್ ಸೇರಿ ಬಿಜೆಪಿ ಶಾಸಕರು ಬಾವಿಗಿಳಿದು ಧರಣಿ ಶುರು ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಕಾದ ಅಧಿಕಾರಿಯನ್ನು ಹಾಕಲಿ. ನೋಡೇ ಬಿಡೋಣ ಎಂದು ಸವಾಲು ಹಾಕಿದರು. ಅದಲ್ಲದೇ ಅಧಿಕಾರ ಶಾಶ್ವತವಲ್ಲ. ಲೂಟಿ ಮಾಡ್ತಿದೀರಾ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ವೇಳೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೂಟಿ ಮಾಡುತ್ತಿರುವುದಕ್ಕೆ ನೀವು ಅಧಿಕಾರ ಕಳೆದುಕೊಂಡು ಅಲ್ಲಿ ಹೋಗಿ ಕೂತಿರೋದು ಎಂದು ಕಿಡಿಕಾರಿದರು.
ಈ ಹಿನ್ನೆಲೆ ಸಚಿವ ಬೈರತಿ ಸುರೇಶ್ ಅವರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಸದನದಲ್ಲಿ ಆಡಳಿತ, ವಿಪಕ್ಷಗಳ ನಡುವೆ ತೀವ್ರ ವಾಗ್ವಾದದ ಹಿನ್ನೆಲೆ ವಿಧಾನಸಭೆ ಕಲಾಪವನ್ನು ಸ್ಪೀಕರ್ ಯುಟಿ ಖಾದರ್ ಹತ್ತು ನಿಮಿಷ ಮುಂದೂಡಿದರು.
ಗದ್ದಲಕ್ಕೆ ಕಾರಣವೇನು? ಯಾವುದೇ ಪ್ರಕರಣವಿರಲಿ, ಸರ್ಕಾರ ಯಾರ ರಕ್ಷಣೆಗೂ ಮುಂದಾಗುವುದಿಲ್ಲ: ಸದನಕ್ಕೆ ಸಿಎಂ ಭರವಸೆ
“ವಿಜಯಪುರ ಮಹಾನಗರ ಪಾಲಿಕೆಗೆ ವಲಯ ಆಯುಕ್ತರಿಗಿಂತ ಕಡಿಮೆ ಗ್ರೇಡ್ನ ಅಧಿಕಾರಿಯನ್ನು ಆಯುಕ್ತರನ್ನಾಗಿ ನಿಯೋಜನೆ ಮಾಡಿದ್ದಾರೆ. ನಮ್ಮ ಸರ್ಕಾರ ಇದ್ದಾಗ ವರ್ಗಾವಣೆ ದಂಧೆ ಮಾಡಿಲ್ಲ. ಹಿಂದಿನ ಆಯುಕ್ತರನ್ನೇ ಮುಂದುವರಿಸಬೇಕು. ಇದೇನು ವರ್ಗಾವಣೆ ದಂಧೆನಾ?” ಎಂದು ಶೂನ್ಯವೇಳೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು.
“ಅದಲ್ಲದೇ ಅನರ್ಹ ಅಧಿಕಾರಿಯನ್ನು ವಿಜಯಪುರ ಪಾಲಿಕೆಗೆ ಆಯುಕ್ತರನ್ನಾಗಿ ಮಾಡಿದ್ದೀರಿ, ಇದು ವ್ಯಾಪಾರವಲ್ಲದೇ ಮತ್ತೇನು” ಎಂದು ಆರೋಪಿಸಿದರು. ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ, ನೀವು ಈ ಮನೆಯ ಹಿರಿಯ ಸದಸ್ಯರು, ನಿಯಮಗಳನ್ನು ಓದಿಕೊಂಡು ಬಂದು ಮಾತಾಡಿ ಎಂದು ಆಡಳಿತ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಗದ್ದಲ ಪ್ರಾರಂಭವಾಯಿತು.