ಸ್ವತಂತ್ರ ಪೂರ್ವದಲ್ಲಿದ್ದ ಅಮಾನುಷ ಜಾತಿ ಪದ್ಧತಿಗೆ ಕೊನೆಯಾಡಿದ 60 ದಲಿತ ಸಮುದಾಯದವರು ಮೇಲ್ಜಾತಿಯವರ ಬೀದಿಯಲ್ಲಿ ತಮ್ಮ ಜೀವಮಾನದಲ್ಲಿ ಇದೇ ಮೊದಲ ಬಾರಿಗೆ ಚಪ್ಪಲಿ ಧರಿಸಿ ನಡೆದಾಡಿದ ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ರಾಜಾವೂರ್ ಗ್ರಾಮದಲ್ಲಿ ಡಿ.24ರಂದು ನಡೆದಿದೆ.
60 ದಲಿತರು ರಾಜಾವೂರ್ ಗ್ರಾಮದ ಮೇಲ್ಜಾತಿಯವರು ವಾಸಿಸುವ ಕಂಬಳ ನಾಯ್ಕನ್ ಬೀದಿಯಲ್ಲಿ ಪಾದರಕ್ಷೆಗಳನ್ನು ಧರಿಸಿ ನೆಡದಾಡಿದರು. ಈ ರೀತಿ ಮಾಡುವುದರಿಂದ ಗ್ರಾಮದ ಮೇಲ್ಜಾತಿ ಬೀದಿಯಲ್ಲಿ ದಲಿತ ಸಮುದಾಯದವರು ಚಪ್ಪಲಿ ಧರಿಸಿ ಓಡಾಡಬಾರದು ಎಂಬ ಅಲಿಖಿತ ನಿಯಮವನ್ನು ಮುರಿದಿದ್ದಾರೆ.
ರಾಜಾವೂರ್ ಗ್ರಾಮದ ಕಂಬಳ ನಾಯ್ಕನ್ ಬೀದಿಯಲ್ಲಿ ಪರಿಶಿಷ್ಟ ಸಮುದಾಯದವರಿಗೆ ಸೈಕಲ್ನಲ್ಲಿ ಹೋಗಲು ಕೂಡ ನಿರಾಕರಿಸಲಾಗುತ್ತಿತ್ತು. 900 ಮನೆಗಳಿರುವ ಈ ಗ್ರಾಮದಲ್ಲಿ 800 ಕ್ಕೂ ಹೆಚ್ಚು ಮಂದಿ ಗೌಂಡರ್ ಹಾಗೂ ನಾಯ್ಕರ್ ಸಮುದಾಯದವರು ವಾಸಿಸುತ್ತಿದ್ದಾರೆ. 60 ಮಂದಿ ದಲಿತ ಸಮುದಾಯದವರು 300 ಮೀಟರ್ ಉದ್ದದ ಬೀದಿಯಲ್ಲಿ ನಡೆದಾಡಿ ನೂರಾರು ವರ್ಷಗಳಿಂದ ಜಾರಿಯಲ್ಲಿದ್ದ ಜಾತಿ ದೌರ್ಜನ್ಯ ಪದ್ಧತಿಗೆ ಕೊನೆಯಾಡಿದ್ದಾರೆ.
ಅದೇ ಬೀದಿಯ ನಿವಾಸಿಯಾದ 51 ವರ್ಷದ ಎ ಮುರುಗಾನಂದಂ, “ಮೇಲ್ಜಾತಿ ಸಮುದಾಯದವರು ಈ ಬೀದಿಯಲ್ಲಿ ಚಪ್ಪಲಿಯೊಂದಿಗೆ ನಡೆಯುವುದನ್ನು ನಿರ್ಬಂಧಿಸಿದ್ದರು. ದಲಿತ ಸಮುದಾಯದವರಿಗೆ ಕೊಲೆ ಬೆದರಿಕೆ ಹಾಕಲಾಗಿದ್ದು, ಹಲ್ಲೆ ಕೂಡ ಮಾಡಲಾಗಿದೆ. ಮೇಲ್ಜಾತಿ ಮಹಿಳೆಯರೂ ಪರಿಶಿಷ್ಟ ಜಾತಿ ಸಮುದಾಯದವರಿಗೆ ತಮ್ಮ ಬೀದಿಯಲ್ಲಿ ಚಪ್ಪಲಿ ಹಾಕಿಕೊಂಡು ನಡೆದರೆ ಸಾವು ಉಂಟಾಗುತ್ತದೆ ಎಂದು ಬೆದರಿಕೆ ಹಾಕಿದರು. ಓಡಾಡಿದವರ ಮೇಲೆ ಹಲವು ಬಾರಿ ಹಲ್ಲೆಯನ್ನು ನಡೆಸಲಾಗಿದೆ. ನಾವು ಈ ಬೀದಿಯಲ್ಲಿ ನಡೆದಾಡದೆ ದಶಕಗಳಿಂದ ದಬ್ಬಾಳಿಕೆಯಲ್ಲಿ ಬದುಕುತ್ತಿದ್ದೇವೆ. ಕೆಲವು ವಾರಗಳ ಹಿಂದೆ ನಾವು ಈ ಸಮಸ್ಯೆಯನ್ನು ದಲಿತ ಸಂಘಟನೆಗಳ ಗಮನಕ್ಕೆ ತಂದಿದ್ದೇವೆ.” ಎಂದು ತಮ್ಮ ನೋವನ್ನು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
“ಸ್ವಾತಂತ್ರ್ಯದ ನಂತರ ಅಸ್ಪೃಶ್ಯತೆ ನಿಷೇಧಿಸಿದಾಗ, ಪ್ರಬಲ ಜಾತಿಯವರು ಅಸ್ಪೃಶ್ಯತೆ ಆಚರಣೆಯನ್ನು ಮುಂದುವರಿಸಲು ಒಂದು ಕಥೆಯನ್ನು ಹೆಣೆದರು. ವೂಡೂ ಗೊಂಬೆಯನ್ನು ಬೀದಿಯಲ್ಲಿ ಹೂಳಲಾಗಿದೆ. ದಲಿತ ಸಮುದಾಯದವರು ಚಪ್ಪಲಿ ಹಾಕಿಕೊಂಡು ತಮ್ಮ ಬೀದಿಯಲ್ಲಿ ನಡೆದಾಡಿದರೆ ಮೂರು ತಿಂಗಳೊಳಗೆ ಸಾಯುತ್ತಾರೆ ಎಂದು ಹೇಳಿದ್ದರು. ಇದರಿಂದ ಕೆಲವು ದಲಿತ ಸಮುದಾಯದವರು ಮೇಲ್ಜಾತಿಯ ಕಥೆಗಳನ್ನು ನಂಬಿ ಚಪ್ಪಲಿಯಿಲ್ಲದೆ ನಡೆಯಲು ಪ್ರಾರಂಭಿಸಿದರು. ಈ ಅನಿಷ್ಟ ಪದ್ಧತಿ ಇಂದಿಗೂ ಮುಂದುವರೆದಿದೆ” ಮತ್ತೊಬ್ಬ ದಲಿತ ಸಮುದಾಯದ ಮುಖಂಡರೊಬ್ಬರು ತಿಳಿಸಿದರು.
ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನಾ ರಂಗದ (ತಿರುಪ್ಪೂರ್) ಕಾರ್ಯದರ್ಶಿ ಸಿ.ಕೆ. ಕನಕರಾಜ್ ಅವರು ಕಳೆದ ವಾರ ಗ್ರಾಮಕ್ಕೆ ಭೇಟಿ ನೀಡಿ ದಲಿತರು ಚಪ್ಪಲಿ ಧರಿಸಿ ಈ ನಿರ್ದಿಷ್ಟ ರಸ್ತೆಯಲ್ಲಿ ಪ್ರವೇಶಿಸದಿರುವುದನ್ನು ತಿಳಿದುಕೊಂಡರು.
ಇದಕ್ಕಾಗಿ ಸಂಘಟನೆಯು ಪ್ರತಿಭಟನೆ ಆರಂಭಿಸಲು ಬಯಸಿತು. ಆದರೆ ಪೊಲೀಸರು ಅನುಮತಿ ನಿರಾಕರಿಸಿ ಮುಂದೂಡುವಂತೆ ಹೇಳಿದರು. ತರುವಾಯ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ), ವಿಡುದಲೈ ಚಿರುತೈಗಲ್ ಕಚ್ಚಿ ಮತ್ತು ದಲಿತರ ಹಕ್ಕುಗಳ ಸಂಘಟನೆಯಾದ ಆತಿ ತಮಿಜರ್ ಪೆರವೈ ಮುಂತಾದ ರಾಜಕೀಯ ಪಕ್ಷಗಳ ಪದಾಧಿಕಾರಿಗಳೊಂದಿಗೆ ಈ ಬೀದಿಯಲ್ಲಿ ಚಪ್ಪಲಿ ಹಾಕಿಕೊಂಡು ನಡೆದಾಡಲು ನಿರ್ಧರಿಸಿದರು.
ಡಿ.24 ರಂದು 60 ಸದಸ್ಯರ ಗುಂಪು ಮೇಲ್ಜಾತಿ ಬೀದಿಯಲ್ಲಿ ನಡಿಗೆ ಪ್ರಾರಂಭಿಸಿ ಗ್ರಾಮದ ಹೊರಗಿರುವ ರಾಜಕಾಳಿಯಮ್ಮನ ದೇವಸ್ಥಾನವನ್ನು ಪ್ರವೇಶಿಸಿತು.