ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಜೀವನಗಾಥೆ ಕುರಿತ ‘800’ ಸಿನಿಮಾ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್ ದಂತಕತೆ ಮತ್ತಯ್ಯ ಮುರಳೀಧರನ್, ಶ್ರೀಲಂಕಾದಲ್ಲಿ ನಡೆಯುತ್ತಿರುವ ಸಿಂಹಳೀಯರು ಹಾಗೂ ತಮಿಳರ ಸಂಘರ್ಷದ ಬಗ್ಗೆ ಮಾತನಾಡಿದರು.
“ಭಾರತ ಹಾಗೂ ನಿರ್ದಿಷ್ಟವಾಗಿ ತಮಿಳುನಾಡಿನ ಸರ್ಕಾರಗಳು ಶ್ರೀಲಂಕಾದ ಅಂತರ್ಯುದ್ಧದ ಸಮಯದಲ್ಲಿ ಜನಾಂಗೀಯ ಸಂಘರ್ಷವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ಶ್ರೀಲಂಕಾದಲ್ಲಿನ ಸಮಸ್ಯೆ ಭಾರತಕ್ಕೆ ಅರ್ಥವಾಗಲೇ ಇಲ್ಲ. ಇದು ನನ್ನ ಪ್ರಾಮಾಣಿಕ ಉತ್ತರ. ನಾನು ಇದನ್ನು ಹೇಳಲು ಹೆದರುವುದಿಲ್ಲ. ಭಾರತ ಎಂದರೆ ನಾನು ಕೇಂದ್ರ ಸರ್ಕಾರಕ್ಕೆ ಹೇಳುತ್ತಿಲ್ಲ, ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ನಿಜವಾದ ಸಮಸ್ಯೆ ಏನೆಂದು ಅರ್ಥವಾಗಲಿಲ್ಲ. ಏಕೆಂದರೆ, ಶ್ರೀಲಂಕಾದಲ್ಲಿನ ತಮಿಳು ಸಮುದಾಯವು ತುಂಬಾ ವಿಭಿನ್ನವಾಗಿದೆ. ಅಲ್ಲಿನ ತಮಿಳು ಸಮುದಾಯದಲ್ಲಿ ಹಲವಾರು ಉಪಗುಂಪುಗಳಿವೆ” ಎಂದು ಮತ್ತಯ್ಯ ಮುರಳೀಧರನ್ ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ಪೂರ್ವಜರು ಶ್ರೀಲಂಕಾಕ್ಕೆ ವಲಸೆ ಹೋದ ಬಗ್ಗೆಯೂ ಮಾತನಾಡಿದರು. “ನನ್ನ ಅಜ್ಜ ಭಾರತದ ತಮಿಳುನಾಡು ಮೂಲದವರು. 1920 ರ ದಶಕದಲ್ಲಿ ಅವರು ಚಹಾ ತೋಟಗಳಿಗೆ ಕೆಲಸ ಮಾಡಲು ಹೋದರು. ಬ್ರಿಟಿಷರು ನಮ್ಮನ್ನು ಬಲವಂತವಾಗಿ ಅಲ್ಲಿಗೆ ಕರೆದೊಯ್ದರು. ಆದ್ದರಿಂದಲೇ ನಮ್ಮ ಕುಟುಂಬ ಹಾಗೂ ಸಮುದಾಯದವರು ಮಧ್ಯ ಶ್ರೀಲಂಕಾದಲ್ಲಿ ನೆಲೆ ಕಂಡುಕೊಂಡರು. ಅಲ್ಲಿನವರು ನಮ್ಮನ್ನು ಭಾರತೀಯ ಮೂಲದ ತಮಿಳರು ಎನ್ನುತ್ತಾರೆ. ಭಾರತೀಯರು ನಮ್ಮನ್ನು ಶ್ರೀಲಂಕಾ ತಮಿಳರು ಎಂದು ಸಂಬೋಧಿಸುತ್ತಾರೆ. ನಮ್ಮ ಭಾಷೆಯಲ್ಲಿಯೂ ಸ್ವಲ್ಪ ವ್ಯತ್ಯಾಸವಿದೆ. ಆದರು ನಮ್ಮ ಭಾಷೆ ತಮಿಳು” ಎಂದು ತಿಳಿಸಿದರು.
ಸಿಂಹಳೀಯರ ಮೂಲ ಬಿಹಾರ
“ಕೆಲವರು ಶ್ರೀಲಂಕಾದಲ್ಲಿ ಒಂದು ಭಾಗವನ್ನು ಪ್ರತ್ಯೇಕಿಸಿ ಪ್ರತ್ಯೇಕ ದೇಶವನ್ನುಕಟ್ಟಲು ಬಯಸಿದ್ದರು. ಆದರೆ ನಮಗೆ ಪ್ರತ್ಯೇಕ ದೇಶ ಬೇಕಾಗಿಲ್ಲ. ನಾವು ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬಾಳಲು ಬಯಸಿದ್ದೇವೆ. ಭಾರತದಲ್ಲಿನ ಕೆಲವು ರಾಜಕಾರಣಿಗಳು ತಮ್ಮ ದೇಶದ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲಿಲ್ಲ. ನನ್ನನ್ನು ಒಳಗೊಂಡು ಹಲವರನ್ನು ‘ಜನಾಂಗದ ದ್ರೋಹಿ’ ಎಂದು ತೆಗಳಿದರು. ಅಲ್ಲದೆ ಕೆಲವು ಪ್ರಮುಖರು ನಾನು ತಮಿಳರ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲವೆಂದು ನಾನು ಸರ್ಕಾರದ ಪರವೆಂದು ನನ್ನನ್ನು ದ್ವೇಷಿಸಿದರು” ಎಂದು ಸ್ಪಿನ್ ಮಾಂತ್ರಿಕ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರೋಹಿತ್ ಶರ್ಮಾ ನಂತರ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು?
“ಹಾಗೆ ನೋಡಿದರೆ ಶ್ರೀಲಂಕಾದ ಸಿಂಹಳೀಯರೂ ಭಾರತದ ಬಿಹಾರದವರು. ತಮಿಳುನಾಡಿನಲ್ಲಿ ನಮ್ಮ ಪೂರ್ವಜರು ಸಾಕಷ್ಟಿದ್ದಾರೆ. ಆದರೆ ಸುನಾಮಿ ಸಂದರ್ಭದಲ್ಲಿ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಸೇರಿದಂತೆ ಹಲವರು ನಮಗೆ ಮಾಡಿದ ಸಹಾಯವನ್ನು ಮರೆಯಲಾರೆ. ಎಲ್ಲ ಮಹನೀಯರ ನೆರವಿನಿಂದ ನಾನು ಟ್ರಸ್ಟ್ ಸ್ಥಾಪಿಸಿದ್ದು, ಪ್ರತೀ ವರ್ಷವೂ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದೇನೆ” ಎಂದರು.
1995ರಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಅಂಪೈರ್ನಿಂದ ಚಕಿಂಗ್ ವಿವಾದ ಎದುರಿಸಿದ ಸಮಸ್ಯೆಯನ್ನು ನೆನಪಿಸಿಕೊಂಡ ಮುರಳೀಧರನ್, “ಆಗ ಶ್ರೀಲಂಕಾ, ಭಾರತ ಸೇರಿ ಹಲವು ರಾಷ್ಟ್ರಗಳ ಅಭಿಮಾನಿಗಳು, ಕ್ರಿಕೆಟ್ ದಿಗ್ಗಜರು ನನ್ನ ಬೆಂಬಲಕ್ಕೆ ನಿಂತಿದ್ದರು. ಈ ಸಹಾಯ ಎಂದಿಗೂ ಮರೆಯಲಾರೆ” ಎಂದರು.