ಖ್ಯಾತ ಚಿತ್ರ ನಿರ್ದೇಶಕ ರಾಮಗೋಪಾಲ್ ವರ್ಮಾ ನಿರ್ದೇಶನದ ಇತ್ತೀಚಿನ ಚಿತ್ರ ‘ವ್ಯೂಹಂ’ ವಿವಾದಕ್ಕೆ ಕಾರಣವಾಗುತ್ತಿದೆ. ಈ ಚಿತ್ರದಲ್ಲಿ ತಮ್ಮ ನೆಚ್ಚಿನ ನಾಯಕರನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂದು ಟಿಡಿಪಿ ಮತ್ತು ಜನಸೇನಾ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಹೈದರಾಬಾದ್ ನಗರದ ರಾಮ್ಗೋಪಾಲ್ ವರ್ಮಾ ಅವರ ಕಚೇರಿ ಎದುರು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ಕಾರ್ಯಕರ್ತರು ಈ ಸಂದರ್ಭದಲ್ಲಿ ವ್ಯೂಹಂ ಚಿತ್ರದ ಪೋಸ್ಟರ್ಗಳು ಮತ್ತು ಆರ್ಜಿವಿ ಪ್ರತಿಕೃತಿಯನ್ನು ದಹಿಸಿ ಸಿನಿಮಾವನ್ನು ನಿಷೇಧಿಸುವಂತೆ ರಾಮ್ ಗೋಪಾಲ್ ವರ್ಮಾ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ಪಡೆದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಿದರು.
ಆಂಧ್ರಪ್ರದೇಶ ಸಿಎಂ ಮತ್ತು ವೈಎಸ್ಆರ್ಸಿಪಿ ನಾಯಕ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ರಾಜಕೀಯ ಹಿನ್ನೆಲೆಯನ್ನು ಆಧರಿಸಿ ಆರ್ಜಿವಿ ‘ವ್ಯೂಹಂ’ ಚಿತ್ರ ಮಾಡಿದ್ದಾರೆ ಎಂದು ತಿಳಿದಿದೆ. ವೈಎಸ್ ಆರ್ ನಿಧನದ ನಂತರ ಜಗನ್ ಅವರ ರಾಜಕೀಯ ಜೀವನದ ವಿದ್ಯಮಾನಗಳನ್ನು ಆರ್ಜಿವಿ ಈ ಚಿತ್ರದಲ್ಲಿ ತೋರಿಸಲಿದ್ದಾರಂತೆ. ಆದರೆ, ಈ ಚಿತ್ರದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ಡಿಸೆಂಬರ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಟಿಡಿಪಿ ಮತ್ತು ಜನಸೇನಾ ಪಡೆಗಳು ಆರ್ಜಿವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ತಮ್ಮ ನೆಚ್ಚಿನ ನಾಯಕರಿಗೆ ಅವಮಾನ ಮಾಡಿದರೆ ಸುಮ್ಮನೆ ನಿಲ್ಲುವುದಿಲ್ಲ ಎಂದು ಎಚ್ಚರಿಸುತ್ತಿದ್ದಾರೆ.
ತಮ್ಮ ಕಚೇರಿ ಎದುರು ನಡೆದ ಧರಣಿ ಬಗ್ಗೆ ರಾಮ್ಗೋಪಾಲ್ ವರ್ಮಾ ಪ್ರತಿಕ್ರಿಯಿಸಿದ್ದು, ‘ನಿಮ್ಮ ನಾಯಿಗಳು ನನ್ನ ಆಫೀಸ್ ಮುಂದೆ ಬೊಗಳುತ್ತಿದ್ದವು. ಪೊಲೀಸರು ಬಂದಾಗ ಓಡಿ ಹೋದವು’ ಎಂದು ಚಂದ್ರಬಾಬು ನಾಯ್ಡು, ನರಾ ಲೋಕೇಶ್ ಮತ್ತು ಪವನ್ ಕಲ್ಯಾಣ್ ಅವರಿಗೆ ಟ್ಯಾಗ್ ಮಾಡಿದ್ದಾರೆ.