ಪೋಕ್ಸೋ ಪ್ರಕರಣದಲ್ಲಿ ಶಿಕ್ಷಕನೊಬ್ಬನನ್ನು ಬಂಧಿಸಲಾಗಿದ್ದ ಸರ್ಕಾರಿ ಶಾಲೆಯ 18 ವಿದ್ಯಾರ್ಥಿಗಳು ನಿರಂತರವಾಗಿ ತರಗತಿಗೆ ಗೈರು ಹಾಜರಾಗುತ್ತಿದ್ದಾರೆ. ಆದರೂ, ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವಲ್ಲಿ ಶಿಕ್ಷಕರು ವಿಫಲರಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರ ಮನವೊಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತುಮಕೂರು ಜಿಲ್ಲೆಯ ಗೇರಹಳ್ಳಿ ನಿವಾಸಿಗಳು ಆರೋಪಿಸಿದ್ದಾರೆ.
ಗೇರಹಳ್ಳಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 125ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ, 18 ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ. ಯಾವುದೇ ವಿದ್ಯಾರ್ಥಿ ಏಳು ದಿನಗಳ ಕಾಲ ನಿರಂತರವಾಗಿ ಶಾಲೆಗೆ ಗೈರಾದರೆ ಅವರ ಮನೆಗೆ ಶಿಕ್ಷಕರು ಭೇಟಿ ನೀಡಿ, ವಿಚಾರಿಸಿ ವಿದ್ಯಾರ್ಥಿಯನ್ನು ಶಾಲೆಗೆ ಕರೆತರಬೇಕು ಎಂಬ ನಿಯಮವಿದೆ. ಆದರೂ, ಅಲ್ಲಿನ ಶಿಕ್ಷಕರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿನಿಯರ ಪೋಷಕರು ಕ್ಷೇತ್ರ ಶಿಕ್ಷಣಾಧಾಕಾರಿಗೆ ದೂರು ನೀಡಿದ್ದರು. ಇಇಒ ಸಮತಿಯೊಂದನ್ನು ರಚಿಸಿ, ತನಿಖೆಗೆ ಆದೇಶಿಸಿದ್ದರು.
ತನಿಖೆ ನಡೆಸಿದ್ದ ಸಮಿತಿ ವರದಿ ನೀಡಿತ್ತು. ವರದಿ ಆಧರಿಸಿ, ಆರೋಪಿತ ಶಿಕ್ಷಕನನ್ನು ಅಮಾನತುಗೊಳಿಸಲಾಗಿತ್ತು. ಆತನ ವಿರುದ್ಧ ಪೋಕ್ಟೋ ಪ್ರಕರಣ ದಾಖಲಿಸಿದ್ದ ಪೊಲೀಸರು 2023 ಸೆಪ್ಟೆಂಬರ್ 23ರಂದು ಬಂಧಿಸಿದ್ದರು.
ಆ ಬೆನ್ನಲ್ಲೇ ಶಾಲೆಗೆ ದಸರಾ ರಜೆ ಕೂಡ ನೀಡಲಾಗಿತ್ತು. ಈಗ, ದಸರಾ ರಜೆ ಮುಗಿದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ, ಕೆಲವು ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿಲ್ಲ. ಶಿಕ್ಷಕರ ಮೇಲಿನ ಅಸಹನೆಯಿಂದ ಕೆಲವು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ ಈಗಿರುವ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು. ಹೊಸ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕು. ಆಗ ಮಾತ್ರವೇ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆಂದು ಕೆಲವು ಪೋಷಕರು ಹೇಳುತ್ತಿದ್ದಾರೆ ಎಂದು ‘ಪಿವಿ‘ ವರದಿ ಮಾಡಿದೆ.
“ಕೆಲವು ವಿದ್ಯಾರ್ಥಿಗಳು ವೈಯಕ್ತಿಕ ಕಾರಣಗಳಿಂದಾಗಿ ಶಾಲೆ ಗೈರಾಗಿದ್ದಾರೆ. ಅಂತಹ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ಪೋಷಕರೊಂದಿಗೆ ಮಾತನಾಡಿದ್ದೇವೆ. ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ನಡೆಯುತ್ತಿದೆ” ಎಂದು ಶಾಲೆಯ ಮುಖ್ಯ ಶಿಕ್ಷಕಿ ನೂರ್ ಜಾನ್ ತಿಳಿಸಿದ್ದಾರೆ.