ಅಕಾಲಿಕ ಮಳೆಯಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರು ಬೇಸಿಗೆ ಅರವರಿಸಿದೆ. ತಂಪಿನ ನಗರಿ ಎಂದು ಖ್ಯಾತಿ ಗಳಿಸಿದ್ದ ಬೆಂಗಳೂರು, ಈಗ ಬಿಸಿಲ ನಾಡಾಗಿ ಬದಲಾಗುತ್ತಿದೆ. ಈ ಬಿಸಿಲ ಝಳಕ್ಕೆ, ತಾಪಮಾನ ಹೆಚ್ಚಳಕ್ಕೆ ನಗರದ ಜನರು ಸುಸ್ತಾಗಿದ್ದಾರೆ. ಬೆಳಿಗ್ಗೆ 9ಗಂಟೆ ಬಳಕ ಮನೆಯಿಂದ ಹೊರಗೆ ಓಡಾಡುವುದೇ ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ, ನಗರವು ಶೇ.66ರಷ್ಟು ತನ್ನ ಹಸಿರು ಹೊದಿಕೆಯನ್ನು ಕಳೆದುಕೊಂಡಿದೆ. ಅಲ್ಲದೇ, ಶೇ.74 ರಷ್ಟು ಜಲಮೂಲಗಳು ಕೂಡ ನಾಶವಾಗಿವೆ.
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ (ಸಿಇಎಸ್) ಪ್ರಕಾರ, ನಗರವು ಶೇ.584ರಷ್ಟು ನಿರ್ಮಾಣ ಪ್ರದೇಶಗಳನ್ನು ಕಂಡಿದೆ. ಈ ಬೇಸಿಗೆಯಲ್ಲಿ ನಗರ ಎಲ್-ನಿನೊ ಪರಿಣಾಮಕ್ಕೆ ಸಿಲುಕಿಕೊಂಡಿದೆ ಎನ್ನುತ್ತಾರೆ ತಜ್ಞರು.
ಇದೇ ಪರಿಸ್ಥಿತಿ ಮುಂದುವರಿದರೆ ಬೆಂಗಳೂರಿನ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. 2038ರ ವೇಳೆಗೆ, ಸಿಇಎಸ್ ಅರಣ್ಯಗಳು ಶೇ.0.65ಕ್ಕೆ (2022ರಲ್ಲಿ ನಡೆದಿದ್ದ ಕೊನೆಯ ಗಣತಿ ಪ್ರಕಾರ, ಇದು ಶೇ.3.32 ಇತ್ತು) ಕಡಿಮೆಯಾಗಬಹುದು ಎಂದು ಊಹಿಸಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ 2038ರ ವೇಳೆಗೆ ಸುಸಜ್ಜಿತ ಪ್ರದೇಶಗಳು ನಿರ್ಮಾಣವಾಗಬಹುದು. ಆದರೆ, ಪರಿಸ್ಥಿತಿ ಉತ್ತಮವಾಗಿರುವುದಿಲ್ಲ ಎಂದು ಸಿಇಎಸ್ ಅಧ್ಯಯನ ಹೇಳಿದೆ.
“ಸುಸಜ್ಜಿತ ಕಟ್ಟಡಗಳ ನಿರ್ಮಾಣ ಅಥವಾ ಸುಸಜ್ಜಿತ ಮೇಲ್ಮೈಗಳ ಹೆಚ್ಚಳ ಹಸಿರು ಸ್ಥಳಗಳಲ್ಲಿನ ಕಡಿತಕ್ಕೆ ಕಾರಣವಾಗುತ್ತದೆ. ಇದರಿಂದ ಬೆಂಗಳೂರಿನಲ್ಲಿ ಬಿಸಿಲಿನ ಶಾಖವು ಇನ್ನಷ್ಟು ಹೆಚ್ಚಳವಾಗಬಹುದು. ಈ ವರ್ಷ ಮಾರ್ಚ್ನಲ್ಲಿ 33.04 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಈಗ 41.4 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ” ಎಂದು ಸಿಇಎಸ್ ಅಧಿಕಾರಿ ಪ್ರೊ. ಟಿ.ವಿ ರಾಮಚಂದ್ರ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಖಾಸಗಿ ಬಸ್ ಕಂಡಕ್ಟರ್ಗಳ ಗಲಾಟೆ; ಪುರುಷ ನಿರ್ವಾಹಕನಿಗೆ ಚಪ್ಪಲಿ ತೋರಿಸಿದ ಲೇಡಿ ಕಂಡಕ್ಟರ್
“ನಗರದಲ್ಲಿರುವ ಕೆರೆಗಳು, ಹಸಿರು ಹೊದಿಕೆ ಕಡಿಮೆಯಾಗುತ್ತಿರುವುದು ವಾಯುಗುಣದ ಮೇಲೆ ಪರಿಣಾಮ ಬೀರಿದೆ. ಇದು ತಂಪಾದ ವಾತಾವರಣವನ್ನು ಕಡಿಮೆ ಮಾಡುತ್ತದೆ. ಬಿಸಿ ವಾತಾವರಣವನ್ನು ಹೆಚ್ಚಳ ಮಾಡುತ್ತದೆ. ನಗರ ಶಾಖ ಪರಿಣಾಮವು ಸುತ್ತುವರಿದ ತಾಪಮಾನ ಮತ್ತು ಆರ್ದ್ರತೆಯ ಮಟ್ಟವನ್ನು ಹೆಚ್ಚಿಸುತ್ತದೆ. ಪರಿಣಾಮ ಶಾಖದ ಒತ್ತಡ ಮತ್ತು ಶಾಖ-ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತವೆ” ಎಂದು ರಾಮಚಂದ್ರ ತಿಳಿಸಿದ್ದಾರೆ.