ಜ.22ರಂದು ಅಯೋಧ್ಯೆಯ ರಾಮಲಲ್ಲಾನನ್ನು ‘ರಮಾನಂದ ಪಂಥದ ಸಂಪ್ರದಾಯ’ದ ಪ್ರಕಾರ ಪ್ರಾಣ ಪ್ರತಿಷ್ಠಾಪನೆ ಮಾಡಲು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
“ರಾಮ ಮಂದಿರವು ರಮಾನಂದರ ಪಂಥಕ್ಕೆ ಸೇರಿದ್ದು, ಶೈವ ಶಾಕ್ತ ಮತ್ತು ಸನ್ಯಾಸಿಗಳದ್ದಲ್ಲ. ರಮಾನಂದರ ಸಂಪ್ರದಾಯದಂತೆಯೇ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ರಾಮನ ಮಂದಿರ ರಮಾನಂದರ ಸಂಪ್ರದಾಯದಂತೆ ಇರಲಿದೆ” ಎಂದು ರಾಮ ಜನ್ಮಭೂಮಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಉತ್ತರಾಖಂಡ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ, “ರಾಮಮಂದಿರದ ನಿರ್ಮಾಣ ಇನ್ನೂ ಪೂರ್ತಿಯಾಗಿಲ್ಲ. ಅದರ ನಡುವೆಯೇ ಪ್ರಾಣ ಪ್ರತಿಷ್ಠಾಪನೆ ನಡೆಸುತ್ತಿರುವುದು ಶಾಸ್ತ್ರಗಳಿಗೆ ವಿರುದ್ಧ” ಎಂದು ತಿಳಿಸಿದ್ದಾರೆ.
“We are not anti-Modi but we don’t want to be called anti-shastras too,” says Avimukteshwaranand Saraswati, head of #Uttarakhand’s Jyotir Math.
All four #Shankaracharyas will skip pran pratishtha of #RamLalla’s idol as consecration in incomplete temple is wrong.… pic.twitter.com/RGqOYFJiLp
— Hate Detector 🔍 (@HateDetectors) January 11, 2024
“ರಮಾನಂದ ಪಂಥದ ಸಂಪ್ರದಾಯದಂತೆ ಪ್ರಾಣ ಪ್ರತಿಷ್ಠಾಪನೆ ಮಾಡುವುದಕ್ಕೆ ದೇಶದ ಶಂಕರಾಚಾರ್ಯರ ಪೀಠದ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಶಂಕರಾಚಾರ್ಯರ ನಾಲ್ಕು ಪೀಠಗಳ ಪೈಕಿ ಮೂರು ಪೀಠದ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ” ಎಂದು ಉತ್ತರಾಖಂಡ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಈ ನಡುವೆ ಶೃಂಗೇರಿ ಶಾರದಾ ಪೀಠದ ಸ್ವಾಮೀಜಿ ಅವರಿಗೂ ಆಹ್ವಾನ ನೀಡಲಾಗಿದ್ದು, ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಮಠದ ಕಡೆಯಿಂದ ಬಂದಿಲ್ಲ.
ಇದನ್ನು ಓದಿದ್ದೀರಾ? ಅದು ಆರ್ಎಸ್ಎಸ್/ಬಿಜೆಪಿ ಕಾರ್ಯಕ್ರಮ: ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್ ನಿರ್ಧಾರ
“ರಮಾನಂದ ಪಂಥದ ಸಂಪ್ರದಾಯದಂತೆ ಪ್ರಾಣ ಪ್ರತಿಷ್ಠಾಪನೆ ಸೂಕ್ತವಲ್ಲ. ನಾವು ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿಗಳಲ್ಲ. ಆದರೆ ಧರ್ಮಕ್ಕೆ ವಿರುದ್ಧವಾಗಿ ರಾಮಲಲ್ಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಬಾರದು. ರಮಾನಂದ ಸಂಪ್ರದಾಯದ ಪ್ರಕಾರ ಮಾಡುವುದಾದರೆ ಚಂಪತ್ ರಾಯ್, ನೃಪೇಂದ್ರ ಮಿಶ್ರಾ ಟ್ರಸ್ಟ್ನ ಸ್ಥಾನಗಳಿಗೆ ರಾಜೀನಾಮೆ ನೀಡಲಿ. ಅಯೋಧ್ಯೆಯ ರಾಮಮಂದಿರವನ್ನು ರಮಾನಂದ ಸಂಪ್ರದಾಯದವರಿಗೆ ವಹಿಸಲಿ” ಎಂದು ಉತ್ತರಾಖಂಡ ಶಂಕರಾಚಾರ್ಯ ಪೀಠದ ಅವಿಮುಕ್ತೇಶ್ವರಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲ್ಲ ಎಂದಿರುವ ಕಾಂಗ್ರೆಸ್
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯು ಸ್ಪಷ್ಟವಾದ ಆರ್ಎಸ್ಎಸ್-ಬಿಜೆಪಿ ಕಾರ್ಯಕ್ರಮವಾಗಿದ್ದು, ತಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಿನ್ನೆ ಅಧಿಕೃತ ಹೇಳಿಕೆಯ ಮೂಲಕ ಸ್ಪಷ್ಟಪಡಿಸಿತ್ತು.
“ಧರ್ಮವು ವೈಯಕ್ತಿಕ ವಿಷಯವಾಗಿದೆ. ಆದರೆ ಆರ್ಎಸ್ಎಸ್ -ಬಿಜೆಪಿಯು ಅಯೋಧ್ಯೆಯ ದೇವಾಲಯವನ್ನು ಬಹಳ ಹಿಂದಿನಿಂದಲೂ ರಾಜಕೀಯ ಯೋಜನೆಯನ್ನಾಗಿ ಮಾಡಿಕೊಂಡು ಬಂದಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಅಪೂರ್ಣ ದೇವಾಲಯದ ಉದ್ಘಾಟನೆಯನ್ನು ಚುನಾವಣಾ ಲಾಭಕ್ಕಾಗಿ ಮಾಡಿಕೊಂಡಿರುವುದರಿಂದ ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದಿರಲು ಸ್ಪಷ್ಟವಾಗಿ ನಿರ್ಧರಿಸಲಾಗಿದೆ” ಎಂದು ಪಕ್ಷದ ಹಿರಿಯ ಮುಖಂಡ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದರು.