ಅಂದಿನ ʼಅನ್ನಭಾಗ್ಯʼ, ಇಂದಿನ ʼಗ್ಯಾರಂಟಿʼ; ಟೀಕೆಗಳು ಬದಲಾಗಿಲ್ಲ, ಬದಲಾಗೋದೂ ಇಲ್ಲ

Date:

ಭೌತಿಕ ಸಂಪನ್ಮೂಲಗಳ ಹಂಚುವಿಕೆಯನ್ನು ಸಂಪೂರ್ಣ ನಿರಾಕರಿಸುವ ಬಿಜೆಪಿಯ ಕೆಲವೇ ವರ್ಷಗಳ ಆಡಳಿತದ ದಿಶೆಯಿಂದ ಜನರ ತಕ್ಷಣದ ಅವಶ್ಯಕತೆಗಳನ್ನು ಪೂರೈಸುವ 5 ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ಏರಿಸಿವೆ. ಇವೆಲ್ಲ ಜನರನ್ನು ಸ್ವಾಲಂಬಿಗಳನ್ನಾಗಿಸುವುದಿಲ್ಲ. ಆದರೆ ಬದುಕಿ ಉಳಿಯುವುದೇ ಕಷ್ಟ ಎನ್ನುವ ಪರಿಸರದಲ್ಲಿ ಇವು ಕೂಡ ಜನರಿಗೆ ಆಸರೆಯಾಗುತ್ತವೆ

ರಾಜ್ಯ ಸರಕಾರದ 5 ಗ್ಯಾರಂಟಿಗಳು ಪರ-ವಿರೋಧ ಗುಂಪುಗಳನ್ನು ಸೃಷ್ಟಿಸಿವೆ. ನಾನು ಈ ಗ್ಯಾರಂಟಿಗಳ ಪರ ಇದ್ದರೂ ಇವನ್ನೊಂದು ಅಭಿವೃದ್ಧಿಯ ಆದರ್ಶ ಮಾದರಿಯೆಂದು ಪ್ರತಿಪಾದಿಸುವುದಿಲ್ಲ. ಏಕೆಂದರೆ ಜನರು ತಮ್ಮ ಮೂಲಸೌಕರ್ಯಗಳನ್ನು (ಊಟ, ವಸತಿ, ಶಿಕ್ಷಣ, ಆರೋಗ್ಯಗಳನ್ನು) ತಾವೇ ದುಡಿದು ಗಳಿಸುವುದು ಅಭಿವೃದ್ಧಿಯ ಆದರ್ಶ ಮಾದರಿ. ಜನರು ತಮ್ಮ ಮೂಲಸೌಕರ್ಯಗಳನ್ನು ದುಡಿದು ಗಳಿಸಬೇಕಾದರೆ ಅದಕ್ಕೆ ಪೂರಕವಾದ ಆರ್ಥಿಕ, ಸಾಮಾಜಿಕ, ರಾಜಕೀಯ ಪರಿಸರ ಬೇಕು. ದುಡಿದು ಗಳಿಸಬೇಕಾದರೆ ಭೂಮಿ ಅಥವಾ ಬಂಡವಾಳ ಅಥವಾ ಶಿಕ್ಷಣ, ಆರೋಗ್ಯಗಳಂತಹ ಆರ್ಥಿಕ ಪರಿಸರ ಬೇಕು. ಇವುಗಳೊಂದಿಗೆ ಜಾತಿ, ಲಿಂಗ, ಧರ್ಮ ತಾರತಮ್ಯಗಳನ್ನು ಅಲ್ಲಗೆಳೆಯುವ ಸಾಮಾಜಿಕ ಪರಿಸರ ಬೇಕು. ಪ್ರತಿಯೊಬ್ಬರು ತಮ್ಮ ಬದುಕನ್ನು ಪ್ರಭಾವಿಸುವ ನಿರ್ಣಯಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಯಾವುದೋ ಒಂದು ರೂಪದಲ್ಲಿ ಪಾಲುಗೊಳ್ಳುವ ರಾಜಕೀಯ ಪರಿಸರ ಇರಬೇಕು. ಇಂತಹ ಪರಿಸರ ನಿರ್ಮಿಸುವುದು ಚುನಾಯಿತ ಸರಕಾರಗಳ ಜವಾಬ್ದಾರಿ. ಇವೆಲ್ಲವನ್ನು ನಿರ್ಮಿಸಲು ದೂರದೃಷ್ಟಿ ಬೇಕು ಮತ್ತು ದೊಡ್ಡ ಪ್ರಮಾಣದ ಬಂಡವಾಳದ ವಿನಿಯೋಜನೆ ಬೇಕು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಈ ದೇಶ, ರಾಜ್ಯ, ಪ್ರದೇಶಕ್ಕೆ ಸೇರಿದ ನಾವೆಲ್ಲ ಒಂದೇ ಎನ್ನುವ ನಿಜವಾದ ಭಾವನೆ ಅಥವಾ ದೇಶ ಪ್ರೇಮ ಬೇಕು. ಹಾಗಾದಾಗ ಮಾತ್ರ ದೇಶ, ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ಯಾರಿಗೋ ಆಗುವ ಅನ್ಯಾಯ, ಅಸಮಾನತೆ, ಅಸಹಿಷ್ಣುತೆ ತನಗೇ ಆಗುವ ಅನ್ಯಾಯ, ಅಸಮಾನತೆ, ಅಸಹಿಷ್ಣುತೆಯೆಂದು ಪ್ರತಿಯೊಬ್ಬರೂ ಅನುಭವಿಸಲು ಸಾಧ್ಯವಾಗುವುದು.

ನಿಜವಾದ ಭಾವನೆ ಹಾಗೂ ಹುಸಿ ಭಾವನೆಗೂ ತುಂಬಾ ವ್ಯತ್ಯಾಸ ಇದೆ. ಕಲೆ, ಸಾಹಿತ್ಯ, ಸಂಗೀತ, ಭಾಷೆ, ಧ್ವಜ, ಧರ್ಮ ಇವೆಲ್ಲ ನಾವೆಲ್ಲ ಒಂದೇ ಎನ್ನುವ ಹುಸಿ ಭಾವನೆಯನ್ನು ಸೃಷ್ಟಿಸುವ ಸಾಧನಗಳು. ಈ ಹುಸಿ ಸಾಧನಗಳ ನೆಲೆಯಲ್ಲಿ ಒಂದಾಗುವ ಜನರು ನಿಜವಾಗಿ ನಾವೆಲ್ಲ ಒಂದೇ ಎನ್ನುವ ರೀತಿಯಲ್ಲಿ ಬದುಕಬೇಕಾದರೆ ಭೂಮಿ ಅಥವಾ ಬಂಡವಾಳ ಅಥವಾ ಗುಣಮಟ್ಟದ ಶಿಕ್ಷಣ, ಆರೋಗ್ಯಗಳು ಬೇಕು. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಧರ್ಮ, ಭಾಷೆ, ಕಲೆ, ಸಾಹಿತ್ಯ ಇತ್ಯಾದಿ ಸಾಂಸ್ಕೃತಿಕ ಸಂಪನ್ಮೂಲಗಳನ್ನು ಹಂಚಿಕೊಳ್ಳುವುದರ ಜೊತೆಗೆ ಭೂಮಿ, ಬಂಡವಾಳ, ಆರೋಗ್ಯ, ಶಿಕ್ಷಣಗಳನ್ನು ಕೂಡ ಹಂಚಿಕೊಳ್ಳುವ ಕಾರ್ಯಕ್ರಮಗಳು ಬೇಕು. ಸ್ವಾತಂತ್ರ್ಯ ನಂತರ ಈ ದೇಶವನ್ನು ಮುಕ್ಕಾಲು ಭಾಗ ಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್ ಪಕ್ಷ ಭೂಮಿ- ಬಂಡವಾಳ- ಶಿಕ್ಷಣ- ಆರೋಗ್ಯಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮಗಳಿಗೆ ಅಲ್ಪಸ್ವಲ್ಪ ಮಹತ್ವ ನೀಡಿತ್ತು. ಸಾಂಸ್ಕೃತಿಕ ಒಗ್ಗೂಡುವಿಕೆಗೆ ಕಾಂಗ್ರೆಸ್ ಪಕ್ಷ ಮಹತ್ವ ನೀಡುತ್ತಿಲ್ಲ ಎಂದು ಟೀಕಿಸುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಕೆಲವೊಂದು ಸಾಂಸ್ಕೃತಿಕ ಗುರುತುಗಳನ್ನು ಜನರ ಪ್ರಜ್ಞೆ ಮಾಡುವುದಕ್ಕೆ ನೀಡಿದ ಮಹತ್ವದ ಶೇ.1ರಷ್ಟು ಮಹತ್ವವನ್ನು ಭೌತಿಕ ಸಂಪನ್ಮೂಲಗಳನ್ನು ಹಂಚುವುದಕ್ಕೆ ನೀಡಿಲ್ಲ.

ಭೌತಿಕ ಸಂಪನ್ಮೂಲಗಳ ಹಂಚುವಿಕೆಯನ್ನು ಸಂಪೂರ್ಣ ನಿರಾಕರಿಸುವ ಬಿಜೆಪಿಯ ಕೆಲವೇ ವರ್ಷಗಳ ಆಡಳಿತದ ದಿಶೆಯಿಂದ ಜನರ ತಕ್ಷಣದ ಅವಶ್ಯಕತೆಗಳನ್ನು ಪೂರೈಸುವ 5 ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ಏರಿಸಿವೆ. ಇವೆಲ್ಲ ಜನರನ್ನು ಸ್ವಾಲಂಬಿಗಳನ್ನಾಗಿಸುವುದಿಲ್ಲ. ಆದರೆ ಬದುಕಿ ಉಳಿಯುವುದೇ ಕಷ್ಟ ಎನ್ನುವ ಪರಿಸರದಲ್ಲಿ ಇವು ಕೂಡ ಜನರಿಗೆ ಆಸರೆಯಾಗುತ್ತವೆ. ಜನರಿಗೆ ಉಸಿರಾಡಲು ಅವಕಾಶ ಮಾಡಿಕೊಡುವ ಇಂತಹ ಯೋಜನೆಗಳ ಬಗ್ಗೆ ಕೂಡ ಜನರಲ್ಲಿ ಸಾಕಷ್ಟು ಅಸಹನೆ ಇದೆ. ಇದಕ್ಕೆ ಬಹುಮುಖ್ಯ ಕಾರಣ ಮೇಲಿನ ಪ್ಯಾರಾದಲ್ಲಿ ಹೇಳಿದಂತೆ ನಾವು ಹುಸಿ ದೇಶಪ್ರೇಮವನ್ನು ಬೆಳೆಸುವುದಕ್ಕೆ ನೀಡಿದ ಶೇ.10ರಷ್ಟು ಮಹತ್ವವನ್ನು ನಿಜವಾದ ದೇಶಪ್ರೇಮ ಬೆಳೆಸುವುದಕ್ಕೆ ನೀಡಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದರಿಂದಾಗಿ ನಮ್ಮದೇ ಜನರ ಹಸಿವು, ಬಡತನ, ನಿರುದ್ಯೋಗ, ಶಿಕ್ಷಣ, ಆರೋಗ್ಯಗಳ ಕೊರತೆ ಇವೆಲ್ಲ ಸೌಲಭ್ಯಗಳು ಉಳ್ಳವರನ್ನು ಕಾಡುತ್ತಿಲ್ಲ. ಇದು ಇಂದಿನ ಸಮಸ್ಯೆಯಲ್ಲ. 2013ರಲ್ಲಿ ಅನ್ನಭಾಗ್ಯ ಯೋಜನೆ ಆರಂಭಿಸುವ ಸಂದರ್ಭದಲ್ಲೂ ಇಂದಿನ ಗ್ಯಾರಂಟಿಗಳ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳು ಬಂದಿದ್ದವು. ಈ ಯೋಜನೆ ಮಾತ್ರವಲ್ಲ ಬಡವರನ್ನು ಉದ್ದೇಶಿಸಿ ಸರಕಾರಗಳು ಜಾರಿಗೆ ತರುವ ಎಲ್ಲ ಯೋಜನೆಗಳ ವಿರುದ್ಧ ನಮ್ಮಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಆ ಸಂದರ್ಭದಲ್ಲಿ ಕೇಳಿ ಬರುತ್ತಿದ್ದ ಸಾಮಾನ್ಯ ಟೀಕೆಗಳು ಇಂತಿವೆ. ಇಂತಹ ಯೋಜನೆಗಳು ನಮ್ಮ ಸಂಪನ್ಮೂಲಗಳ ಬಹುಭಾಗವನ್ನು ತಿಂದು ಹಾಕುತ್ತಿವೆ. ಇವುಗಳ ಮೇಲೆ ಖರ್ಚು ಮಾಡುವುದು ವ್ಯರ್ಥ. ಏಕೆಂದರೆ ವ್ಯಾಪಕ ಲಂಚಗುಳಿತನ ಇರುವುದರಿಂದ ಇವೆಲ್ಲ ಬಡಜನರಿಗೆ ತಲುಪುವುದೇ ಇಲ್ಲ. ಯುಪಿಎ ಹೋಗಿ ಎನ್‍ಡಿಎ ಬಂದ ಕೂಡಲೇ ಇಂತಹ ಯೋಜನೆಗಳು ನಿಲ್ಲುತ್ತವೆ. ಏಕೆಂದರೆ ಲೋಕಸಭೆ ಚುನಾವಣೆಯಲ್ಲಿ ಜನ ಇಂತಹ ಕಾರ್ಯಕ್ರಮಗಳನ್ನು ತಿರಸ್ಕರಿಸಿದ್ದಾರೆ. ಹೀಗೆ ಹತ್ತು ಹಲವು ಟೀಕೆಗಳು ಬಡತನ ನಿವಾರಣ ಕಾರ್ಯಕ್ರಮಗಳ ವಿರುದ್ಧ ಬರುತ್ತಲೇ ಇವೆ.

ವರ್ಲ್ಡ್‌ ಡೆವಲಪ್‍ಮೆಂಟ್ ರಿಪೋರ್ಟ್‍ನ ಕೆಲವು ಅಂಕಿಅಂಶಗಳನ್ನು ನೋಡಿದರೆ ಈ ಎಲ್ಲ ಟೀಕೆಗಳು ಸತ್ಯಕ್ಕೆ ಎಷ್ಟು ದೂರ ಎನ್ನುವುದು ಸುಲಭದಲ್ಲಿ ಅರ್ಥವಾಗಬಹುದು. ವರ್ಲ್ಡ್‌ ಡೆವಲಪ್‍ಮೆಂಟ್ ವರದಿ ಪ್ರಕಾರ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಭಾರತ ತನ್ನ ಜಿಡಿಪಿಯ ಶೇ.4.7ರಷ್ಟನ್ನು ಮಾತ್ರ ಖರ್ಚು ಮಾಡುತ್ತಿದೆ. ನಮ್ಮ ನೆರೆಕರೆಯ (ಪೂರ್ವ ಏಶ್ಯಾದ) ದೇಶಗಳು ತಮ್ಮ ಜಿಡಿಪಿಯ ಶೇ.7.2ರಷ್ಟನ್ನು, ಸಬ್‍ಸಹರಾ ಆಫ್ರಿಕಾ ಶೇ.7ರಷ್ಟನ್ನು, ಲ್ಯಾಟೀನ್ ಅಮೆರಿಕ ದೇಶಗಳು ಶೇ.13.3ರಷ್ಟನ್ನು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಖರ್ಚು ಮಾಡುತ್ತಿವೆ. ಪ್ರಪಂಚದ ಅತ್ಯಂತ ಹಿಂದುಳಿದ ದೇಶಗಳು ಕೂಡ ತಮ್ಮ ಜಿಡಿಪಿಯ ಶೇ.6.4ರಷ್ಟನ್ನು ಶಿಕ್ಷಣ ಮತ್ತು ಆರೋಗ್ಯಗಳ ಮೇಲೆ ವಿನಿಯೋಜಿಸುತ್ತವೆ (ಜೀನ್ ಡ್ರೀಜ್, 2014).

ಶಿಕ್ಷಣ, ಆರೋಗ್ಯಗಳ ಮೇಲೆ ಮಾತ್ರ ಭಾರತ ಅತೀ ಕನಿಷ್ಠ ಮೊತ್ತವನ್ನು ಖರ್ಚು ಮಾಡುತ್ತಿರುವುದಲ್ಲ; ಸಾಮಾಜಿಕ ಭದ್ರತೆ ಮೇಲೆ ಭಾರತ ಮಾಡುವ ಖರ್ಚು ಕೂಡ ಅತ್ಯಂತ ಕಡಿಮೆ ಇದೆ. ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ರಿಪೋರ್ಟ್ ಪ್ರಕಾರ ಭಾರತ ತನ್ನ ಜಿಡಿಪಿಯ ಶೇ.1.7ರಷ್ಟನ್ನು ಮಾತ್ರ ಸಾಮಾಜಿಕ ಭದ್ರತೆ ಮೇಲೆ ಖರ್ಚು ಮಾಡುತ್ತಿದೆ. ಭಾರತಕ್ಕೆ ಹೋಲಿಸಿದರೆ ಏಶಿಯಾದ ಕೆಲವು ಬಡದೇಶಗಳು ತಮ್ಮ ಜಿಡಿಪಿಯ ಶೇ.3.4ನ್ನು ಖರ್ಚು ಮಾಡುತ್ತಿವೆ. ಚೀನಾ ತನ್ನ ಜಿಡಿಪಿಯ ಶೇ.5.4ನ್ನು, ಜಪಾನ್ ತನ್ನ ಜಿಡಿಪಿಯ ಶೇ.19.2ನ್ನು ಮತ್ತು ಏಶಿಯಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಜಿಡಿಪಿಯ ಶೇ.10ನ್ನು ಸಾಮಾಜಿಕ ಭದ್ರತೆ ಮೇಲೆ ವಿನಿಯೋಜಿಸುತ್ತಿವೆ. ಆದುದರಿಂದ ನಮ್ಮ ಸಂಪನ್ಮೂಲದ ಬಹುಭಾಗ ಬಡವರ ಉದ್ಧಾರಕ್ಕೆ ಖರ್ಚಾಗುತ್ತಿದೆ ಎನ್ನುವುದು ಆಧಾರರಹಿತ ಆರೋಪ (ಜೀನ್ ಡ್ರೀಜ್, 2014).

ಕರ್ನಾಟಕ ಸರಕಾರದ ಕಡಿಮೆ ಬೆಲೆಯ ಅಕ್ಕಿ ಯೋಜನೆಯ ವಿರುದ್ಧ ಬಂದ ಟೀಕೆಗಳು :
ಕಡಿಮೆ ಬೆಲೆಗೆ ಅಕ್ಕಿ ದೊರೆಯುವುದರಿಂದ ಉಳಿತಾಯವಾಗುವ ಹಣವನ್ನು ಬಡವರು ಕುಡಿತ/ಇತರ ದುಶ್ಚಟಗಳಿಗೆ ಬಳಸಬಹುದು, ಬಡವರು ಈಗಾಗಲೇ ಸೋಮಾರಿಗಳಾಗಿದ್ದಾರೆ, ಈ ಕಾರ್ಯಕ್ರಮದಿಂದ ಇನ್ನೂ ಸೋಮಾರಿಗಳಾಗಬಹುದು, ಕೂಲಿ ಕಾರ್ಮಿಕರ ಕೊರತೆ ಸೃಷ್ಟಿಯಾಗಬಹುದು, ಈಗಾಗಲೇ ಅವಸಾನದ ಅಂಚಿನಲ್ಲಿರುವ ಕೃಷಿ ಈ ಕಡಿಮೆ ಬೆಲೆ ಅಕ್ಕಿ ಯೋಜನೆಯಿಂದ ಸಂಪೂರ್ಣ ನಾಶವಾಗಬಹುದು ಇತ್ಯಾದಿ ಟೀಕೆಗಳಿವೆ. ಕಡಿಮೆ ಬೆಲೆಗೆ ಅಕ್ಕಿ ಕೊಡುವ ಕಾರ್ಯಕ್ರಮದಿಂದ ಬಡತನ ನಿವಾರಣೆಯಾಗುತ್ತದೆ ಎನ್ನುವ ಭ್ರಮೆ ನನಗೂ ಇಲ್ಲ. ಆದರೂ ಬಡವರ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಬಡವರಲ್ಲದವರು ಮಾಡುವ ಟೀಕೆಗಳಲ್ಲಿರುವ ಸತ್ಯಾಂಶದ ಕೊರತೆ ಎದ್ದು ಕಾಣುತ್ತಿದೆ.

ಮೊದಲಿಗೆ ಕಡಿಮೆ ಬೆಲೆಯ ಅಕ್ಕಿಯಿಂದ ಬಡವರು ಸೋಮಾರಿಗಳಾಗುತ್ತಿದ್ದಾರೆನ್ನುವ ವಾದವನ್ನು ಎತ್ತಿಕೊಳ್ಳುವ. ಈ ಯೋಜನೆಯಲ್ಲಿ ಐದು ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 30 ಕಿಲೋಗ್ರಾಂ ಅಕ್ಕಿ ಸಿಗುತ್ತದೆ. 30 ಕಿಲೋಗ್ರಾಂನ್ನು ಗ್ರಾಂ ಆಗಿ ಪರಿವರ್ತಿಸಿದರೆ ಐದು ಜನರಿರುವ ಒಂದು ಕುಟುಂಬಕ್ಕೆ ತಿಂಗಳಿಗೆ ಮೂವತ್ತು ಸಾವಿರ ಗ್ರಾಂ ಅಕ್ಕಿ ಸಿಗುತ್ತದೆ. ಮೂವತ್ತು ಸಾವಿರ ಗ್ರಾಂ ಅಕ್ಕಿಯನ್ನು ಐದು ಜನರಿಗೆ ಹಂಚಿದರೆ ಪ್ರತಿಯೊಬ್ಬರಿಗೆ ತಿಂಗಳಿಗೆ ಆರು ಸಾವಿರ ಗ್ರಾಂ ಅಕ್ಕಿ ದೊರೆಯುತ್ತದೆ. ಆರು ಸಾವಿರ ಗ್ರಾಂನ್ನು ಮೂವತ್ತರಿಂದ ಭಾಗಿಸಿದರೆ ಪ್ರತಿಯೊಬ್ಬರಿಗೆ ದಿನಕ್ಕೆ ಇನ್ನೂರು ಗ್ರಾಂ ಅಕ್ಕಿ ಲಭ್ಯ (ರಾಮ್‍ ಜೇಟ್ಮಲಾನಿ, 2014). ಇನ್ನೂರು ಗ್ರಾಂ ಅಕ್ಕಿಯಿಂದ ಮುನ್ನೂರು ಕ್ಯಾಲರಿ ಶಕ್ತಿ ಲಭ್ಯವಾಗುತ್ತದೆಯೆಂದು ಗ್ರಹಿಸಬಹುದು. ಸರಕಾರಿ ಲೆಕ್ಕಾಚಾರದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದುಡಿದು ಗಳಿಸುವಷ್ಟು ಶಕ್ತಿ ಪಡೆಯಬೇಕಾದರೆ ದಿನವೊಂದಕ್ಕೆ ಕನಿಷ್ಠ 2400 ಕ್ಯಾಲರಿ ಶಕ್ತಿ ಗಳಿಸುವಷ್ಟು ಆಹಾರ ಸೇವಿಸಬೇಕು. ಅಂದರೆ ಸರಕಾರ ನೀಡುವ ಮೂವತ್ತು ಕಿಲೋಗ್ರಾಂ ಅಕ್ಕಿಯಿಂದ ಕುಟುಂಬದ ಆಹಾರದ ಎಂಟನೇ ಒಂದರಷ್ಟು ಮಾತ್ರ ಪೂರೈಕೆಯಾಗುತ್ತಿದೆ. ಕುಟುಂಬದ ಎಲ್ಲ ಸದಸ್ಯರಿಗೆ ಮೇಲಿನ ಕ್ಯಾಲರಿ ಅಗತ್ಯವಿಲ್ಲವೆಂದು ಊಹಿಸುವ. ಆದಾಗ್ಯೂ ಮೂವತ್ತು ಕಿಲೋಗ್ರಾಂ ಅಕ್ಕಿ ಕುಟುಂಬದ ಆಹಾರದ ಬೇಡಿಕೆಯನ್ನು ಸಂಪೂರ್ಣ ಪೂರೈಸುವುದಿಲ್ಲ ಎನ್ನುವುದು ಮೇಲಿನ ಅಂಕಿಅಂಶಗಳಿಂದ ಸ್ಪಷ್ಟವಾಗುತ್ತಿದೆ.

ವಾಸ್ತವ ಹೀಗಿದ್ದರೂ ಬಡವರ ಮೇಲೆ ಸರಕಾರ ಮಾಡುವ ಅತ್ಯಲ್ಪ ಖರ್ಚು ಬಗ್ಗೆ ಇಷ್ಟೊಂದು ಅಸಹನೆ ಏಕೆಂದು ಆಲೋಚಿಸಿದರೆ ಎರಡು ಮೂರು ಕಾರಣಗಳು ಎದ್ದು ಕಾಣುತ್ತಿವೆ. ಒಂದು, ನಮ್ಮ ಅರೆಬೆಂದ ದೇಶಪ್ರೇಮದ ಕಲ್ಪನೆ. ಎರಡು, ನಮ್ಮ ಅಭಿವೃದ್ಧಿ ಕಲ್ಪನೆ ಮತ್ತು ಆಚರಣೆ ಮತ್ತು ಮೂರು, ನಮ್ಮ ಸಂಸ್ಕೃತಿ. ಅರೆಬೆಂದ ಅಥವಾ ಹುಸಿ ದೇಶಪ್ರೇಮದ ಕಲ್ಪನೆ ಬಗ್ಗೆ ಲೇಖನದ ಮೊದಲ ಭಾಗದಲ್ಲಿ ಪರಿಚಯಿಸಿದ್ದೇನೆ. ತೊಂಬತ್ತರದ ನಂತರದ ಅಭಿವೃದ್ಧಿ ನೀತಿಗಳು ಬಡತನದ ಸೃಷ್ಟಿಯನ್ನು ವ್ಯಕ್ತಿವಾದದ ದೃಷ್ಟಿಯಿಂದ ನೋಡುತ್ತಿವೆ. ಅಂದರೆ ಬಡತನದ ಸೃಷ್ಟಿಯಲ್ಲಿ ಪರಿಸರಕ್ಕಿಂತ ವ್ಯಕ್ತಿಯ ಪಾತ್ರ ದೊಡ್ಡದಿದೆ ಎನ್ನುವ ನಿಲುವನ್ನು ಇಂದಿನ ಅಭಿವೃದ್ಧಿ ಧೋರಣೆಗಳು ಒಪ್ಪಿಕೊಂಡಿವೆ. ಆದುದರಿಂದ ಇಂದಿನ ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಉಚಿತ ಶಿಕ್ಷಣ ಅಥವಾ ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಿಲ್ಲ. ಇವುಗಳ ಜಾಗದಲ್ಲಿ ಇಂದು ಕಡಿಮೆ ಬೆಲೆಗೆ ಅಕ್ಕಿ ನೀಡುವುದು, ಅಕ್ಕಿ ಬೇಯಿಸಲು ಗ್ಯಾಸ್ ನೀಡುವುದು, ಕನಿಷ್ಠ ಕೆಲವು ದಿನಗಳ ಉದ್ಯೋಗ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮುಂತಾದ ಕಾರ್ಯಕ್ರಮಗಳು ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಡಬಹುದು. ಕರ್ನಾಟಕ ಸರಕಾರದ ಕಡಿಮೆ ಬೆಲೆ ಅಕ್ಕಿ ಯೋಜನೆ ಕೂಡ ವ್ಯಕ್ತಿವಾದದ ದೃಷ್ಟಿಯಿಂದ ಬಡತನವನ್ನು ನೋಡುವ ಮತ್ತು ಪರಿಹರಿಸುವ ಒಂದು ಕಾರ್ಯಕ್ರಮ.

ಅಭಿವೃದ್ಧಿ ಸಿದ್ಧಾಂತಗಳ ಜೊತೆಗೆ ನಮ್ಮ ಚರಿತ್ರೆಯಿಂದ ಬಂದ ಲಿಂಗ, ಜಾತಿ, ಧರ್ಮ ಭೇದಗಳು ಕೂಡ ಬಡತನವನ್ನು ಸಹಜಗೊಳಿಸಿವೆ. ನಮ್ಮ ಸಮಾಜದ ವಿವಿಧ ಗುಂಪುಗಳನ್ನು ಗುರುತಿಸಲು ಜಾತಿ ಪದ್ಧತಿ ಸೃಷ್ಟಿಯಾಗಿದೆ. ಜಾತಿಗಳು ಒಂದು ಪಿರಮಿಡ್ ರೂಪದಲ್ಲಿ ಸಂಘಟಿಸಲ್ಪಟ್ಟಿವೆ. ಕೆಲವರು ಮೇಲೆ ಮತ್ತೆ ಕೆಲವರು ಮಧ್ಯದಲ್ಲಿ ಮತ್ತು ಹಲವರು ಪಿರಮಿಡ್ ಬುಡದಲ್ಲಿದ್ದಾರೆ. ಮೇಲಿದ್ದವರು ಹೆಚ್ಚಿನ ಅಧಿಕಾರ, ಆದಾಯ, ಸ್ಥಾನಮಾನ ಹೊಂದಿದ್ದರೆ ಮಧ್ಯದಲ್ಲಿರುವವರು ಮೇಲಿದ್ದವರಿಗಿಂತ ಕಡಿಮೆ ಮತ್ತು ಬುಡದಲ್ಲಿರುವವರು ಅತೀ ಕಡಿಮೆ ಪ್ರಮಾಣದ ಅಧಿಕಾರ, ಆದಾಯ, ಸ್ಥಾನಮಾನಗಳನ್ನು ಹೊಂದಿದ್ದಾರೆ. ಈ ಬಗೆಯ ವಿಂಗಡನೆಯನ್ನು ಹುಟ್ಟಿನಿಂದಲೇ ನೋಡುತ್ತಿರುವುದರಿಂದ ಬಹುತೇಕರಿಗೆ ಆರ್ಥಿಕ ಅಸಮಾನತೆ ಅಥವಾ ಬಡತನ ಸಮಸ್ಯೆಯಾಗಿಲ್ಲ.

ಇದನ್ನು ಓದಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ದುರ್ಬಲರನ್ನು ಒಳಗೊಳ್ಳುವ ಅಭಿವೃದ್ಧಿಗೆ ಪೂರಕ

ಪರದೇಶಿ ಸಂಸ್ಕೃತಿಗಳ (ಕ್ರಿಶ್ಚಿಯನ್, ಮುಸ್ಲಿಮ್) ಸಂಪರ್ಕಕ್ಕೆ ಬಂದ ನಂತರ ನಮ್ಮಲ್ಲೂ ಜಾತಿ ಪರಿಧಿಯನ್ನು ಮೀರಿ ಬಡತನವನ್ನು ಕಲ್ಪಿಸಿಕೊಳ್ಳುವ ಪ್ರಯತ್ನಗಳು ಆರಂಭವಾದವು. ಆದರೆ ಈ ಕಾಳಜಿಯ ಹಿಂದೆ ಬಡವರ ಮೇಲಿನ ಪ್ರೀತಿಗಿಂತ ಎಲ್ಲಿ ಬಡವರು ಮತ್ತೊಂದು ಧರ್ಮದ ಪ್ರಭಾವಕ್ಕೆ ಒಳಗಾಗಿ ನಾವು (ಅನುಕೂಲಸ್ಥರು) ಅಲ್ಪಸಂಖ್ಯಾರಾಗುತ್ತೇವೆ ಎನ್ನುವ ಭೀತಿಯ ಪಾತ್ರ ಹೆಚ್ಚಿದೆ. ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲದ ಮಹತ್ವ ಹೆಚ್ಚಾಯಿತು. ಇದರೊಂದಿಗೆ ನಾವೆಲ್ಲ ಒಂದೇ ಸಂಸ್ಕೃತಿಗೆ ಸೇರಿದವರು ಎನ್ನುವ ಕೂಗು ಇನ್ನೂ ಹೆಚ್ಚಾಯಿತು. ಬಡವರು ಬೇರೆ ಧರ್ಮಕ್ಕೆ ಹೋಗುವುದು, ಜಾತಿಧರ್ಮಗಳ ಗಡಿಗಳನ್ನು ಮೀರಿ ಪ್ರೀತಿಸುವುದು, ಮದುವೆಯಾಗುವುದು, ಮಾಂಸಾಹಾರ ಸೇವಿಸುವುದು ಇತ್ಯಾದಿಗಳು ನಮ್ಮ ಸಂಸ್ಕೃತಿಯ ಹರಿಕಾರರಿಗೆ ದೊಡ್ಡ ಸಮಸ್ಯೆಗಳಾದವು. ಆದರೆ ನಮ್ಮದೇ ಸಮಾಜದ ಬಹುತೇಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯಗಳು ಇಲ್ಲದಿರುವುದು ಅವರನ್ನು ಕಾಡಲೇ ಇಲ್ಲ. ಈ ಬಗೆಯ ‘ನಮ್ಮ ಸಂಸ್ಕೃತಿಯ’ ಕಲ್ಪನೆ ಬಡತನದ ಸೃಷ್ಟಿ ಮತ್ತು ಮುಂದುವರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಎಲ್ಲರನ್ನೂ ಮತ್ತು ಎಲ್ಲ ಸಂಪನ್ಮೂಲಗಳನ್ನು (ಬೌದ್ದಿಕ ಹಾಗು ಭೌತಿಕ ಸಂಪನ್ಮೂಲಗಳನ್ನು) ಒಳಗೊಳ್ಳುವ ಸಂಸ್ಕೃತಿ ಕಲ್ಪನೆ ಮತ್ತು ಆಚರಣೆ ಮಾತ್ರ ಬಡತನಕ್ಕೆ ಶಾಶ್ವತ ಪರಿಹಾರ ಒದಗಿಸಬಹುದು.

ಪ್ರೊ ಚಂದ್ರ ಪೂಜಾರಿ
+ posts

ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಚಂದ್ರ ಪೂಜಾರಿ
ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...