ಕೇರಳ ವಿಧಾನಸಭೆಯಲ್ಲಿ ಅಂಗೀಕಾರವಾದ ಬಿಲ್ಗಳನ್ನು ಅಂಕಿತ ಹಾಕದೆ ವಿಳಂಬ ಮಾಡುತ್ತಿರುವ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿದೆ.
ಸೋಮವಾರ ತಡರಾತ್ರಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಆಡಳಿತಾರೂಢ ಸಿಪಿಐ (ಎಂ)ನ ವಿದ್ಯಾರ್ಥಿ ಘಟಕವಾಗಿರುವ ಎಸ್ಎಫ್ಐ ಸಂಘಟನೆಯ ಕಾರ್ಯಕರ್ತರು ಏಕಾಏಕಿ ಕಾರಿಗೆ ಮುತ್ತಿಗೆ ಹಾಕಿರುವ ಘಟನೆ ಕೇರಳ ವಿಶ್ವವಿದ್ಯಾನಿಲಯದ ಆವರಣದ ಮುಂಭಾಗದಲ್ಲಿ ನಡೆದಿದೆ.
ಹೊಸದಿಲ್ಲಿಗೆ ಪ್ರಯಾಣಿಸುವುದಕ್ಕಾಗಿ ತಿರುವನಂತಪುರ ವಿಮಾನ ನಿಲ್ದಾಣದತ್ತ ರಾಜ್ಯಪಾಲರು ತೆರಳುತ್ತಿದ್ದಾಗ ಎಸ್ಎಫ್ಐಯ ಕಾರ್ಯಕರ್ತರು ಕಪ್ಪು ಧ್ವಜ ಹಿಡಿದುಕೊಂಡು ಏಕಾಏಕಿ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ‘ಗೋ ಬ್ಯಾಕ್ ಗೋ ಬ್ಯಾಕ್, ಆರಿಫ್ ಖಾನ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ರಾಜ್ಯಪಾಲರು ಕಾರು ನಿಲ್ಲಿಸಿದ್ದಲ್ಲದೇ, ಕಾರಿನಿಂದ ಇಳಿದು ತೀವ್ರ ಆಕ್ರೋಶಭರಿತರಾಗಿ ಪೊಲೀಸ್ ಅಧಿಕಾರಿಗಳ ಹಾಗೂ ಸಿಎಂ ಪಿಣರಾಯಿ ವಿಜಯ್ ವಿರುದ್ ವಾಗ್ದಾಳಿ ನಡೆಸಿದ್ದಾರೆ.
ಬಳಿಕ ಸ್ಥಳದಲ್ಲಿದ್ದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಜ್ಯಪಾಲ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ಮೇಲೆ ಹಲ್ಲೆಯ ಸಂಚಿನ ಆರೋಪ ಮಾಡಿದ್ದಾರೆ.
“ಕೇರಳದಲ್ಲಿ ಸಾಂವಿಧಾನಿಕ ಯಂತ್ರ ಕುಸಿದಂತೆ ಕಾಣಿಸುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಮೇಲೆ ದೈಹಿಕ ಹಲ್ಲೆ ಎಸಗಲು ತಮ್ಮ ಪಕ್ಷದ ವಿದ್ಯಾರ್ಥಿಯ ಗೂಂಡಾಗಳನ್ನು ಕಳುಹಿಸುವ ಮೂಲಕ ಸಂಚು ಹೂಡಿದ್ದಾರೆ” ಎಂದು ಆರೋಪಿಸಿದ್ದಾರೆ.
#WATCH | Thiruvananthapuram: On SFI’s black flag protest against him, Kerala Governor Arif Mohammed Khan says, “Today the ‘gundas’ are trying to rule the roads of Thiruvananthapuram. When they came, I stopped my car and I got down (from my car). Why did they flee?… Because I do… pic.twitter.com/sk3BybaPqc
— ANI (@ANI) December 11, 2023
“ಇಂದು ತಿರುವನಂತಪುರದ ರಸ್ತೆಗಳಲ್ಲಿ ಗೂಂಡಾಗಳು ಆಳ್ವಿಕೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಎಸ್ಎಫ್ಐನವರು ಬಂದಾಗ ನಾನು ನನ್ನ ಕಾರನ್ನು ನಿಲ್ಲಿಸಿ, ಕಾರಿನಿಂದ ಇಳಿದೆ. ಇವರೆಲ್ಲ ಬ್ಲಡಿ ಫೂಲ್ಸ್, ಕ್ರಿಮಿನಲ್ಸ್. ನಾನು ಬಂದಾಗ ಅವರೇಕೆ ಓಡಿಹೋದರು? ಯಾಕೆಂದರೆ ಅವರ ತಂತ್ರಗಳಿಗೆ, ಅವರ ಒತ್ತಡಕ್ಕೆ ಒಳಗಾಗಿಲ್ಲ ಎಂದೇ? ಅವರು ನನಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ನನ್ನ ಕಾರಿಗೆ ಎರಡೂ ಕಡೆಯಿಂದ ದಾಳಿ ಮಾಡಿದ್ದಾರೆ. ಇದು ಸಿಎಂ ನಿರ್ದೇಶನದ ಮೇಲೆ ನಡೆದ ದಾಳಿ. ಸಿಎಂ ಅವರೇ ನಿರ್ದೇಶನ ನೀಡುತ್ತಿರುವಾಗ ಪೊಲೀಸರಿಂದ ಏನು ತಾನೇ ಮಾಡಲು ಸಾಧ್ಯ. ಒಂದು ವೇಳೆ ಇದೇ ರೀತಿ ದಾರಿಯಲ್ಲಿ ಸಿಎಂ ಬಂದಾಗ ಈ ರೀತಿಯಾಗಿ ನಡೆದುಕೊಳ್ಳಲು ಸಾಧ್ಯವೇ? ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನ್ನ ಮೇಲೆ ದೈಹಿಕ ಹಲ್ಲೆ ಎಸಗಲು ಷಡ್ಯಂತ್ರ ರೂಪಿಸಿದ್ದಾರೆ” ಎಂದು ಸರ್ಕಾರ ಹಾಗೂ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಘಟನೆಯ ಬಳಿಕ ಕೇರಳ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಹೊಸ ತಿಕ್ಕಾಟವೊಂದು ಆರಂಭಗೊಂಡಂತಾಗಿದೆ.
19 ಎಸ್ಎಫ್ಐ ಕಾರ್ಯಕರ್ತರ ಬಂಧನ
ರಾಜ್ಯಪಾಲರ ಕಾರನ್ನು ತಡೆದು, ಪ್ರತಿಭಟನೆ ನಡೆಸಿದ 19 ಎಸ್ಎಫ್ಐ ಕಾರ್ಯಕರ್ತರನ್ನು ತಿರುವನಂತಪುರಂ ಪೊಲೀಸರು ಬಂಧಿಸಿದ್ದು, ಇಂದು(ಮಂಗಳವಾರ) ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಪೈಕಿ 7 ಮಂದಿ ವಿರುದ್ಧ ಜಾಮೀನು ರಹಿತ ಆರೋಪ ಹೊರಿಸಲಾಗಿದೆ. ಡಿಜಿಪಿ ಮತ್ತು ಕಾನೂನು ಸುವ್ಯವಸ್ಥೆ ಉಸ್ತುವಾರಿ ಎಡಿಜಿಪಿ ತಿರುವನಂತಪುರಂ ನಗರ ಪೊಲೀಸ್ ಆಯುಕ್ತರಿಗೆ ಘಟನೆಯ ಕುರಿತು ವರದಿ ಕೇಳಿದ್ದಾರೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಉನ್ನತ ಶಿಕ್ಷಣ ಕ್ಷೇತ್ರವನ್ನು ಕೇಸರಿಮಯಗೊಳಿಸಿದ್ದಾರೆ ಎಂದು ಎಸ್ಎಫ್ಐ ಆರೋಪಿಸಿದೆ. ರಾಜ್ಯಪಾಲರನ್ನು ಸಾರ್ವಜನಿಕವಾಗಿ ತಡೆಯುವ ರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಸ್ಎಫ್ಐ ಈ ಹಿಂದೆ ಘೋಷಿಸಿತ್ತು.