ಶುಕ್ರವಾರ (ನ.10) ಟಿಪ್ಪು ಜಂಯತಿಯಂದು ಶ್ರೀರಂಗಪಟ್ಟಣದಲ್ಲಿ ರಾಜ್ಯ ಸರ್ಕಾರ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದೆ. ಇಂದು ಟಿಪ್ಪು ವರ್ಫ್ ಎಸ್ಟೇಟ್ ಸಂಘವು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿಯ ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಯಾರೂ ಸಭೆ ಸೇರದಂತೆ ಸರ್ಕಾರ ನಿಷೇಧಾಜ್ಞೆ ಹೊರಡಿಸಿದೆ.
ಶ್ರೀರಂಗಪಟ್ಟಣ ತಹಶಿಲ್ದಾರ್ ಪರಶುರಾಮ ಸತ್ತಿಗೇರಿ ಅವರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ. ಸಿಆರ್ಪಿಸಿ ಕಲಂ 144 ಅಡಿಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಪಟ್ಟಣದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವಂತಿಲ್ಲ. ಪ್ರತಿಭಟನೆ, ಮೆರವಣಿಗೆ, ಬ್ಯಾನರ್, ಬಂಟಿಂಗ್ಸ್, ಮೈಕ್, ಪಟಾಕಿ ಯಾವುದಕ್ಕೂ ಅವಕಾಶವಿಲ್ಲ. ಡಿಜೆ ಹಾಕುವಂತಿಲ್ಲ, ರಸ್ತೆ ರಡೆ ನಡೆಸುವಂತಿಲ್ಲ” ಎಂದು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನವೆಂಬರ್ 11ರಂದು ಟಿಪ್ಪು ಜಯಂತಿ ಆಚರಣೆಗೆ ಆದೇಶ ಹೊರಡಿಸಿತ್ತು. ಅದರಂತೆ ಟಿಪ್ಪು ಜಯಂತಿ ಕಾರ್ಯಕ್ರಮಗಳನ್ನು ಸರ್ಕಾರ ನಡೆಸುತ್ತಿತ್ತು. ಆದರೆ, ಬಿಜೆಪಿ ಆಡಳಿತದಲ್ಲಿ ಟಿಪ್ಪು ಜಯಂತಿಯಲ್ಲಿ ನಿಲ್ಲಿಸಲಾಗಿತ್ತು. ಇದೀಗ, ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರದಲ್ಲಿದ್ದರೂ ತಾನೇ ಜಾರಿಗೆ ತಂದಿದ್ದ ಅಚರಣೆಗೆ ತಾನೇ ವಿರುದ್ಧವಾಗಿದೆ ಎಂಬುದನ್ನು ನಿಷೇಧಾಜ್ಞೆ ಸಾಬೀತು ಪಡಿಸಿದೆ ಎನ್ನಲಾಗಿದೆ.
ಇದೆಲ್ಲದರ ನಡುವೆ, ಟಿಪ್ಪು ಹುಟ್ಟಿದ ದಿನಾಂಕ ನವೆಂಬರ್ ತಿಂಗಳು ಅಲ್ಲ, ಡಿಸೆಂಬರ್ 1 ಎಂದು ಸಂಶೋಧಕರು ಮತ್ತೆ ಮಾಡಿದ್ದಾರೆ. ಹೀಗಾಗಿ, ಟಿಪ್ಪು ಜಯಂತಿಯ ದಿನಾಂಕವೂ ಬದಲಾಗಿದೆ. ಆದರೆ, ಅಂದು ಕೂಡ ಸರ್ಕಾರ ಟಿಪ್ಪು ಜಯಂತಿ ಆಚರಿಸುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ, ಸರ್ಕಾರ ಈ ವರ್ಷ ಟಿಪ್ಪು ಜಯಂತಿ ಆಚರಿಸುವುದು ಅನುಮಾನವಾಗಿ ಉಳಿದಿದೆ.
ಆದರೆ, ಹಲವರು ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಿಸುತ್ತಾರೆ. ಅಂತೆಯೇ ಟಿಪ್ಪು ವರ್ಫ್ ಎಸ್ಟೇಟ್ ಶುಕ್ರವಾರ ಟಿಪ್ಪು ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಸರ್ಕಾರ ನಿಷೇಧಾಜ್ಞೆ ಹೊರಡಿಸಿದೆ. ಇದು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪುಗೆ ಮಾಡಿದ ಅವಮಾನ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.