ಹೆಣ್ಣು ಮಕ್ಕಳಿಗೆ ಬೈಕ್ ಟ್ಯಾಕ್ಸಿ ಸುರಕ್ಷತೆ ಇಲ್ಲ ಎಂದು ಹೇಳಿ ಸಾರಿಗೆ ಇಲಾಖೆ ಬೈಕ್ ಟ್ಯಾಕ್ಸಿ ಸೇವೆಯನ್ನ ರದ್ದುಗೊಳಿಸಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನೊಂದ ಬೈಕ್ ಟ್ಯಾಕ್ಸಿ ಚಾಲಕ ನವೀನ್, “ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಬಸ್ ಎಂದರೆ ಕಿಲ್ಲರ್ ಬಿಎಂಟಿಸಿ ಎನ್ನುವ ಖ್ಯಾತಿ ಗಳಿಸಿದೆ. ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿದೆ. ಹಾಗಿದ್ದರೇ, ಬಸ್ಗಳ ಸೇವೆ ಸ್ಥಗಿತಗೊಳಿಸುವಿರಾ?” ಎಂದು ಪ್ರಶ್ನಿಸಿದ್ದಾರೆ.
ಬೈಕ್ಗಳಂತಹ ಸಾರಿಗೆಯೇತರ ವಾಹನಗಳನ್ನು ಟ್ಯಾಕ್ಸಿ ಸೇವೆಗೆ ಬಳಕೆ ಮತ್ತು ಅವುಗಳ ಕಾರ್ಯಾಚರಣೆಗೆ ಖಾಸಗಿ ಅಪ್ಲಿಕೇಶನ್ಗಳನ್ನು ಬಳಸುವುದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಎಲ್ಲ ರೀತಿಯ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದೆ.
ಆಟೋ ಮತ್ತು ಟ್ಯಾಕ್ಸಿ ಸೇವೆಗಳಿಂದ ತೀವ್ರ ವಿರೋಧ ಮತ್ತು ಒತ್ತಡದಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ, ಬೈಕ್ಸ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ದ್ವಿಚಕ್ರ ವಾಹನ ಬೈಕ್ ಬಾಡಿಗೆ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತವಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆ ರದ್ದು; ಸರ್ಕಾರ ಆದೇಶ
ನೊಂದ ಚಾಲಕ ಟ್ವೀಟ್
ಮಾನ್ಯ ಸಾರಿಗೆ ಇಲಾಖೆ ಸಚಿವರೇ ಹಾಗೂ ಇಲಾಖೆ ಆಯುಕ್ತರೇ…
ಬೈಕ್ ಟ್ಯಾಕ್ಸಿಗಳಿಂದ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ ಎಂದು ಹೇಳುವವರು ಆಟೋ ಮತ್ತು ಕ್ಯಾಬ್ಗಳಲ್ಲಿ ಎಷ್ಟು ಸುರಕ್ಷತೆ ಇದೆ ಎಂದು ತಿಳಿಸಿ. ಇದುವರೆಗೂ ಆಟೋ ಮತ್ತು ಕ್ಯಾಬ್ಗಳಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ನೀವೇ ತಿಳಿಸಿ.
— Naveen Kumar (@K40609282Naveen) March 8, 2024
ಇನ್ನೊಂದು ವಿಷಯ ಇದು ಅತ್ಯಾಚಾರಕ್ಕಿಂತ ಹೆಚ್ಚಿನದು ಅದು ಏನು ಅಂದ್ರೆ ನಿಮ್ಮ ಸಂಸ್ಥೆಯ ಬಿಎಂಟಿಸಿ ಬಸ್ಗಳು. ಈ ಬಿಎಂಟಿಸಿಗೆ ಮತ್ತೊಂದು ಹೆಸರು ಇದೆ. ನಾನೇ ಹೇಳುವೆ ಕೇಳಿಸಿಕೊಳ್ಳಿ, ನಿಮ್ಮ ಸಂಸ್ಥೆಯ ಬಿಎಂಟಿಸಿಗೆ ಇರುವ ಮತ್ತೊಂದು ಹೆಸರೇ ‘ಕಿಲ್ಲರ್ ಬಿಎಂಟಿಸಿ’ ಅಂತ ಇದುವರೆಗೂ ನಿಮ್ಮ ಬಿಎಂಟಿಸಿಯಿಂದ ಎಷ್ಟು ಜನರ ಸಾವುಗಳಾಗಿದೆ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ, ಬಿಎಂಟಿಸಿ ಸಾರ್ವಜನಿಕರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದೆ ಅಂತ ಬಿಎಂಟಿಸಿ ಬಸ್ ಅನ್ನು ರದ್ದು ಮಾಡುವಿರಾ? ಇದಕ್ಕೆ ಉತ್ತರ ಕೊಡಿ ಎಂದು ನೊಂದ ಬೈಕ್ ಟ್ಯಾಕ್ಸಿ ಚಾಲಕ ನವೀನ್ ಟ್ವೀಟ್ ಮಾಡಿದ್ದಾರೆ.
ಸಾರಿಗೆ ಇಲಾಖೆ ಆಯುಕ್ತ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಉಬರ್ ಬೈಕ್ ಹಾಗೂ ರ್ಯಾಪಿಡೋ ಬೈಕ್ ನವರಿಗೆ ಈ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ.