ತ್ರಿಪುರಾದಲ್ಲಿ ಭಾನುವಾರ ನಡೆದ ವಕೀಲರ ‘ಬಾರ್ ಅಸೋಸಿಯೇಷನ್’ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಬೆಂಬಲಿತ ‘ಆಯಿಂಜೀಬಿ ಉನ್ನಯರ್ ಮಂಚ್’ಅನ್ನು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಬೆಂಬಲಿತ ‘ಸಂವಿಧಾನ್ ಬಚಾವೋ ಮಂಚ್’ (ಸಂವಿಧಾನ ಉಳಿಸಿ ವೇದಿಕೆ) ಸೋಲಿಸಿದೆ. ಅಸೋಸಿಯೇಷನ್ಅನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ.
500 ಸದಸ್ಯರಿರುವ ತ್ರಿಪುರಾ ಬಾರ್ ಅಸೋಸಿಯೇಶನ್ಗೆ ಭಾನುವಾರ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ 416 ಮತಗಳು ಚಲಾವಣೆಯಾಗಿದ್ದು, ‘ಸಂವಿಧಾನ್ ಬಚಾವೋ ಮಂಚ್’ ಗೆಲುವು ಸಾಧಿಸಿದೆ.
“ತ್ರಿಪುರ ವಕೀಲರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಕ್ರಮವಾಗಿ ವಕೀಲರಾದ ಮೃಣಾಲ್ ಕಾಂತಿ ಬಿಸ್ವಾಸ್, ಸುಬ್ರತಾ ದೇಬನಾಥ್ ಮತ್ತು ಕೌಶಿಕ್ ಆಯ್ಕೆಯಾಗಿದ್ದಾರೆ. ಸಹಾಯಕ ಕಾರ್ಯದರ್ಶಿಗಳಾಗಿ ವಕೀಲ ಅಮರ್ ದೆಬ್ಬರ್ಮಾ ಮತ್ತು ಉತ್ಪಲ್ ದಾಸ್ ಆಯ್ಕೆಯಾಗಿದ್ದಾರೆ” ಎಂದು ಚುನಾವಣಾಧಿಕಾರಿ, ವಕೀಲ ಸಂದೀಪ್ ದತ್ತಾ ಚೌಧರಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಕೀಲ ಸಮೀರ್ ರಂಜನ್ ಬರ್ಮನ್ ಮತ್ತು ವಕೀಲ ಶಂಪಾ ದಾಸ್ ಅವರು ಅಂಚೆ ಮೂಲಕ ತಮ್ಮ ಮತ ಚಲಾಯಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಸಂವಿಧಾನ ಉಳಿಸಿ ವೇದಿಕೆಯಿಂದ ಸ್ಪರ್ಧಿಸಿ ತ್ರಿಪುರಾ ವಕೀಲರ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾದ ವಕೀಲ ಕೌಶಿಕ್ ಮಾತನಾಡಿ, ”ಸಂವಿಧಾನ ಉಳಿಸಿ ವೇದಿಕೆಯಿಂದ ಅಧ್ಯಕ್ಷ, ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಆರು ಮಂದಿ ಕಾರ್ಯಕಾರಿ ಸದಸ್ಯರನ್ನು ಆಯ್ಕೆಯಾಗಿದ್ದಾರೆ. ಆದರೆ, ಇದು ವಕೀಲರ ವೇದಿಕೆಯೇ ಹೊರತು ರಾಜಕೀಯವಲ್ಲ. ವಕೀಲರ ಕಲ್ಯಾಣಕ್ಕಾಗಿ ಈ ಹಿಂದಿನಂತೆಯೇ ಕೆಲಸ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಬಾರ್ ಅಸೋಷಿಯೇಷನ್ ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯಿಸಿರುವ ತ್ರಿಪುರ ವಿಪಕ್ಷ ನಾಯಕ ಜಿತೇಂದ್ರ ಚೌಧರಿ, “ಇದನ್ನು ಕೇವಲ 500 ವಕೀಲರ ಚುನಾವಣೆ ಎಂದು ನೋಡಬಾರದು. ಇದು ನಮ್ಮ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲು ಹೊರಟಿರುವ ಆಡಳಿತ ವಿರುದ್ಧದ ಕೋಪಗೊಂಡಿರುವ ನಮ್ಮ ಭಾರತೀಯ ಜನರನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದ್ದಾರೆ.
“ಹೊಸ ಸರ್ಕಾರವನ್ನು ರಚಿಸಲು ಅಥವಾ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲು ಕೇವಲ ಅಭ್ಯರ್ಥಿಗೆ/ಪಕ್ಷಕ್ಕೆ ಮತ ಹಾಕುವುದು ನಮ್ಮ ಕೆಲಸವಲ್ಲ. ಬದಲಾಗಿ, ಸಂವಿಧಾನ, ಜಾತ್ಯತೀತತೆ, ಬಹುತ್ವ, ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ದೇಶಪ್ರೇಮದ ಕರ್ತವ್ಯವಾಗಿದೆ. ಬಾರ್ ಅಸೋಸಿಯೇಷನ್ ಫಲಿತಾಂಶವು ನಿರಂಕುಶವಾದಿ, ಕೋಮುವಾದಿ, ಒಡೆದು ಆಳುವ ಶಕ್ತಿಗಳ ವಿರುದ್ಧ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಮತ್ತು ರಾಮ್ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ದೊಡ್ಡ ಗೆಲುವನ್ನು ಖಾತ್ರಿಪಡಿಸುವ ಸೂಚಕವಾಗಿದೆ” ಎಂದು ಅವರು ಹೇಳಿದ್ದಾರೆ.
“ವಕೀಲರು ಬುದ್ಧಿಜೀವಿಗಳು. ಅವರು ಸಮಾಜಕ್ಕೆ ನಿರ್ದೇಶನ ನೀಡುತ್ತಾರೆ. ಆಡಳಿತ ಪಕ್ಷದ (ಬಿಜೆಪಿ) ವಕೀಲರು ಈ ಸಂಘದಲ್ಲಿ ಬಹುಸಂಖ್ಯಾತರಿದ್ದಾರೆ. ಆದರೆ, ಅವರು ಯಾವುದೇ ಪಕ್ಷದವರಾಗಿದ್ದರೂ, ರಾಜಕೀಯ ಗೆರೆಗಳನ್ನು ಮೀರಿ, ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಭಾರತದ ಪ್ರಜಾಪ್ರಭುತ್ವದ ಉಳಿವಿಗಾಗಿ ಎಚ್ಚೆತ್ತುಕೊಂಡಿದ್ದಾರೆ” ಎಂದು ಕಾಂಗ್ರೆಸ್ನ ಸಿಡಬ್ಲ್ಯೂಸಿ ಸದಸ್ಯ ಸುದೀಪ್ ರಾಯ್ ಬರ್ಮನ್ ಹೇಳಿದ್ದಾರೆ.
“ಬಿಜೆಪಿ ಬೆಂಬಲಿತ ವಿವಿಧ ಸಂಘಟನೆಗಳ ವಕೀಲರು ಬಾರ್ ಅಸೋಸಿಯೇಷನ್ನಲ್ಲಿ ಬಹುಸಂಖ್ಯಾತರಾಗಿದ್ದಾರೆ. ಆದರೆ ಅವರು ಸಂವಿಧಾನ ಉಳಿಸಿ ವೇದಿಕೆಗೆ ಮತ ಹಾಕಿದರು. ಈ ಫಲಿತಾಂಶವು ಮುಂಬರುವ ಲೋಕಸಭೆ ಚುನಾವಣೆ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಲಿದೆ” ಎಂದು ಹೇಳಿದ್ದಾರೆ.
2020ರಲ್ಲಿ ನಡೆದಿದ್ದ ಬಾರ್ ಅಸೋಸಿಯೇಷನ್ ಚುನಾವಣೆಯಲ್ಲಿಯೂ ಸಂವಿಧಾನ ಬಚಾವೋ ಮಂಚ್ ಮೊದಲ ಬಾರಿಗೆ ಗೆಲುವು ಸಾಧಿಸಿತ್ತು.