ಗುದ್ದೋಡು(ಹಿಟ್ ಅಂಡ್ ರನ್) ಪ್ರಕರಣಕ್ಕೆ ಸಂಬಂಧಿಸಿದಂತೆ ನೂತನ ಕಾನೂನು ಮಾರ್ಪಡಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ಟ್ರಕ್, ಬಸ್ ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಟ್ರಕ್ ಚಾಲಕರ ಪ್ರತಿಭಟನೆಯಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದ ಮಹಾರಾಷ್ಟ್ರ, ಛತ್ತೀಸ್ಗಢ, ಮಧ್ಯಪ್ರದೇಶ ಒಳಗೊಂಡಂತೆ ಹಲವು ರಾಜ್ಯಗಳ ಪೆಟ್ರೋಲ್ ಬಂಕ್ ಮುಂದೆ ವಾಹನ ಸವಾರರು ಸರದಿಗಟ್ಟಲೆ ಸಾಲು ನಿಂತು ಇಂಧನ ಖರೀದಿಸುತ್ತಿದ್ದಾರೆ.
ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ ಸೆಕ್ಷನ್ನ ಅಪರಾಧ ಸಂಹಿತೆ ಕಾನೂನನ್ನು ಈಗ ಮಾರ್ಪಡಿಸಲಾಗಿದ್ದು, ನೂತನ ಕಾನೂನಿನ ಅನ್ವಯ ಗುದ್ದೋಡು ಪ್ರಕರಣದಲ್ಲಿ ಚಾಲಕರಿಗೆ ಗರಿಷ್ಠ 10 ವರ್ಷಗಳವರೆಗೂ ಶಿಕ್ಷೆ ಹಾಗೂ 7 ಲಕ್ಷ ರೂ.ಗಳವರೆಗೂ ದಂಡ ವಿಧಿಸಲಾಗುತ್ತದೆ.
ಈ ಮೊದಲು ಗುದ್ದೋಡು ಪ್ರಕರಣಕ್ಕೆ ಚಾಲಕರಿಗೆ 2 ವರ್ಷಗಳವರೆಗೆ ಮಾತ್ರ ಜೈಲು ಶಿಕ್ಷೆ ವಿಧಿಸಲು ಐಪಿಸಿ ಸೆಕ್ಷನ್ ಕಾನೂನಿನಲ್ಲಿ ಅವಕಾಶವಿತ್ತು.
ನೂತನ ಕಾನೂನಿಗೆ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಟ್ರಕ್ ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಭಟನೆಯಿಂದಾಗಿ ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದೆ. ಥಾಣೆ, ಸೋಲಾಪುರ, ಕೊಲ್ಹಾಪುರ, ನಾಗ್ಪುರ ಹಾಗೂ ಗುಂಡಿಯಾ ಜಿಲ್ಲೆಗಳಲ್ಲಿ ಟ್ರಕ್ ಚಾಲಕರು ಸ್ಥಳೀಯ ಹೆದ್ದಾರಿಗಳ ರಸ್ತೆಗಳನ್ನು ತಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
ಛತ್ತೀಸ್ಗಢದಲ್ಲಿ 12 ಸಾವಿರಕ್ಕೂ ಖಾಸಗಿ ವಾಣಿಜ್ಯ ಸೇವೆಯ ಬಸ್ ಚಾಲಕರು ಕೆಲಸವನ್ನು ಸೋಮವಾರದಿಂದ ಸ್ಥಗಿತಗೊಳಿಸಿ ನೂತನ ಕಾನೂನನ್ನು ರದ್ದುಗೊಳಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲೂ ಪ್ರತಿಭಟನೆ ಜೋರಾಗಿದ್ದು, ಹೊಸ ಕಾನೂನನ್ನು ಹಿಂಪಡೆಯಬೇಕೆಂದು ಇಂದು ಬೆಳಗಿನಿಂದಲೇ ಹಲವು ಜಿಲ್ಲೆಗಳಲ್ಲಿ ಟ್ರಕ್, ಬಸ್ ಚಾಲಕರ ಪ್ರತಿಭಟನೆ ಜೋರಾಗಿದ್ದು, ಹಲವು ಕಡೆ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪಂಜಾಬ್ನಲ್ಲಿ ಲೂಧಿಯಾನ-ಫಿರೋಜ್ಪುರ ರಸ್ತೆಯಲ್ಲಿ ಟ್ರಕ್ ಚಾಲಕರು ಪ್ರತಿಭಟನೆ ನಡೆಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಟ್ರಕ್ ಚಾಲಕರು ಅಂಬಾಲಾ ಜಿಲ್ಲೆ ಬಳಿಯ ಶಂಭು ಗಡಿಯಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ ಭೋಪಾಲ್ನಲ್ಲಿ ಚಾಲಕರು ಪ್ರತಿಭಟನೆ ನಡೆಸಿ ಸರ್ಕಾರಿ ಬಸ್ಗಳು ಮತ್ತು ಸಾರ್ವಜನಿಕರ ವಾಹನಗಳನ್ನು ತಡೆದರು. ಚಾಲಕರ ಪ್ರತಿಭಟನೆಯಿಂದಾಗಿ ರಾಜ್ಯದ ಕೆಲವೆಡೆ ರಸ್ತೆ ತಡೆ ನಡೆದಿರುವುದು ಕಂಡುಬಂದಿದೆ. ವಿವಿಧ ನಗರಗಳಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿಯಿಂದಾಗಿ ಪೆಟ್ರೋಲ್ ಬಂಕ್ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು.
ಗುದ್ದೋಡು ಪ್ರಕರಣದ ಹೊಸ ಕಾನೂನಿನ ವಿರುದ್ಧ ಸಾರಿಗೆ ಸಂಸ್ಥೆಗಳು ಮತ್ತು ಚಾಲಕರ ಪ್ರತಿಭಟನೆಯ ಕುರಿತು, ಅಖಿಲ ಭಾರತ ಮೋಟಾರ್ ಮತ್ತು ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಕಪೂರ್ ಮಾತನಾಡಿ, “ಸರ್ಕಾರಕ್ಕೆ ನಮ್ಮ ಏಕೈಕ ಬೇಡಿಕೆಯೆಂದರೆ ನಿರ್ಧಾರವನ್ನು ನಮ್ಮ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕಾಗಿತ್ತು. ನಮ್ಮ ಒಕ್ಕೂಟದ ಯಾರೊಂದಿಗೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಮ್ಮ ಸಂಘದ ಸದಸ್ಯರು ಯಾವುದೇ ಪ್ರತಿಭಟನೆಯನ್ನು ಘೋಷಿಸಿಲ್ಲ. ಪ್ರತಿಭಟನೆಯು ಎಂದಿಗೂ ಪರಿಹಾರಕ್ಕೆ ಕಾರಣವಾಗುವುದಿಲ್ಲ. ಸರ್ಕಾರವು ನೂತನ ಕಾನೂನಿನ ಬಗ್ಗೆ ನಮ್ಮ ಸಂಘಟನೆಯೊಂದಿಗೆ ಮಾತುಕತೆ ನಡೆಸುತ್ತದೆ ಎಂದು ಭಾವಿಸುತ್ತೇನೆ” ಎಂದು ತಿಳಿಸಿದರು.