ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತುವ, ಕೋಮು ಶಕ್ತಿಗಳ ಪರ ವಾದಿಸುವ ಖಾಸಗಿ ಸುದ್ದಿವಾಹಿನಿಯ ಸಂಪಾದಕ ಅಜಿತ್ ಹನುಮಕ್ಕನವರ್ ಅವರು ತುಮಕೂರು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಪ್ರಗತಿಪರ ಚಿಂತಕರು, ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಹೆದರಿದ ಅಜಿತ್ ಹನುಮಕ್ಕನವರ್ ಹಿಂಬಾಗಿಲಿನ ಮೂಲಕ ತೆರಳಿ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಜುಲೈ 20ರಂದು ನಡೆದ ‘ಮಾಧ್ಯಮ ಹಬ್ಬ’ದ ಉದ್ಘಾಟನೆಗೆ ಅಜಿತ್ ಹನುಮಕ್ಕನವರ್ ಅವರನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆಹ್ವಾನಿಸಿತ್ತು. ಅವರು ಕಾರ್ಯಕ್ರಮಕ್ಕೆ ಬರಬಾರದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸರ್ಕಾರಿ ಕಲಾ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ಹಾಗೂ ವಿದ್ಯಾರ್ಥಿ ಯುವಜನರ ಒಕ್ಕೂಟಗಳು ವಿಶ್ವವಿದ್ಯಾಲಯದ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದು, ಧರಣಿ ಕುಳಿತಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಪ್ರೊ. ಕೆ ದೊರೈರಾಜ್, “ತುಮಕೂರು ವಿಶ್ವವಿದ್ಯಾಲಯವು ಸಂವಿಧಾನಕ್ಕೆ ಹೊರತಾದ ಸಂಸ್ಥೆಯಲ್ಲ. ವಿಶ್ವವಿದ್ಯಾಲಯಗಳು ಸಂವಿಧಾನದ ಮೌಲ್ಯ ಹಾಗೂ ಆಶಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ಆದರೆ ಸಂವಿಧಾನದ ಮೌಲ್ಯಗಳನ್ನು, ಆಶಯಗಳನ್ನು ವಿರೋಧಿಸುವ, ಮಕ್ಕಳಲ್ಲಿ ಜನಾಂಗೀಯ ದ್ವೇಷ, ವಿಷ ಹಾಗೂ ಮೌಢ್ಯವನ್ನು ಬಿತ್ತುವವರನ್ನು ಆಹ್ವಾನಿಸಬಾರದು. ಮಾಧ್ಯಮ ಹಬ್ಬಕ್ಕೆ ಕೋಮುವಾದಿ ವ್ಯಕ್ತಿಯನ್ನು ಆಮಂತ್ರಿಸಿರುವುದನ್ನು ಖಂಡಿಸುತ್ತಿದ್ದೇವೆ” ಎಂದರು.
ಕೊಟ್ಟ ಶಂಕರ್ ಮಾತನಾಡಿ, “ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ನಡೆಸುತ್ತಿರುವ ಕಾರ್ಯಕ್ರಮವನ್ನು ಖಂಡಿಸುತ್ತೇವೆ. ಜಾತ್ಯತೀತ ಶಿಕ್ಷಣ ನಗರಿಯಾಗಿರುವ ತುಮಕೂರಿನಲ್ಲಿ ಒಂದು ಪಕ್ಷದ ಸಿದ್ದಾಂತವನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಜರ್ನಲಿಸಂ ವಿಭಾಗ ಮಾಡುತ್ತಿದೆ. ಅಧಿಕಾರ ಅಥವಾ ಇನ್ನಾವುದೇ ಆಮಿಷಕ್ಕೆ ಒಳಗಾಗಿ ಇಂಥ ಕಾರ್ಯಕ್ರಮ ಮಾಡುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ?: ಡೆತ್ನೋಟ್ನಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್ ಹೆಸರು ಬರೆದು ಎನ್ಪಿಎಸ್ ನೌಕರ ನಾಪತ್ತೆ
ಸೈಯದ್ ಮುಜೀಬ್ ಮಾತನಾಡಿ, “ವಿಶ್ವವಿದ್ಯಾಲಯ ಇಲ್ಲಿ ಉಳಿಯಬೇಕಾದರೆ ಜಿಲ್ಲೆಯ ಎಲ್ಲ ಪ್ರಗತಿಪರ ಸಂಘಟನೆಗಳ ಹೋರಾಟವೇ ಕಾರಣವಾಗಿದೆ. ವಿಶ್ವವಿದ್ಯಾಲಯವು ಇಷ್ಟು ವರ್ಷಗಳಲ್ಲಿ ಜಿಲ್ಲೆಯ ರೈತರ ಹಾಗೂ ಶ್ರಮಜೀವಿಗಳ ಏಳಿಗೆಗೆ ನೀಡಿರುವ ಕೊಡುಗೆ ಏನು ಎಂಬುದನ್ನು ತಿಳಿಸಬೇಕು” ಎಂದರು.
ವಿಶ್ವವಿದ್ಯಾಲಯದ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಮಯದಲ್ಲೇ ಮಾಧ್ಯಮ ಹಬ್ಬದಲ್ಲಿ ಭಾಗವಹಿಸಬೇಕಿದ್ದ ಅಜಿತ್ ಹನುಮಕ್ಕನವರ್ ಹಿಂಭಾಗದ ದ್ವಾರದಿಂದ ಕ್ಯಾಂಪಸ್ಗೆ ಪ್ರವೇಶಿಸಿ ಸಮಾರಂಭದಲ್ಲಿ ಪಾಲ್ಗೊಂಡರು.
ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಮುಖಂಡರಾದ ಸೈಯದ್ ಮುಜೀಬ್, ಬಿ.ಉಮೇಶ್, ನ್ಯಾಯವಾದಿ ರಂಗಧಾಮಯ್ಯ, ಜಾತ್ಯತೀತ ಯುವಜನ ವೇದಿಕೆಯ ವಿರೂಪಾಕ್ಷ ಡೇಗೇರಹಳ್ಳಿ, ವೆಲ್ಫೇರ್ ಪಾರ್ಟಿಯ ತಾಜುದ್ದೀನ್ ಷರೀಫ್, ರೈತ ಸಂಘದ ನಟರಾಜಪ್ಪ, ದಲಿತ ಮುಖಂಡರಾದ ಬಂಡೆ ಕುಮಾರ್, ಕೊಡಿಯಾಲ ಮಹದೇವು, ಶ್ರೀನಿವಾಸ್ ಅಂಬೇಡ್ಕರ್, ಮಹೇಶ್ ಮರ್ಫಿ, ಗೋಪಾಲ ಮಸರುಪಡಿ, ನಾಗರಾಜ್ ಉಪ್ಪಾರಹಳ್ಳಿ,ಕೆ.ಎಸ್.ಗುರುಪ್ರಸಾದ್, ಲೇಖಕ ಈಚನೂರು ಇಸ್ಮಾಯಿಲ್ ನಟರಾಜಪ್ಪ ಮೊದಲಾದವರು ಇದ್ದರು.