- ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಬಾಗಲಕೋಟೆಯಲ್ಲಿ ದೂರು
- ಚಂದ್ರಯಾನ-3 ಕುರಿತು ಅಪಹಾಸ್ಯ ಮಾಡಿದ್ದಾರೆಂದು ಆರೋಪ
ಚಂದ್ರಯಾನ -3 ಕುರಿತು ಅಪಹಾಸ್ಯದ ರೀತಿಯ ಫೋಟೋ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ ನಟ ಪ್ರಕಾಶ್ ರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಗೆ ಶ್ರೀರಾಮ ಸೇನೆಯ ಮುಖಂಡ ಶಿವಾನಂದ ಗಾಯಕ್ವಾಡ್ ಎಂಬವರು ದೂರು ನೀಡಿದ್ದು, ಇಸ್ರೋ ವಿಜ್ಞಾನಿಗಳನ್ನು ಅಪಹಾಸ್ಯ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬನಹಟ್ಟಿ ಠಾಣೆಯ ಸಬ್ ಇನ್ಸ್ಪೆಕ್ಟರ್, ‘ಟ್ವಿಟರ್ನಲ್ಲಿ ಚಂದ್ರಯಾನ -3 ಕುರಿತು ಅಪಹಾಸ್ಯ ಮಾಡಿದ್ದಾರೆಂದು ಮನವಿ ನೀಡಿದ್ದಾರೆ. ಅದನ್ನು ಸ್ವೀಕರಿಸಿದ್ದೇವೆ. ಎಫ್ಐಆರ್ ದಾಖಲಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಚಂದ್ರಯಾನ – 3 ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆಗಸ್ಟ್ 23 ರ ಸಂಜೆ 06:04ಕ್ಕೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ಇದು ಯಶಸ್ಸಿಯಾಗಲೆಂದು ಹಲವೆಡೆ ಪೂಜೆ, ಪುನಸ್ಕಾರ ನಡೆಸಲಾಗುತ್ತಿದೆ.
ಈ ನಡುವೆ, ಚಂದ್ರಯಾನ – 3 ಬಗ್ಗೆ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವಿವಾದಕ್ಕೆಡೆ ಮಾಡಿಕೊಟ್ಟಿತ್ತು.
‘ಬ್ರೇಕಿಂಗ್ ನ್ಯೂಸ್: ಚಂದ್ರನ ಅಂಗಳದಿಂದ ವಿಕ್ರಮ್ಲ್ಯಾಂಡರ್ನಿಂದ ಬಂದ ಮೊದಲ ಫೋಟೋ.. ವಾವ್’ ಎಂದು ಟ್ವೀಟ್ ಮಾಡುವುದರ ಜೊತೆಗೆ ವ್ಯಕ್ತಿಯೊಬ್ಬರು ಎರಡು ಮಗ್ಗಳ ನಡುವೆ ಚಹಾವನ್ನು ಸುರಿಯುವ ವ್ಯಂಗ್ಯಚಿತ್ರ ಹಂಚಿಕೊಂಡಿದ್ದರು. ಇದು ಹಲವರ ಕಣ್ಣು ಕೆಂಪಗಾಗಿಸಿತ್ತು.
ವಿವಾದಿತ ಟ್ವೀಟ್ ಮೂಲಕ ದೇಶಕ್ಕೆ ಅಪಮಾನ ಮಾಡುತ್ತಿದ್ದಾರೆಂದು ಆರೋಪಿಸಿದರೆ, ಇದಕ್ಕೆ ಮತ್ತೊಂದು ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ‘ದ್ವೇಷಿಸುವವರಿಗೆ ದ್ವೇಷ ಮಾತ್ರ ಕಾಣ ಸಿಗುತ್ತದೆ’ ಎಂದು ಹೇಳಿದ್ದರು.
‘ದ್ವೇಷಿಸುವವರಿಗೆ ದ್ವೇಷ ಮಾತ್ರ ಕಾಣುತ್ತದೆ. ನಾನು ಆರ್ಮ್ಸ್ಟ್ರಾಂಗ್ ಸಮಯದ ಹಾಸ್ಯವನ್ನು ಉಲ್ಲೇಖಿಸುತ್ತಿದ್ದೆ. ಕೇರಳದ ಚಾಯ್ವಾಲಾಗಳ ಬಗ್ಗೆ ತಿಳಿಸಿದ್ದೇನೆ. ಟ್ರೋಲ್ ಮಾಡುವವರು ಯಾವ ಚಾಯ್ವಾಲಾ ಎಂದು ತಿಳಿದುಕೊಂಡಿದ್ದಾರೆ? ನಿಮಗೆ ಜೋಕ್ ಸಿಗದಿದ್ದರೆ, ಜೋಕ್ ನಿಮ್ಮ ಬಗ್ಗೆಯೇ ಇರುತ್ತದೆ. ಅಭಿವೃದ್ಧಿ ಹೊಂದಿ’ ಎಂದು ಟ್ವೀಟ್ ಬಗ್ಗೆ ವಿವಾದ ಉಂಟು ಮಾಡಿದವರಿಗೆ ಪ್ರಕಾಶ್ ರಾಜ್ ತಿಳಿಸಿದ್ದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೂ, ನಮ್ಮ ಪೊಲೀಸರು ಮನುವಾದಿಗಳಿಗೆ ಮಣೆ ಹಾಕುತ್ತಿರುವುದು ಕಂಡನಾರ್ಹ.