ಇತ್ತೀಚೆಗೆ ಕೇಂದ್ರ ಸರ್ಕಾರದ ವಿರುದ್ಧ ಅಥವಾ ರೈತ ಮತ್ತು ಇತರೆ ಹೋರಾಟಗಳ ಪರವಾಗಿ ನೀವು ಏನಾದರೂ ಟ್ವೀಟ್ ಮಾಡಿದರೆ ನಿಮ್ಮ ಖಾತೆಯನ್ನೇ ಬ್ಲಾಕ್ ಮಾಡಲಾಗುತ್ತದೆ. ಆದರೆ, ಟ್ವಿಟರ್ (ಎಕ್ಸ್) ತಾನಾಗಿಯೇ ಖಾತೆಯನ್ನು ನಿಷ್ಕ್ರೀಯ ಮಾಡುತ್ತಿಲ್ಲ. ಬದಲಾಗಿ ಕೇಂದ್ರದ ಬಿಜೆಪಿ ಸರ್ಕಾರ ಬಲವಂತವಾಗಿ ಮಾಡಿಸುತ್ತಿದೆ ಎಂಬ ವಿಚಾರ ಇತ್ತೀಚೆಗೆ ಬಹಿರಂಗವಾಗಿದೆ.
ಕೇಂದ್ರ ಸರ್ಕಾರವು ಟ್ವಿಟರ್ಗೆ ದಂಡ ಮತ್ತು ಜೈಲು ಶಿಕ್ಷೆಯ ಬೆದರಿಕೆ ನೀಡಿ ತಾನು ತಿಳಿಸಿದ ಟ್ವಿಟ್ಟರ್ ಖಾತೆಗಳನ್ನ ಬ್ಲಾಕ್ ಮಾಡಿಸುತ್ತಿದೆ. ಹಾಗೆಂದು ಸ್ವತಃ ಟ್ವಿಟ್ಟರ್ ಮಾಹಿತಿ ನೀಡಿದೆ. ಖಾತೆಗಳನ್ನು ಬ್ಲಾಕ್ ಮಾಡುವುದನ್ನು ನಾವು ಒಪ್ಪಲ್ಲ. ಆದರೆ, ಜೈಲಿಗೆ ಹೋಗುವ ಬದಲಾಗಿ ಆದೇಶವನ್ನು ಪಾಲಿಸಬೇಕಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಟ್ಟಿಟರ್ ತನ್ನ ಗ್ಲೋಬಲ್ ಗವರ್ನ್ಮೆಂಟ್ ಅಫೆರ್ಸ್ ಎಂಬ ಖಾತೆಯ ಮೂಲಕ ಇತ್ತೀಚೆಗೆ ಈ ಬಗ್ಗೆ ಮಾಹಿತಿ ನೀಡಿದೆ. ಹಾಗೆಯೇ ಸರ್ಕಾರದ ಈ ಕ್ರಮದ ವಿರುದ್ಧವಾಗಿ ಕೋರ್ಟ್ ಕದ ತಟ್ಟಲಾಗುತ್ತಿದೆ ಎಂದು ಕೂಡಾ ಟ್ವಿಟರ್ ತಿಳಿಸಿದೆ.
“ಭಾರತ ಸರ್ಕಾರ ಕೆಲವು ಖಾತೆಗಳನ್ನು, ಪೋಸ್ಟ್ಗಳನ್ನ ಡಿಲೀಟ್ ಮಾಡಲು ನಮಗೆ ಆದೇಶ ನೀಡಿದೆ. ಸರ್ಕಾರದ ಆದೇಶ ಪಾಲಿಸದಿದ್ದರೆ ದಂಡ ಮತ್ತು ಜೈಲು ಆಗುತ್ತದೆ ಎಂದು ತಿಳಿಸಿದೆ. ಈ ಆದೇಶ ಇರುವ ಕಾರಣದಿಂದಾಗಿ ನಾವು ಈ ಖಾತೆಯನ್ನು ಅಥವಾ ಪೋಸ್ಟ್ ಅನ್ನು ಭಾರತದಲ್ಲಿ ಹೋಲ್ಡ್ ಮಾಡುತ್ತೇವೆ. ಆದರೆ ನಾವು ಭಾರತ ಸರ್ಕಾರದ ಈ ಕ್ರಮವನ್ನು ಒಪ್ಪುವುದಿಲ್ಲ. ಎಲ್ಲರಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ,” ಎಂದು ಟ್ವಿಟರ್ ಹೇಳಿದೆ.
“ನಾವು ಕೋರ್ಟ್ಗೆ ಹೋಗಿದ್ದೇವೆ. ನಾವು ಭಾರತ ಸರ್ಕಾರದ ಆದೇಶವನ್ನು ಪ್ರಶ್ನೆ ಮಾಡಿದ್ದೇವೆ. ನಾವು ಯಾರ ಖಾತೆ ಬ್ಲಾಕ್ ಮಾಡುತ್ತೇವೋ ಅವರಿಗೆ ಸರ್ಕಾರದ ಆದೇಶದ ನೋಟಿಸ್ ನೀಡುತ್ತೇವೆ. ಕಾನೂನು ನಿರ್ಬಂಧ ಇರುವುದರಿಂದಾಗಿ ನಾವು ಈ ಆದೇಶ ಪ್ರತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಪಾರದರ್ಶಕತೆ ಇರಬೇಕಾದ್ದಲ್ಲಿ ಜನರಿಗೆ ಈ ಮಾಹಿತಿ ನೀಡುವುದು ಅನಿವಾರ್ಯ ಎಂದು ನಾವು ನಂಬುತ್ತೇವೆ,” ಎಂದು ಎಕ್ಸ್ ತನ್ನ ನಿಲುವು ಸ್ಪಷ್ಟಪಡಿಸಿದೆ.
The Indian government has issued executive orders requiring X to act on specific accounts and posts, subject to potential penalties including significant fines and imprisonment.
In compliance with the orders, we will withhold these accounts and posts in India alone; however,…
— Global Government Affairs (@GlobalAffairs) February 21, 2024
ಭಾರತ ಪ್ರಜಾಪ್ರಭುತ್ವದ ತಾಯಿ!
ನಮ್ಮ ಪ್ರಧಾನಿ ಈ ಹಿಂದೆ ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಹೇಳಿದ್ದರು. ಆದರೆ ಈಗ ಕೇಂದ್ರದ ವಿರುದ್ಧ ಮಾತನಾಡುವವರ ಖಾತೆಯನ್ನು ಕೇಂದ್ರವೇ ಬ್ಲಾಕ್ ಮಾಡಿಸುತ್ತಿದೆ ಎಂದು ಬಹಿರಂಗವಾದ ಬಳಿಕ ಪ್ರಧಾನಿ ಹೇಳಿದ ಈ ಪ್ರಜಾಪ್ರಭುತ್ವವನ್ನು ಪ್ರಶ್ನಿಸಲಾಗುತ್ತಿದೆ.
ವಾದ ವಿವಾದ ಒಂದು ಪ್ರಜಾಪ್ರಭುತ್ವ ದೇಶಕ್ಕೆ ಅಗತ್ಯ ಎಂದು ಈ ಹಿಂದೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಈಗ ಅವರೇ ಈ ವಿಷಯವನ್ನು ಮರೆತಿದ್ದಾರಾ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಲಾಗುತ್ತಿದೆ.
ಸಾಮಾಜಿಕ ಕಾರ್ಯಕರ್ತ ಹಂಸರಾಜ್ ಮೀನಾರ ಖಾತೆಯನ್ನು ಬ್ಲಾಕ್ ಮಾಡಲಾಗಿದ್ದು ಅವರಿಗೆ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳು ಇದ್ದಾರೆ. ಇವರು ಹೆಚ್ಚಾಗಿ ಜನರ ಸಮಸ್ಯೆ ಬಗ್ಗೆ ಪೋಸ್ಟ್ ಮಾಡುತ್ತಿದ್ದರು. ಅದಾದ ಬಳಿಕ ನಿರಂತರವಾಗಿ ಟ್ವಿಟರ್ ಖಾತೆಗಳನ್ನ ಬ್ಲಾಕ್ ಮಾಡಲಾಗುತ್ತಿದೆ.
ಇದಾದ ನಂತರ ಪ್ರತಿ ದಿನ ಒಂದಲ್ಲ ಒಂದು ಖಾತೆ ವಿತ್ಹೆಲ್ಡ್ ಮಾಡಲಾಗುತ್ತಿದೆ. ಯಾರ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆಯೋ ಅವರಿಗೆ ‘ಭಾರತ ಸರ್ಕಾರ ನಿಮ್ಮ ಖಾತೆ ವಿರುದ್ಧ ನೋಟಿಸ್ ನೀಡಿದೆ, ಇದರಿಂದಾಗಿ ನಿಮ್ಮ ಖಾತೆಯನ್ನು ವಿತ್ಹೆಲ್ಡ್ ಮಾಡಲಾಗುತ್ತಿದೆ’ ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ. ಆದರೆ ಈಗ ಭಾರತ ಸರ್ಕಾರವೇ ತನ್ನ ಬಳಿ ಖಾತೆ ವಿತ್ಹೆಲ್ಟ್ ಮಾಡಿಸುತ್ತಿದೆ ಎಂದು ತನ್ನ ಅಧಿಕೃತ ಖಾತೆಯಲ್ಲೇ ತಿಳಿಸಿದೆ.
ರೈತ ಚಳುವಳಿಯ ಮುಖಂಡರ ಖಾತೆ ಬ್ಲಾಕ್
ಇದೇ ರೀತಿ ರೈತ ಚಳುವಳಿಯ ಮುಖಂಡರುಗಳು ಖಾತೆಯನ್ನು ಕೂಡಾ ಬ್ಲಾಕ್ ಮಾಡಲಾಗಿದೆ. ಸರ್ವನ್ ಸಿಂಗ್ ಪಾಂದೆರ್, ತೇಜ್ವೀರ್ ಸಿಂಗ್ ಅಂಬಾಲಾ, ರಮನ್ ದೀಪ್ ಸಿಂಗ್ ಮಾನ್, ಹರ್ಪಾಲ್ ಸಿಂಗ್ ಸಾಂಗರ ಖಾತೆಯನ್ನು ನಿಷ್ಕ್ರೀಯಗೊಳಿಸಲಾಗಿದೆ. ಯಾರ ಜೊತೆ ಸರ್ಕಾರ ರೈತರ ಸಮಸ್ಯೆ ಬಗ್ಗೆ ಮಾತಾನಾಡುತ್ತಿದೆಯೋ ಆ ರೈತರಸ ಎಕ್ಸ್ ಖಾತೆಯನ್ನೇ ಸರ್ಕಾರ ಬ್ಲಾಕ್ ಮಾಡಿಸಿದೆ. ಕೃಷಿ ಸಚಿವ ಅರ್ಜುನ್ ಮುಂಡಾ ಟ್ವೀಟ್ ಮಾಡಿ ನಾವು ರೈತ ಮುಖಂಡರ ಜೊತೆ ಮಾತನಾಡಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಆದರೆ ಈ ರೈತ ಮುಖಂಡರ ಖಾತೆ ಬ್ಲಾಕ್ ಮಾಡಲಾಗಿದೆ.
‘ನಮ್ಮ ಖಾತೆನ ನಿಷ್ಕ್ರೀಯ ಮಾಡಲಾಗಿದೆ. ನಮ್ಮ ಹೆಸರಲ್ಲಿ ಫೇಕ್ ಅಕೌಂಟ್ ತೆರೆಯಲಾಗಿದೆ. ಅದರಲ್ಲಿ ಕೆಟ್ಟದಾಗಿ ಪೋಸ್ಟ್ ಮಾಡಲಾಗುತ್ತಿದೆ. ಈ ಪೋಸ್ಟ್ ನಾವು ಮಾಡುವುದಲ್ಲ,” ಎಂದು ರೈತ ಮುಖಂಡರು ತಿಳಿಸಿದ್ದಾರೆ. ಸರ್ಕಾರ ಈವರೆಗೆ ರೈತರ ಪರವಾಗಿ ಮಾತಾನಾಡಿದ 177 ರೈತ ಮುಖಂಡರ ಖಾತೆಯನ್ನು ಬ್ಲಾಕ್ ಮಾಡಿಸಿದೆ. ಇದರಲ್ಲಿ ಪರ್ತಕರ್ತರು ಕೂಡಾ ಇದ್ದಾರೆ.
ಭಾರತ ಸರ್ಕಾರ ಖಾತೆಗಳನ್ನು ನಿಷ್ಕ್ರೀಯಗೊಳಿಸಲು ತಿಳಿಸದಾಗ ಟ್ವಿಟರ್ ಈ ಪೋಸ್ಟ್ಗಳನ್ನ ಅಥವಾ ಖಾತೆಯನ್ನು ಭಾರತದಲ್ಲಿ ಮಾತ್ರ ನಿಷ್ಕ್ರೀಯಗೊಳಿಸಿದೆ. ಇದರಿಂದಾಗಿ ಬೇರೆ ದೇಶದಲ್ಲಿ ಈ ಖಾತೆಯ ಟ್ವೀಟ್ಗಳನ್ನು ನೋಡುವ ಅವಕಾಶವಿದೆ.
ಇನ್ನು ಮನ್ದೀಪ್ ಪುನಿಯಾ ನಿರಂತರವಾಗಿ ರೈತ ಹೋರಾಟದ ಸುದ್ದಿ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ರೈತ ಹೋರಾಟದ ಸತತ ವರದಿ ಮಾಡಿದ್ದರು, ಆದರೆ ಈಗ ರೈತರು ದೆಹಲಿ ತಲುಪುವ ಮುನ್ನವೇ ಮನ್ದೀಪ್ ಖಾತೆಯನ್ನು ನಿಷ್ಕ್ರೀಯ ಮಾಡಲಾಗಿದೆ. ಈ ಬಗ್ಗೆ ಮನ್ದೀಪ್ ಬೇರೆ ಖಾತೆಯಿಂದ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಬರೀ ಟ್ವಿಟರ್ ಅಕೌಂಟ್ ಮಾತ್ರ ಅಲ್ಲ ಪತ್ರಕರ್ತರ ಫೇಸ್ಬುಕ್, ಯೂಟ್ಯೂಬ್ ಅಕೌಂಟ್ ಕೂಡಾ ನಿಷ್ಕ್ರೀಯ ಮಾಡಲಾಗ್ತಿದೆ. ಸರಿಯಾದ ಕಾರಣ ನೀಡದೆಯೇ ಅಕೌಂಟ್ ಅನ್ನು ನಿಷ್ಕ್ರೀಯ ಮಾಡಲಾಗುತ್ತಿದೆ. ಆದರೆ ಟ್ವಿಟ್ಟರ್ ಕೇಂದ್ರದ ಆದೇಶ ಪಾಲಿಸುವ ಜೊತೆಗೆ ಈ ಆದೇಶವನ್ನು ಪ್ರಶ್ನಿಸಿದೆ. ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಎಲ್ಲಿದೆ ಪತ್ರಿಕಾ ಸ್ವಾತಂತ್ರ್ಯ?
2017ರಲ್ಲಿ ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮವು ಈಗ ಪತ್ರಿಕಾ ಸ್ವಾತಂತ್ರ್ಯಕ್ಕೆ ಬಲವನ್ನು ನೀಡಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ಈಗ ತಮ್ಮ ನಿಲುವನ್ನು ತಿಳಿಸುವವರ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023ರಲ್ಲಿ ಟ್ವಿಟ್ಟರ್ನ ಮಾಲೀಕ ಎಲಾನ್ ಮಸ್ಕ್ ಬಿಬಿಸಿಗೆ ಒಂದು ಸಂದರ್ಶನ ನೀಡಿದ್ದರು. ಆ ಸಂದರ್ಭದಲ್ಲಿ ಭಾರತದಲ್ಲಿ ಸಾಮಾಜಿಕ ಜಾಲತಾಣದ ಕಾನೂನು ತುಂಬ ಕಠಿಣವಾಗಿದೆ ಎಂದು ಹೇಳಿದ್ದರು. ಭಾರತದಲ್ಲಿ ನಾವು ಕಾನೂನಿನ ವಿರುದ್ಧ ನಡೆಯಲು ಸಾಧ್ಯವಿಲ್ಲ. ಇಲ್ಲಿ ನಮ್ಮ ಜನರು ಜೈಲಿಗೆ ಹೋಗಬೇಕು ಅಥವಾ ಕಾನೂನು ಪಾಲಿಸಬೇಕು. ಹಾಗಿರುವಾಗ ನಾವು ಕಾನೂನು ಪಾಲಿಸುವ ಆಯ್ಕೆಯನ್ನು ಮಾಡುತ್ತೇವೆ ಎಂದು ಹೇಳಿದ್ದರು. ಇದೀಗ ಸಂಸ್ಥೆ ಅದನ್ನು ಮತ್ತೆ ಹೇಳಿಕೊಂಡಿದೆ. ಒಟ್ಟಿನಲ್ಲಿ ಇದು ಕೇಂದ್ರ ಸರ್ಕಾರ ಮತ್ತು ಟ್ವಿಟರ್ನ ನಡುವಿನ ವಿಚಾರವಲ್ಲ, ಕೇಂದ್ರ ಮತ್ತು ಜನರ ನಡುವೆ ಇರುವ ವಿಚಾರವೆಂದು ಅರ್ಥಮಾಡಿಕೊಳ್ಳಬೇಕಾಗಿದೆ.