ಚುನಾವಣಾ ದಿನಾಂಕ ಘೋಷಣೆಯಾಗುವ ಹಂತದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಅವರನ್ನು ಬದಲಾವಣೆ ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಸಾಮಾಜಿಕ ಕಾರ್ಯಕರ್ತ ರಾಮ ದಿವಾಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, “ಚುನಾವಣೆ ಘೋಷಣೆಯಾಗುವ ಕೆಲವೇ ಕೆಲವು ದಿನಗಳ ಮೊದಲು ರಾಜ್ಯ ಸರ್ಕಾರ ಮಾಡಿರುವ ಈ ಬದಲಾವಣೆ ಸೂಕ್ತವಾದುದಲ್ಲ. ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಈ ಬದಲಾವಣೆಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು” ಎಂದು ಹೇಳಿದ್ದಾರೆ.
“ನಿನ್ನೆ ಮೊನ್ನೆಯವರೆಗೂ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಆಗಿದ್ದವರು ಡಾ ವೀಣಾ ಕುಮಾರಿ. ಇವರು ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದವರು. ಜನಪರ ಕಾಳಜಿಯ ಜನಸೇವಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರಕ್ಕೂ ಅವಕಾಶ ನೀಡದೆ ಕರ್ತವ್ಯ ಪಾಲಿಸುತ್ತಿದ್ದ ಡಾ. ವೀಣಾ ಕುಮಾರಿ ಅವರನ್ನು ಬದಲಾಯಿಸಿರುವ ಸರ್ಕಾರದ ಕ್ರಮ ಅಸ್ವೀಕಾರಾರ್ಹ ಮತ್ತು ಶಂಕಾಸ್ಪದ ನಿರ್ಧಾರವಾಗಿದೆ” ಎಂದು ಹೇಳಿದರು.
“ಡಾ. ವೀಣಾಕುಮಾರಿ ಸೇವಾನುಭವದಲ್ಲೂ ಹಿರಿಯರಾಗಿದ್ದರು. ಇದೀಗ ನಿಯುಕ್ತಿಗೊಂಡ ಡಾ. ಅಶೋಕ್ ಜೂನಿಯರ್ ಆಗಿದ್ದಾರೆ. ಎಂಡಿ ಆಗಿರುವ ಡಾ. ವೀಣಾ ಪರಿಶಿಷ್ಟ ಜಾತಿಯವರಾಗಿದ್ದು, ಇವರ ಬದಲಾವಣೆ ಮಹಿಳೆಯರಿಗೆ ಮತ್ತು ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಮಾಡಿದ ಅನ್ಯಾಯವಾಗಿದೆ” ಎಂದು ಖಂಡಿಸಿದರು.
“ಡಾ. ಅಶೋಕ್ ವಿರುದ್ಧ ಹಲವು ದೂರುಗಳಿವೆ. ಮಹಿಳಾ ಸಿಬ್ಬಂದಿಗಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಅಮಾನತುಗೊಂಡವರೂ ಆಗಿದ್ದಾರೆ. ಪ್ರಕರಣಗಳ ತನಿಖೆ ಮುಕ್ತಾಯಗೊಳ್ಳುವ ಮೊದಲೇ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮೂರು ತಿಂಗಳ ಹಿಂದೆಯಷ್ಟೇ ಹೆಬ್ರಿಗೆ ವರ್ಗಾವಣೆಯಾಗಿದ್ದ ಡಾ. ಅಶೋಕ್ ಅವರನ್ನು ಇದೀಗ ಇಷ್ಟು ಅವಸರವಾಗಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಆಗಿ ನಿಯುಕ್ತಿಗೊಳಿದ್ದು ಖಂಡನೀಯ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ
ಡಾ. ಅಶೋಕ್ ಅವರನ್ನು ನೇಮಕ ಮಾಡಿರುವುದು ಅಧಿಕಾರ ದುರುಪಯೋಗ ಮಾಡಲಿಕ್ಕಾಗಿಯೇ ಎಂಬ ಅನುಮಾನ ಸಾರ್ವಜನಿಕರಾದ ನಮಗೆ ಉಂಟಾಗಿದೆ. ಚುನಾವಣಾ ಆಯೋಗ ಈ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸುವ ಮೂಲಕ ರಾಜ್ಯ ಸರ್ಕಾರ ಮಾಡಿದ ನೇಮಕವನ್ನು ಹಿಂತೆಗೆದುಕೊಂಡು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮಾಡಬೇಕಾಗಿದೆ” ಎಂದು ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.