ಮಣಿಪಾಲ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದು, ಹಲವು ಕಡೆ ಹೋಟೆಲ್, ರೆಸ್ಟೋರೆಂಟ್ ಹಾಗೂ ಕಾನೂನುಬಾಹಿರವಾಗಿ ಕಾರ್ಯಾಚರಿಸುತ್ತಿರುವ ರಸ್ತೆ ಬದಿಯ ಅಡ್ಡಾಗಳ ಮೇಲೆ ದಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲೆಯ ಮಣಿಪಾಲ ನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತಡರಾತ್ರಿ ಅನುಮಾನಾಸ್ಪದ ಹೋಟೆಲ್ಗಳ ಮೇಲೆ ದಾಳಿ ಮಾಡಿದ್ದಾರೆ. ಅನಧಿಕೃತ ರೀತಿಯಲ್ಲಿ ಅವಧಿ ಮೀರಿ ಹೋಟೆಲ್ ನಡೆಸುತ್ತಿದ್ದವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು, ಅಪ್ರಾಪ್ತ ವಯಸ್ಕರು ಮದ್ಯ ಸೇವನೆಯಲ್ಲಿ ತೊಡಗಿದ್ದುದು ಕಂಡುಬಂದಿದೆ.
ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದ್ದು, ಗಾಂಜಾ ಮತ್ತಿತರ ಡ್ರಗ್ಸ್ ಅಂಶಗಳಿಗಾಗಿ ಶೋಧಿಸಲಾಗುತ್ತಿದೆ. ಇಲ್ಲಿನ ಹೋಟೆಲ್ಗಳ ಚಟುವಟಿಕೆಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅಲ್ಲದೆ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಣಿಪಾಲ ಠಾಣಾಧಿಕಾರಿ ದೇವರಾಜ್ ನೇತೃತ್ವದಲ್ಲಿ ತಂಡದಿಂದ ರಾತ್ರಿ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಬೆಂಕಿ ಅವಘಡ | ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರ
ಶನಿವಾರ ತಡರಾತ್ರಿ ನಾಕಾಬಂದಿ, ಚೆಕ್ಪೋಸ್ಟ್ ಹಾಕಿ ವಾಹನ ತಪಾಸಣೆ ನಡೆಸಲಾಗಿದೆ. ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದ ಮಣಿಪಾಲಕ್ಕೆ ದೇಶದ ನಾನಾ ಕಡೆಗಳಿಂದ ಹಾಗೂ ವಿದೇಶದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದ ಇಲ್ಲಿನ ಹಲವು ವಿದ್ಯಾರ್ಥಿಗಳು ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ.