ಕ್ರಿಕೆಟ್ ಪಂದ್ಯವೊಂದರ ವೇಳೆ ತಪ್ಪಾದ ನಿರ್ಣಯ ನೀಡಿದ್ದಾನೆ ಎಂದು ಆರೋಪಿಸಿ ಅಂಪೈರ್ನನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾದ ಘಟನೆ ಒಡಿಶಾದಲ್ಲಿ ನಡೆದಿದೆ. ಮೃತ ಯುವಕನನ್ನು ಲಕ್ಕಿ ರೌತ್ (22) ಎಂದು ಗುರುತಿಸಲಾಗಿದೆ.
ಒಡಿಶಾದ ಕಟಕ್ ಜಿಲ್ಲೆಯ ಮಹಿಸಲಂದಾ ಗ್ರಾಮದಲ್ಲಿ ಭಾನುವಾರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಶಂಕರಪುರ ಮತ್ತು ಬ್ರಹ್ಮಪುರ ಗ್ರಾಮಗಳ ನಡುವಿನ ಪಂದ್ಯದಲ್ಲಿ ಲಕ್ಕಿ ರೌತ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಪಂದ್ಯದ ನಡುವೆ ಲಕ್ಕಿ ನೀಡಿದ್ದ ನೋಬಾಲ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಅಂಪೈರ್ ತೀರ್ಮಾನಕ್ಕೆ ಬ್ರಹ್ಮಪುರ ತಂಡದ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪರ – ವಿರೋಧವಾಗಿ ಉಭಯ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು.
ಈ ವೇಳೆ ಬ್ರಹ್ಮಪುರ ಗ್ರಾಮದ ತಂಡದ ಬೆಂಬಲಿಗರು ಮೈದಾನ ಪ್ರವೇಶಿಸಿ ಅಂಪೈರ್ ಮೇಲೆ ಹಲ್ಲೆ ನಡೆಸಿದ್ದಾರೆ. ಮೊದಲು ಬ್ಯಾಟ್ನಿಂದ ತಲೆಗೆ ಬಡಿದು ಬಳಿಕ ನೆಲಕ್ಕೆ ಬಿದ್ದ ಲಕ್ಕಿ ರೌತ್ ಮೇಲೆ ಸ್ಮೃತಿ ರಂಜನ್ ರಾವತ್ ಅಲಿಯಾಸ್ ಮುನಾ ಎಂಬಾತ ಚಾಕುವಿನಿಂದ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಕ್ಕಿ ರೌತ್ನನ್ನು ಸ್ಥಳೀಯರು ತಕ್ಷಣವೇ ಕಟಕ್ನ ಎಸ್ಸಿಬಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದರಾದರೂ, ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ತುಷಾರ್ ದೇಶಪಾಂಡೆ ಐಪಿಎಲ್ನ ಮೊತ್ತಮೊದಲ ʻಇಂಪ್ಯಾಕ್ಟ್ ಪ್ಲೇಯರ್ʼ
ಲಕ್ಕಿ ರೌತ್ ಮೇಲೆ ಚಾಕುವಿನಿಂದ ಇರಿದ ಸ್ಮೃತಿ ರಂಜನ್ ರಾವತ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ, ಗ್ರಾಮಸ್ಥರು ಆತನ ಸ್ನೇಹಿತರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ʻಮುಗುನಿ ರಾವತ್, ಜಗರಾವತ್ ಹಾಗೂ ಸ್ಮೃತಿ ರಂಜನ್ ರಾವತ್ ಎಂಬುವವರು ಲಕ್ಕಿ ರಾವತ್ ಮೇಲೆ ಗಂಭೀರ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆʼ ಎಂದು ಎಂದು ಪಂದ್ಯದ ಸಹ ಅಂಪೈರ್ ಪ್ರೀತಿರಂಜನ್ ಸಮಲ್ ಪೊಲೀಸರಿಗೆ ತಿಳಿಸಿದ್ದಾನೆ.
‘ಈ ಪ್ರಕರಣದಲ್ಲಿ ರಾಜಾ, ಸ್ಮೃತಿ ಅಕಾ ಮುನಾ, ಸಂಜಯ್ ಅಕಾ ಮುಗುನಿ ಮತ್ತು ಬಾದಲ್ ಸೇರಿದಂತೆ ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ. ಎಲ್ಲರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಕಟಕ್ನ ವಲಯ-1 ಎಸಿಪಿ ಅರುಣ್ ಸ್ವೈನ್ ಹೇಳಿದ್ದಾರೆ.