ಭಾರತವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳಲ್ಲಿ ಜಾತಿ ವ್ಯವಸ್ಥೆಯೂ ಒಂದು. ಅಸ್ಪೃಶ್ಯತೆಯನ್ನು ತಡೆಯಲು ನಾನಾ ಕಾನೂನುಗಳಿದ್ದರೂ, ಅಸ್ಪೃಶ್ಯತೆಯ ಪಿಡುಗು ಇನ್ನೂ ಸಮಾಜವನ್ನು ತೊರೆದಿಲ್ಲ. ಮೇಲು-ಕೀಳು, ಬಲಿಷ್ಟ-ಕನಿಷ್ಟವೆಂದು ಜಾತಿ ಆಧಾರದಲ್ಲಿ ಮನುಷ್ಯನನ್ನು ನೋಡುವ, ಮನುಷ್ಯನನ್ನು ಮುಟ್ಟಿಸಿಕೊಳ್ಳದೆ ದೂರವಿಡುವ ಕೀಳು ವ್ಯವಸ್ಥೆ ಇನ್ನೂ ಮುಂದುವರೆದಿದೆ. ಅಸ್ಪೃಶ್ಯತಾ ಆಚರಣೆಗಳು ಅಲ್ಲಿಲ್ಲಿ ಬೆಳಕಿಗೆ ಬರುತ್ತಲೇ ಇವೆ. ಇದೀಗ, ಅಂತಹದ್ದೇ ಪ್ರಕರಣವೊಂದು ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿ ದಲಿತರನ್ನು ಸಾಮುದಾಯಿಕವಾಗಿ ದೂರವಿಟ್ಟು ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ನೂರಾರು ವರ್ಷಗಳಿಂದ ಗ್ರಾಮದ ಹೋಟೆಲ್, ಸಲೂನ್ ಹಾಗೂ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.
ಗ್ರಾಮದ ಸಲೂನ್ಗಳಲ್ಲಿ ದಲಿತರಿಗೆ ಕಟಿಂಗ್-ಶೇವಿಂಗ್ ಮಾಡಲಾಗುತ್ತಿಲ್ಲ. ಹೋಟೆಲ್ಗಳಲ್ಲಿ ದಲಿತರನ್ನು ದೂರ ಕೂರಿಸಿ, ಪ್ಲಾಸ್ಟಿಕ್ ಪ್ಲೇಟ್ಗಳಲ್ಲಿ ಆಹಾರ ನೀಡಲಾಗುತ್ತದೆ. ಲೋಟಗಳನ್ನು ಮುಟ್ಟಲು ಬಿಡದೆ, ನೀರನ್ನು ದೂರದಿಂದ ಆ ತಟ್ಟೆಗೆ ಸುರಿಯುವ ಅಥವಾ ಬೊಗಸೆಯಲ್ಲಿ ಕುಡಿಸಲಾಗುತ್ತದೆ ಎಂಬುದು ತಿಳಿದುಬಂದಿದೆ.
ಗ್ರಾಮದಲ್ಲಿ ಪ್ರಬಲ ಜಾತಿಗರು ಮತ್ತು ದಲಿತರ ನಡುವೆ ದೊಡ್ಡ ಅಂತರವಿದೆ. ದಲಿತ ಸಮುದಾಯದಲ್ಲಿ ಯಾರಾದರೂ ಮೃತಪಟ್ಟರೆ, ಅಂದು ಗ್ರಾಮದ ಎಲ್ಲ ಅಂಗಡಿಗಳನ್ನು ಮುಚ್ಚಲಾಗುತ್ತದೆ. ಮೃತರ ಅಂತಿಮ ಸಂಸ್ಕಾರಕ್ಕಾಗಿ ಬರುವವರು ಅಂಗಡಿಗೆ ಬರುತ್ತಾರೆ ಎಂಬ ಕಾರಣಕ್ಕೆ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.