ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಲ್ಲಿಸಿದ್ದ ಲಾರಿಯೊಂದರಲ್ಲಿ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಮಂಗಳೂರು ಕಡೆಯಿಂದ ಬಂದಿದ್ದ ಲಾರಿ ಎರಡು ದಿನಗಳ ಹಿಂದೆ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಿಟಿ ಲ್ಯಾಂಡ್ ಹೊಟೇಲ್ ಸಮೀಪ ನಿಲ್ಲಿಸಲಾಗಿತ್ತು. ಎರಡು ದಿನಗಳಾದರೂ ಅಲ್ಲಿಂದ ತೆರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು, ಇಂದು(ಡಿ.29) ಬೆಳಗ್ಗೆ ಲಾರಿಯೊಳಗೆ ಇಣುಕಿದ್ದಾರೆ. ಈ ವೇಳೆ ವಯಸ್ಸಾದ ಚಾಲಕರೋರ್ವರು ಮಲಗಿದ್ದ ಸ್ಥಿತಿಯಲ್ಲಿದ್ದರು. ಎಬ್ಬಿಸಲು ಯತ್ನಿಸಿದಾಗ ಎದ್ದಿರಲಿಲ್ಲ. ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ.
ಕೂಡಲೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಸ್ ಐ ರಾಜೇಶ್ ಕೆ ವಿ, “ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ಮೃತಪಟ್ಟ ಚಾಲಕನನ್ನು ಖಲೀಲ್ ಖಾನ್(50) ಎಂದು ತಿಳಿದು ಬಂದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ಎಂದು ಸದ್ಯಕ್ಕೆ ಮಾಹಿತಿ ದೊರಕಿದೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೇವೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದೇವೆ. ಲಾರಿಯಲ್ಲಿ ಯಾವುದೇ ಲೋಡ್ ಇರಲಿಲ್ಲ. ಮಂಗಳೂರು ಕಡೆಯಿಂದ ಬಂದಿತ್ತು” ಎಂದು ಮಾಹಿತಿ ನೀಡಿದ್ದಾರೆ.
ಲಾರಿಯ ಮಾಲೀಕನಿಗೆ ಮಾಹಿತಿ ನೀಡಿದ್ದ ಖಲೀಲ್ ಖಾನ್
“ಮೃತಪಟ್ಟ ಲಾರಿಯ ಚಾಲಕ ಖಲೀಲ್ ಖಾನ್, ಪಿರಿಯಾಪಟ್ಟಣ ಮೂಲದ ಲಾರಿಯ ಮಾಲೀಕನಿಗೆ ಕರೆ ಮಾಡಿ, ‘ತನಗೆ ಎದೆನೋವು ಆಗುತ್ತಿದೆ’ ಎಂದು ತಿಳಿಸಿದ್ದರು ಎಂಬ ಅಂಶ ತಿಳಿದುಬಂದಿದೆ. ಆದರೆ ಮಾಲೀಕ ನಿರ್ಲಕ್ಷ್ಯ ಮಾಡಿದ್ದರು. ಇಂದು ಬೆಳಗ್ಗೆ ಅವರು ಮೃತಪಟ್ಟಿದ್ದು ಗೊತ್ತಾಗಿದೆ” ಎಂದು ಉಪ್ಪಿನಂಗಡಿಯ ಸ್ಥಳೀಯರೊಬ್ಬರು ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.