ಡಿಸೆಂಬರ್ ಅಂತ್ಯದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ ಉರುಸ್ ಸಮಾರಂಭಗಳು ನಡೆಯುತ್ತಿವೆ. ಅಂತೆಯೇ, ದಾವಣಗೆರೆ ತಾಲೂಕಿನ ಬಾತಿ ಗ್ರಾಮದಲ್ಲಿರುವ ಹಜರತ್ ಸೈಯ್ಯದ್ ಚಮನ್ ಷಾ ವಲಿ ದರ್ಗಾದಲ್ಲಿಯು ಉರುಸ್ ನಡೆದಿದೆ. ಸಮಾರಂಭದಲ್ಲಿ ಹಿಂದು-ಮುಸ್ಲಿಂ ಸಮುದಾಯದ ಮಂದಿ ಒಟ್ಟಿಗೆ ಭಾಗಿಯಾಗಿದ್ದು, ಭಾವೈಕ್ಯತೆ ಮೆರೆದಿದ್ದಾರೆ.
ಬಾತಿ ಗ್ರಾಮದ ದರ್ಗಾ ನೂರಾರು ವರ್ಷಗಳ ಇತಿಹಾಸವಿದೆ. ಚಮನ್ ಷಾ ವಲಿ ಎಂಬವರು 1886ರಲ್ಲಿ ಗ್ರಾಮದಲ್ಲಿ ಬಾವಿ ತೋಡಿ ಗ್ರಾಮಸ್ಥರಿಗೆ ನೀರು ಕೊಟ್ಟಿದ್ದರು. ಅವರ ಸ್ಮರಣಾರ್ಥ ದರ್ಗಾವನ್ನು ಕಟ್ಟಲಾಗಿದೆ. ಆ ದರ್ಗಾದಲ್ಲಿ ಪ್ರತಿ ವರ್ಷ ಉರುಸ್ ನಡೆಯುತ್ತಿದೆ.
“ಉರುಸ್ ದಿನ ಗ್ರಾಮದ ಹಿಂದುಗಳು ಆಂಜನೇಯ ದೇವಾಲಯದಿಂದ ದರ್ಗಾಕ್ಕೆ ಗಂಧದ ಮೆರವಣಿಗೆ ಮಾಡುತ್ತಾರೆ. ಬಳಿಕ, ಕುರಿ, ಕೋಳಿ ಬಲಿ ಕೊಟ್ಟು ಅಡುಗೆ ಮಾಡುತ್ತಾರೆ. ಚಮನ್ ಷಾ ವಲಿಯವರಿಗೆ ಎಡೆ ಇಟ್ಟು, ಬಳಿಕ ಎಲ್ಲರಿಗೂ ಊಟ ಬಡಿಸುವ ಪದ್ದತಿ ಗ್ರಾಮದಲ್ಲಿದೆ” ಎಂದು ದರ್ಗಾದ ಅಧ್ಯಕ್ಷ ವೆಂಕಟೇಶ್ ತಿಳಿಸಿದ್ದಾರೆ.
“ದರ್ಗಾದಲ್ಲಿ ಆಶೀರ್ವಾದ ಪಡೆಯಲು ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಭಕ್ತರು ಬರುತ್ತಾರೆ. ಚಮನ್ ಷಾ ವಲಿ ಅವರು ನಿರ್ಮಿಸಿರುವ ಬಾವಿಯ ನೀರು ಸೇವಿಸಿದ್ರೆ ಅನಾರೋಗ್ಯಕ್ಕೆ ತುತ್ತಾದವರು ಗುಣಮುಖರಾತ್ತಾರೆ ಎಂಬುದು ಇಲ್ಲಿನವರ ನಂಬಿಕೆ” ಎಂದು ದರ್ಗಾದ ಸೈಯ್ಯದ್ ಸಾದೀಕ್ ಚಿಸ್ತಿ ತಿಳಿಸಿದ್ದಾರೆ.