ನನ್ನಂತಹ ಬಿಜೆಪಿ ಮುಖಂಡನಿಗೇ ರಕ್ಷಣೆ ಇಲ್ಲ, ಮತ್ತಾರು ಸುರಕ್ಷಿತರು: ಬಿಜೆಪಿಯ ಮುಸ್ಲಿಂ ನಾಯಕ

Date:

ಉತ್ತರಾಖಂಡದ ಪುರೋಲ್‌ನಲ್ಲಿ ಕೋಮು ಹಿಂಸಾಚಾರ ಉದ್ವಿಗ್ನಗೊಂಡಿದೆ. ಮುಸ್ಲಿಂ ಸಮುದಾಯದ ಮೇಲೆ ಹಿಂದುತ್ವವಾದಿ ಗುಂಪುಗಳು ದಾಳಿ ಮಾಡುತ್ತಿವೆ. ಹಲವರು ಭಯಗೊಂಡು ಊರು ತೊರೆಯುತ್ತಿದ್ದಾರೆ. ಪುರೋಲ್‌ ತೊರೆದ ಬಿಜೆಪಿ ಮುಸ್ಲಿಂ ನಾಯಕನ ಮಾತುಗಳು ಇಲ್ಲಿವೆ...

ಕಳೆದ ವಾರ (ಜೂನ್ 7) ಉತ್ತರಾಖಂಡದ ಉತ್ತರಕಾಶಿಯ ಬಿಜೆಪಿ ಮುಖಂಡ ಮೊಹಮ್ಮದ್ ಜಾಹಿದ್ ಅವರು ಪುರೋಲಾದ ಮನೆಯನ್ನು ದಿಢೀರನೆ ಖಾಲಿ ಮಾಡಿದರು. ತಮ್ಮ ಮನೆಯ ಸಾಮಾನುಗಳನ್ನು ಗಂಟುಮೂಟೆ ಕಟ್ಟಿಕೊಂಡು, ಕುಟುಂಬಸ್ಥರೊಂದಿಗೆ ರಾಜಧಾನಿ ಡೆಹ್ರಾಡೂನ್‌ನ ತಮ್ಮ ಸಂಬಂಧಿಕರ ಮನೆಗೆ ಹೋದರು.

ಜಾಹಿದ್ ಅವರು ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ (ಒಂದು ಗಂಡು-ಒಂದು ಹೆಣ್ಣು) ಕಳೆದ ಐದು ದಿನಗಳಿಂದ ಡೆಹ್ರಾಡೂನ್‌ನಲ್ಲಿ ನೆಲೆಸಿದ್ದಾರೆ. ‘ನನ್ನ ಕುಟುಂಬದ ರಕ್ಷಣೆಯ ಬಗ್ಗೆ ನನಗೆ ಭಯವಾಯಿತು. ಹಾಗಾಗಿ, ನಾವು ಪುರೋಲ್‌ಅನ್ನು ಬಿಟ್ಟು ಬಂದೆವು’ ಎಂದು ಜಾಹಿದ್ ಹೇಳಿಕೊಂಡಿದ್ದಾರೆ.

ಅಂದಹಾಗೆ, ಜಾಹಿದ್ ಅವರು ಉತ್ತರಕಾಶಿಯ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿದ್ದಾರೆ. ಅಲ್ಲದೆ, ಉತ್ತರಾಖಂಡದಲ್ಲಿ ಬಿಜೆಪಿಯೇ ಅಧಿಕಾರಿದಲ್ಲಿದೆ. ಬಿಜೆಪಿ ನಾಯಕ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ತಮ್ಮದೇ ಪಕ್ಷ ಅಧಿಕಾರದಲ್ಲಿರೂ, ತಮ್ಮದೇ ಜಿಲ್ಲೆ, ತಮ್ಮದೇ ಊರಿನಲ್ಲಿ ಜಾಹಿದ್ ಅವರಿಗೆ ಅಭದ್ರತೆ ಕಾಡಿದೆ. ಅವರು ಊರು ತೊರೆದು ಬಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜಾಹಿದ್ ಅವರು ಪುರೋಲ್‌ನಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆ. 80ರ ದಶಕದಲ್ಲಿ ಪುರೋಲ್‌ ಶಾಂತಿಯುತ ನಗರವಾಗಿತ್ತು. 1981ರಲ್ಲಿ ಜಾಹಿದ್‌ ಅವರ ಅಣ್ಣ ಅಬ್ದುಲ್ ವಾಹಿದ್ ಪುರೋಲ್‌ಗೆ ತೆರಳಿ ಬೀಡುಬಿಟ್ಟಿದ್ದರು. ಬಳಿಕ, 1990ರಲ್ಲಿ ಜಾಹಿದ್‌ ಕೂಡ ಅಲ್ಲಿ ವಾಸಿಸಲಾರಂಭಿಸಿದರು. ಅವರು ಗಾರ್ಮೆಂಟ್‌ ವ್ಯಾಪಾರ ಆರಂಭಿಸಿದ್ದರು. ಕಳೆದ ತಿಂಗಳು (ಮೇ) 26ರವರೆಗೂ ವ್ಯಾಪಾರವೂ ಚೆನ್ನಾಗಿತ್ತು. ಜೀವನವೂ ಉತ್ತಮವಾಗಿ ನಡೆಯುತ್ತಿತ್ತು. ಈ ನಡುವೆ ಅವರು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರೂ ಆಗಿದ್ದರು.

ಆದರೆ, ಪುರೋಲ್‌ನಲ್ಲಿ ಇಬ್ಬರು ಯುವಕರು (ಒಬ್ಬ ಹಿಂದು, ಮತ್ತೊಬ್ಬ ಮುಸ್ಲಿಂ) ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ್ದರು. ಆ ಘಟನೆಯನ್ನು ಹಿಂದುತ್ವವಾದಿಗಳು ಲವ್‌ ಜಿಹಾದ್‌ ಎಂದು ಬಿಂಬಿಸಿದರು. ಮೇ 26ರಂದು ಪುರೋಲ್‌ನಲ್ಲಿ ಹಿಂಸಾಚಾರ ಆರಂಭವಾಯಿತು. ಕೋಮುವಾದಿ ಹಿಂಸಾಚಾರವು ಉದ್ವಿಗ್ನಗೊಂಡ ಪರಿಣಾಮ ಜಾಹಿದ್ ಅವರು ತಮ್ಮ ಮನೆಯನ್ನು ಖಾಲಿ ಮಾಡಿಕೊಂಡು ಬರಬೇಕಾಯಿತು.

ಅಲ್ಲದೆ, ಜಾಹಿದ್ ತನ್ನ ಮನೆ ಮತ್ತು ಅಂಗಡಿಯನ್ನು ಹಿಂದೂ ನಿವಾಸಿಯಿಂದ ಬಾಡಿಗೆಗೆ ಪಡೆದಿದ್ದರು. ಕೋಮು ಉದ್ವಿಗ್ನತೆಯನ್ನು ಅರಿತ ಮನೆ ಮಾಲಿಕರು ಜಾಹಿದ್ ಅವರಿಗೆ ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದರು.

ಈ ಸುದ್ದಿ ಓದಿದ್ದೀರಾ?: ಉತ್ತರಾಖಂಡ | ಪುರೋಲ ಪಟ್ಟಣ ತೊರೆಯುತ್ತಿರುವ ಮುಸ್ಲಿಮ್‌ ವರ್ತಕರು

“ನಾನು ಕಳೆದ 7-8 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆಗುವುದಕ್ಕೂ ಮುನ್ನ ಮೂರು ವರ್ಷ ಸಂಚಾಲಕರಾಗಿ, ಮೂರು ವರ್ಷ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲಿ ಸ್ಥಾನಮಾನ ಹೊಂದಿರುವ ನನಗೆ ಇಷ್ಟೊಂದು ಬೆದರಿಕೆಯಿದೆ. ಇನ್ನು ಸಾಮಾನ್ಯರ ಪರಿಸ್ಥಿತಿ ಏನು” ಎಂದು ಅವರು ಆತಂಕ ವ್ಯಕ್ತಪಡಿಸಿದರು.

“ನಾವು ಮತ್ತೆ ಪುರೋಲ್‌ಗೆ ಹಿಂದಿರುಗುವುದಿಲ್ಲ. ಅಲ್ಲಿನ ಹಿಂದುತ್ವವಾದಿಗಳು ನಮ್ಮ ವಿರುದ್ಧ ದ್ವೇಷ ಹೊಂದಿದ್ದಾರೆ. ಜೂನ್‌ 5ರಂದು ತಮ್ಮ ಪಕ್ಕದ ಊರಿನಿಂದ ಬಂದಿದ್ದ ಪ್ರಕಾಶ್ ಜಬ್ರಾಲ್‌ ಎಂಬಾತ ನನ್ನ ಮಗ ಮತ್ತು ಸಂಬಂಧಿಕರಿಗೆ ಬೆದರಿಕೆ ಹಾಕಿದ್ದಾನೆ. ನಮ್ಮ ಅಂಗಡಿಯನ್ನು ಸುಟ್ಟು ಹಾಕುವುದಾಗಿ ಹೇಳಿ ಹೋಗಿದ್ದಾನೆ. ಇದರಿಂದ ನನ್ನ ಮಗ ಭಯಗೊಂಡಿದ್ದಾನೆ” ಎಂದು ಜಾಹಿದ್ ವಿವರಿಸಿದ್ದಾಗಿ ‘ದಿ ಕ್ವಿಂಟ್‘ ವರದಿ ಮಾಡಿದೆ.

“ಆತನ ಬೆದರಿಕೆಯಿಂದಾಗಿ ನಾವು ಅಂಗಡಿಯನ್ನೂ ಖಾಲಿ ಮಾಡಿದೆವು. ಆ ವೇಳೆ, ನಮಗೆ ಪೊಲೀಸರು ರಕ್ಷಣೆ ಕೊಟ್ಟರು. 35 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಮ್ಮ ನೆರೆಹೊರೆಯಲ್ಲಿ ಹಿಂದು ಸ್ನೇಹಿತರಿದ್ದಾರೆ. ದೀಪಾವಳಿ, ಹೋಳಿ ಹಬ್ಬದ ಸಮಯದಲ್ಲಿ ನಾವು ಅವರ ಮನೆಗೆ ಹೋಗುತ್ತಿದ್ದೆವು. ಆದರೆ, ಅವರಾರೂ, ನಮಗೆ ಮನೆ ಖಾಲಿ ಮಾಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ಪರಿಸ್ಥಿತಿಗಳು ತಿಳಿಯಾಗುತ್ತವೆಯೆಂದು ಹೇಳಲಿಲ್ಲ. ಧೈರ್ಯ ತುಂಬಲಿಲ್ಲ” ಎಂದು ಜಾಹಿದ್ ಬೇಸರ ವ್ಯಕ್ತಪಡಿಸಿದರು.

“ಪರಿಸ್ಥಿತಿ ಸುಧಾರಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಜಾಹಿದ್ ಅವರು ಭಯದಿಂದ ಊರು ತೊರೆದಿದ್ದಾರೆ. ಅವರಿಗೆ ಯಾರ ಒತ್ತಡವೂ ಇರಲಿಲ್ಲ. ನಮ್ಮ ಪಕ್ಷ ಯಾವುದೇ ಸಮುದಾಯವನ್ನು ದಮನ ಮಾಡುವುದಿಲ್ಲ” ಎಂದು ಉತ್ತರಾಖಂಡ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ಇಂಟ್ಜರ್ ಹುಸೇನ್ ಹೇಳಿದ್ದಾರೆ.

ಆದರೆ, ಹುಸೇನ್‌ ಅವರ ಹೇಳಿಕೆಗಿಂತ ಸತ್ಯಗಳು ಭಿನ್ನವಾಗಿವೆ. 2018ರಿಂದ ಇಲ್ಲಿಯವರೆಗೆ ಉತ್ತರಾಖಂಡದಲ್ಲಿ 23 ಕೋಮು ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಮುಸ್ಲಿಮರ ವಿರುದ್ಧ ಹಲವಾರು ಬೃಹತ್ ಪ್ರತಿಭಟನೆಗಳು ನಡೆದಿವೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಹಲವರು ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳನ್ನು ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸಂವಿಧಾನ ರಕ್ಷಣೆ ಬೇಕಾದರೆ ಎಲ್ಲ ರಾಜ್ಯಗಳಿಂದ ಬಿಜೆಪಿ ಸರ್ಕಾರ ಕೆಳಗಿಳಿಸಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೊದಲ ಹಂತದ ಮತದಾನ | ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಬಾಂಬ್ ಪತ್ತೆ, ಮಣಿಪುರದಲ್ಲೂ ಹಿಂಸಾಚಾರ

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪಶ್ಚಿಮ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...

ತಡವಾಗಿ ತಲುಪಿದ ವಿಮಾನ; ಒಲಿಂಪಿಕ್ ಅರ್ಹತಾ ಪಂದ್ಯದಿಂದ ಹೊರಗುಳಿದ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಸುಜೀತ್ ಕಲ್ಕಲ್‌

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡ ಕುಪ್ತಿಪಟು ದೀಪಕ್ ಪೂನಿಯಾ...

ಡಿಡಿ ನ್ಯೂಸ್ ಲೋಗೊ ಬಣ್ಣ ಕೇಸರೀಕರಣ: ವ್ಯಾಪಕ ಆಕ್ರೋಶ

ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್‌ ಲೋಗೊ...