- ‘ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟರೆ ಅದರ ಮಜವೇ ಬೇರೆ ಇರಲಿದೆ’
- ‘ಕಾಂಗ್ರೆಸ್ ಮಾದರಿಯಲ್ಲಿ ಎರಡು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಲಿ’
ಮಾಜಿ ಸಚಿವ ವಿ.ಸೋಮಣ್ಣ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟರೆ ಅದರ ಮಜವೇ ಬೇರೆ ಇರುತ್ತದೆ. ನನ್ನ ಅನುಭವ ಬಳಸಿಕೊಳ್ಳುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟಿದ್ದು” ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷದಲ್ಲಿ ನೂರಾರು ನಾಯಕರು ಇದ್ದಾರೆ. ಕಾರ್ಯಾಧ್ಯಕ್ಷರ ಮೂಲಕ ಕಾಂಗ್ರೆಸ್ನವರು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾದರಿಯಲ್ಲೇ ಬಿಜೆಪಿಯಲ್ಲೂ ಎರಡು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಲಿ. ಆ ಮೂಲಕ ನಾವು ಹಾಗೇ ಕೆಲಸ ಮಾಡಬಹುದು. ನನಗೆ ಅವಕಾಶ ನೀಡಿದರೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗಿಂತ ವೇಗವಾಗಿ ಕೆಲಸ ಮಾಡುತ್ತೇನೆ” ಎಂದು ಇಂಗಿತ ವ್ಯಕ್ತಪಡಿಸಿದರು.
ಡಿಕೆಶಿ ಸಿಎಂ ಆಗಲಿ
“ಕಮಿಷನ್ ಆರೋಪ ನಾವು ಮಾಡುತ್ತಿಲ್ಲ. ಗುತ್ತಿಗೆದಾರರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಚಲಿತರಾಗಬಾರದು. ಉಪಮುಖ್ಯಮಂತ್ರಿ ಸ್ಥಾನದಿಂದ ಇನ್ನೊಂದು ಹೆಜ್ಜೆ ಮುಂದೆ ಹೋಗೋದಿದೆ. ಈ ಹಿಂದೆ ಡಿಕೆಶಿ ಸಿಎಂ ಆಗಲಿ ಅಂತಾ ನಾನೇ ಹೇಳಿದ್ದೆ. ರಾಜಕೀಯ ಬೇರೆ, ಅವರನ್ನು ಬೇರೆಯವರಿಗೆ ಹೋಲಿಸಲ್ಲ. ಗುತ್ತಿಗೆದಾರರ ಕಾಮಗಾರಿ ಬಿಲ್ ತಡೆಹಿಡಿಯುವುದು ಬೇಡ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 2 ಗಂಟೆ 10 ನಿಮಿಷಗಳ ಕ್ರೌರ್ಯ, 3 ನಿಮಿಷಗಳ ತೋರಿಕೆಯ ಕಾರ್ಯ
“ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆಯಿಂದ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ನಾವು ಅನುಭವಿಸಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಂಪಣ್ಣ ಹೇಳಿರುವುದೆಲ್ಲ ಸತ್ಯ ಎನ್ನುತ್ತಿದ್ದರು. ಈಗ ಯಾಕೆ ಕೆಂಪಣ್ಣ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ” ಎಂದು ಪ್ರಶ್ನಿಸಿದರು.
ಬಿಬಿಎಂಪಿ ಲ್ಯಾಬ್ನಲ್ಲಿ ಬೆಂಕಿ ಪ್ರಕರಣವಾಗಿ ಪ್ರತಿಕ್ರಿಯಿಸಿ, “ನನ್ನ ಪ್ರಕಾರ ಇದೊಂದು ಆಕಸ್ಮಿಕವಾಗಿ ನಡೆದಿರುವ ಘಟನೆ. ಆದರೆ ಡಿಕೆ ಶಿವಕುಮಾರ್ ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪಿಸಿದ್ದಾರೆ. ಸರ್ಕಾರ, ಅಧಿಕಾರ ಎಂದಿಗೂ ಶಾಶ್ವತವಲ್ಲ. ನನ್ನ ಈ ಮಾತನ್ನು ನೀತಿ ಪಾಠ ಅಂತ ಡಿಕೆಶಿ ತಿಳಿದುಕೊಳ್ಳುವುದು ಬೇಡ” ಎಂದರು.