ಜಗತ್ತು ಎಂಬ ಪರಿಕಲ್ಪನೆ ಬರುವುದೇ ಮನುಷ್ಯನಿಂದ. ಯಾವುದೇ ವಸ್ತು ವಿಷಯಗಳಿಗೂ ಇರದ ಅಧಿಕಾರ ಕೇವಲ ಮನುಷ್ಯನಿಗೆ ಮಾತ್ರವಿದೆ. ಇಡೀ ಬ್ರಹ್ಮಾಂಡದಲ್ಲಿ ಮನುಷ್ಯ ಮಾತ್ರ ಅಧಿಕಾರ ಜೀವಿ ಎಂದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎನ್. ಎಸ್. ಗುಂಡೂರ ಅಭಿಪ್ರಾಯಪಟ್ಟರು.
ಬೀದರ ಜಿಲ್ಲೆಯ ಬಸವಕಲ್ಯಾಣದ ಶಾಂತಿನಿಕೇತನ ಶಾಲೆಯಲ್ಲಿ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ 78ನೇ ಉಪನ್ಯಾಸ ಸಮಾರಂಭದಲ್ಲಿ ‘ಜ್ಞಾನ ಮತ್ತು ಅಧಿಕಾರ ಮೀಮಾಂಸೆ’ ಕುರಿತು ಮಾತನಾಡಿ, “ಅಧಿಕಾರ ಎಂಬ ಪರಿಕಲ್ಪನೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ” ಎಂದರು.
“ಮನುಷ್ಯ ಹೋದ ಕಡೆಗೆಲ್ಲ ಸಂಬಂಧವನ್ನು ತರುತ್ತಾನೆ. ಕೌಟುಂಬಿಕ ನೆಲೆಯಿಂದ ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ನೆಲೆಯಲ್ಲಿ ಅಧಿಕಾರದ ಸಂಬಂಧ ಸ್ಥಾಪಿಸುತ್ತಾನೆ. ಅಧಿಕಾರ ರಹಿತವಾದದ್ದು ಏನೂ ಇಲ್ಲ. ಎಲ್ಲವೂ ಅಧಿಕಾರ ಮತ್ತು ಪ್ರಭುತ್ವದಿಂದಲೇ ಆಗಿರುತ್ತವೆ. ಎಲ್ಲ ಮಾನವ ಸಂಬಂಧಗಳು ಅಧಿಕಾರದ ಸಂಬಂಧಗಳೆಂದು ಮಿಶಲ್ ಫುಕೋ ಕಥನಿಸಿದ್ದಾನೆ. ಅಧಿಕಾರವೆಂಬುದು ನೇತ್ಯಾತ್ಮಕವಾಗಿರುವುದಿಲ್ಲ. ಅದು ಸಕಾರತ್ಮಕವಾಗಿಯೂ ಇರುತ್ತದೆ. ಅಧಿಕಾರ ಸಂಬಂಧಗಳಿದ್ದಲ್ಲಿ ಪ್ರತಿಭಟನೆಯೂ ಇರುತ್ತದೆ. ಮನುಷ್ಯ ಲೋಕದಲ್ಲಿ ಯಾವುದು ಇದ್ದ ಹಾಗೆ ಇರದು. ಎಲ್ಲವನ್ನು ಅಧಿಕಾರದ ಭಾಗವಾಗಿಯೇ ನೋಡಬೇಕು. ಎಲ್ಲಡೆ ಪಸರಿಸಿದ ಸಾಮಾಜಿಕ ದೇಹವನ್ನು ಅಧಿಕಾರದ ಬಂಧದಿಂದ ಸ್ಥಾಪಿತಗೊಂಡಿದೆ” ಎಂದರು
“ವಚನಗಳು ಬೌದ್ಧಿಕ ಮತ್ತು ಸಾಂಸ್ಕೃತಿಕ ಪಠ್ಯಗಳಾಗಿವೆ. ಪಠ್ಯಗಳು ಮನುಷ್ಯನ ಜತೆಗೆ ಒಡನಾಡಿದಾಗ ಅವುಗಳಿಗೆ ಜೀವಂತಿಕೆ ಮತ್ತು ಬಲ ಎರಡೂ ಬರುತ್ತದೆ. ಪಠ್ಯಗಳು ಸಾಂಸ್ಕೃತಿಕ ರಾಜಕಾರಣದ ಭಾಗವು ಆಗಿರುತ್ತವೆ. ಪಠ್ಯಗಳು ಕೇವಲ ಓದಿ ಪರೀಕ್ಷೆ ಬರೆಯುವ ಪರಿಕರಗಳಲ್ಲ. ಅವು ಸಾಂಸ್ಕೃತಿಕ ರಾಜಕಾರಣ ನಿರ್ಧರಿಸುವ ಶಕ್ತಿಗಳು. ಆಧುನಿಕ ಕಾಲದಲ್ಲಿ ಸಮಾಜವನ್ನು ಜಾತ್ಯಾತೀತವಾಗಿ ಒಂದುಗೂಡಿಸಲು ಹೊಸ ಭಾರತವಾಗಿ ನಿರ್ಮಿಸಲು ಸಂವಿಧಾನ ಪಠ್ಯವಾಗಿ ಕೆಲಸ ಮಾಡಿದೆ. ಡಾ.ಅಂಬೇಡ್ಕರ, ಗಾಂಧಿಜಿ ಅವರ ರಾಜಕೀಯ ದರ್ಶನದ ಹಿಂದೆ ಅವರ ಬರಹಗಳು ಪಠ್ಯವಾಗಿ ಕಾರ್ಯನಿರ್ವಹಿಸಿವೆ. ಎಲ್ಲರಿಗೂ ಮುಕ್ತವಾಗಿ ತೆರೆದುಕೊಂಡ ವಚನಗಳು ಅಧಿಕಾರದ ಪಠ್ಯವಾಗಿಯೂ ಆಧುನಿಕ ಕಾಲದಲ್ಲಿ ಬಳಕೆಯಾದವು” ಎಂದು ಹೇಳಿದರು.
“ಮುದ್ರಣ ಸಂಸ್ಕೃತಿ ಶುರುವಾದ ಮೇಲೆ ವಚನ ಸಂಗ್ರಹ ಸಂಪಾದನೆ, ವ್ಯಾಖ್ಯಾನ ವಿಶ್ಲೇಷ್ಲಣೆ ನಡೆದವು. ಹಳಕಟ್ಟಿ, ಪಾವಟೆ, ಎಂ.ಎಂ.ಕಲಬುರ್ಗಿ ಮೊದಲಾದವರು ಕರ್ನಾಟಕ ವಿಶ್ವವಿದ್ಯಾಲಯದಿಂದ ವಚನ ಸಾಂಸ್ಕೃತಿಯನ್ನು ಕಟ್ಟಲು ಶ್ರಮಿಸಿದರು. ಮನುಷ್ಯ, ಪಠ್ಯ ಮತ್ತು ಸಂಸ್ಕೃತಿ ಇವುಗಳ ಜೊತೆಗೆ ಅಧಿಕಾರದ ರಚನೆ ಹಾಗೂ ಸಂಬಂಧ ಇದ್ದೇ ಇರುತ್ತದೆ. ಸಂಸ್ಕೃತಿಯ ರಾಚನಿಕತೆಯಲ್ಲಿ ಮತ್ತು ಜ್ಞಾನದ ಉತ್ಪಾದನೆಯ ಆಳದಲ್ಲಿ ಅಧಿಕಾರ ಸ್ಥಾಪಿತವಾಗಿರುತ್ತದೆ” ಎಂದರು.
ಕಲಬುರ್ಗಿ ಸಿಯುಕೆ ಪ್ರಾಧ್ಯಾಪಕ ಡಾ. ಮಹೇಂದ್ರ ಎಂ. ಮಾತನಾಡಿ, “ಅಧಿಕಾರವೆಂಬುದು ಬಹು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಹಣದ ದರ್ಪ, ರಾಜಕೀಯ ಪ್ರಧ್ಯಾನ್ಯತೆಯೂ ಅಧಿಕಾರವಾಗಿ ಗ್ರಹಿಸಿದೇವೆ. ಎರಡು ಗುಂಪುಗಳ ನಡುವೆ ನಡೆದ ಕದನ ಚರಿತ್ರೆಯಾಯಿತು. ಮಾರ್ಕ್ಸ್ ನಿರೂಪಿತ ಅಧಿಕಾರಕ್ಕಿಂತ ಮಿಶಲ್ ಫುಕೋ ನಿರೂಪಿತ ಅಧಿಕಾರ ಸೂಕ್ಷ್ಮವಾಗಿದೆ. ಅಧಿಕಾರವು ಮನುಷ್ಯನ ಒಳಸ್ತರದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದು ನಿರೂಪಿಸುತ್ತದೆ. ಎಲ್ಲವನ್ನೂ ಮೀರುವವನಾಗಬೇಕಾದ ಮನುಷ್ಯನು ಅಧಿಕಾರ ಸಂಬಂಧದಿಂದಾಗಿ ಕುಬ್ಜನಾಗುತ್ತಿದ್ದಾನೆ. ಹಾಗೆ ನೋಡಿದರೆ ಮನುಷ್ಯ ಒಬ್ಬ ರಾಜಕೀಯ ಜೀವಿ. ಅವನ ಬದುಕಿನ ಎಲ್ಲ ನೆಲೆಗಳಲ್ಲಿ ರಾಜಕೀಯ ಆವರಿಸಿದೆ” ಎಂದರು.
ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, “ಪ್ರಭುತ್ವ ಮತ್ತು ಅಧಿಕಾರದದಾಚೆಗೆ ಯಾವ ಸಂಬಂಧವನ್ನು ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯನಲ್ಲಿ ಆಳುವ ಪ್ರವೃತ್ತಿ ಸಹಜವಾದುದ್ದು. ಆದ್ದರಿಂದಲೇ ಹಲವು ಸಾಧ್ಯತೆಗಳು ಮತ್ತು ಅವಾಂತರಗಳು ನಡೆಯುತ್ತಲೇ ಇರುತ್ತವೆ. ಸಾರ್ತ್ರೆ, ಮಿಶಲ ಫುಕೋ, ಡೇರಿಡಾ, ಗ್ರಾಮ್ಶಿ, ಮೊದಲಾದವರು ಜ್ಞಾನ ಮತ್ತು ಅಧಿಕಾರದ ಜೊತೆಗೆ ಮನುಷ್ಯ ಸಂಬಂಧ ಮತ್ತು ಅಸ್ತಿತ್ವದ ಕುರಿತು ಸಿದ್ಧಾಂತವೊಂದನ್ನು ಕಟ್ಟಿಕೊಟ್ಟಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಣ್ಣ ಧಾರ್ಮಿಕ ಪ್ರತಿನಿಧಿ ಅಲ್ಲ, ಜಾಗತಿಕ ಹೀರೋ: ಸಿದ್ದಪ್ಪ ಮೂಲಗೆ
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೆದ್ ಅಧ್ಯಕ್ಷತೆ ವಹಿಸಿದರು. ಬಿಡಿಪಿಸಿ ನಿರ್ದೇಶಕ ಮಲ್ಲಯ್ಯಾ ಹಿರೇಮಠ, ಪವಿತ್ರಾ ಗಿರಗಂಟೆ, ನಾಗೇಂದ್ರ ಬಿರಾದಾರ, ರವಿ ಕೊಳಕುರ, ಚಂದ್ರಕಾಂತ ಅಕ್ಕಣ್ಣ, ನಾಗಪ್ಪ ನಿಣ್ಣೆ, ಶರಣು ಬಿರಾದಾರ, ಪ್ರೊ. ಮೀನಾಕ್ಷಿ ಬಿರಾದಾರ, ಡಾ. ಚಿತ್ರಶೇಖರ ಚಿರಳ್ಳಿ, ಸೂರ್ಯಕಾಂತ ಪಾಟೀಲ, ಲಕ್ಷ್ಮಿಬಾಯಿ ಪಾಟೀಲ, ಚನ್ನವೀರ ಜಮಾದಾರ, ಶಾಲಿವಾನ ಕಾಕನಾಳೆ, ಮಾಣಿಕಪ್ಪ ಸಂಗನಬಟ್ಟೆ ಸೇರಿ ಹಲವರಿದ್ದರು. ದೇವೇಂದ್ರ ಬರಗಾಲೆ ನಿರೂಪಿಸಿದರು. ಡಾ.ಶಿವಾಜಿ ಮೇತ್ರೆ ಸ್ವಾಗತಿಸಿದರು. ಡಾ. ರವೀಂದ್ರನಾಥ ನಾರಾಯಣಪೂರ ವಂದಿಸಿದರು.