ಸಂದರ್ಭ ಬಂದರೆ ದತ್ತಮಾಲೆಯನ್ನೂ ಹಾಕುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭಾನುವಾರ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ವಿಶ್ವ ಹಿಂದು ಪರಿಷತ್ ಸ್ವಾಗತಿಸಿದೆ. ದತ್ತಮಾಲೆ ಧರಿಸುವ ನಿರ್ಧಾರ ಸ್ವಾಗತಾರ್ಹ ಎಂದಿದೆ.
ಪಕ್ಷದ ಹೆಸರಿನಲ್ಲಿಯೇ ‘ಜಾತ್ಯತೀತ’ತೆ ಇಟ್ಟುಕೊಂಡಿದ್ದ ಕುಮಾರಸ್ವಾಮಿ ಅವರು ಇದೀಗ ಹಿಂದುತ್ವವಾದ ಅಥವಾ ಧರ್ಮ ರಾಜಕಾರಣದ ಸೋಗು ಹಾಕಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಬಲಪಂಥೀಯ ವಾದವನ್ನು ವಿರೋಧಿಸುತ್ತಿದ್ದ ಅವರು, ಈಗ ಬಿಜೆಪಿಯೊಂದಿಗೆ ಕೈ ಜೋಡಿದ್ದಾರೆ. ಬಲಪಂಥೀಯ ವಾದವನ್ನು ಬೆಂಬಲಿಸುತ್ತಿದ್ದಾರೆ. ಅಲ್ಲದೆ, ಚಿಕ್ಕಮಗಳೂರಿನ ಬಾಬಾ ಬುಡನ್ಗಿರಿಯಲ್ಲಿ ದತ್ತಮಾಲೆಯನ್ನೂ ಹಾಕಿಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ.
ಅವರ ಹೇಳಿಕೆಯನ್ನು ಸ್ವಾಗತಿಸಿರುವ ವಿಎಚ್ಪಿ ಮುಖಂಡ ರಘು, “ಕುಮಾರಸ್ವಾಮಿ ಅವರು ದತ್ತಮಾಲೆ ಧರಿಸಲು ನಿರ್ಧರಿಸುವುದು ಸ್ವಾಗತಾರ್ಹ. ನಿಮ್ಮ ರಾಜಕೀಯ ಭವಿಷ್ಯ ಬದಲಾಗಲಿದ್ದು, ಇನ್ನಷ್ಟು ಶಕ್ತಿ ನೀಡಲಿ ಎಂದು ದತ್ತಾತ್ರೇಯ ಸ್ವಾಮಿಯಲ್ಲಿ ಬೇಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಧರ್ಮವನ್ನು ಮೀರಿ ಹಿಂದು-ಮುಸ್ಲಿಮರು ಒಟ್ಟಿಗೆ ಪೂಜಿಸುವ ಬಾಬಾ ಬುಡನ್ಗಿರಿಯನ್ನು ದತ್ತಪೀಠ ಮಾಡಲು ಹಿಂದುತ್ವವಾದಿ ಕೋಮು ಸಂಘಟನೆಗಳು ಹವಣಿಸುತ್ತಿವೆ. ಹಲವಾರು ವರ್ಷಗಳಿಂದ ಬಾಬಾ ಬುಡನ್ಗಿರಿ ವಿಚಾರ ವಿವಾದದಲ್ಲಿದೆ. ಈ ನಡುವೆ, ಡಿಸೆಂಬರ್ 17 ರಿಂದ 26ರವರೆಗೆ ಬಾಬಾ ಬುಡನ್ಗಿರಿಯಲ್ಲಿ ದತ್ತಮಾಲಾ ಅಭಿಯಾನವನ್ನು ಹಿಂದುತ್ವಾವಾದಿ ಕೋಮು ಸಂಘಟನೆಗಳು ಆಯೋಜಿಸಿವೆ.