ಮಹಾರಾಷ್ಟ್ರದ ಪುಣೆಯಲ್ಲಿ ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್ (ಪಿಎಂಪಿಎಂಎಲ್)ನ ಬಸ್ ಚಾಲಕನೊಬ್ಬ ಅಜಾರೂಕತೆಯಿಂದ ಬಸ್ ಚಾಲನೆ ಮಾಡಿದ್ದಾರೆ. ಹಿಮ್ಮುಖವಾಗಿ ಬಸ್ ಅನ್ನು ಚಲಾಯಿಸಿದ್ದು, ಹಲವಾರು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾರೆ. ಬೇಜವಬ್ದಾರಿತನದಿಂದ ಬಸ್ ಚಾಲನೆ ಮಾಡಿರುವ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆಯ ಸೇನಾಪತಿ ಬಾಪಟ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲಕ ಬಸ್ ಚಾಲನೆ ಮಾಡುವ ವೇಳೆ, ಬಸ್ನಲ್ಲಿದ್ದ ಪ್ರಯಾಣಿಕರು ಚೀರಾಟ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಸಾರಿಗೆ ಸಂಸ್ಥೆಯು ಬಸ್ ಚಾಲನೆ ಮಾಡಲು ಖಾಸಗಿ ಗುತ್ತಿಗೆದಾರರನ್ನು ಚಾಲಕನಾಗಿ ನೇಮಿಸಿಕೊಂಡಿದೆ ಎಂದು ಪಿಎಂಪಿಎಂಎಲ್ ಅಧಿಕಾರಿಗಳು ತಿಳಿಸಿದ್ದಾರೆ.
MH 14 HU 5725 ನೋಂದಣಿ ಸಂಖ್ಯೆಯ ಬಸ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿಂಚ್ವಾಡ್ ಗಾಂವ್ ಕಡೆಗೆ ಹೋಗುತ್ತಿತ್ತು. ಈ ವೇಳೆ ಬಸ್ ಚಾಲಕ ನಾಲ್ಕಾರು ವಾಹನ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಸ್ ತೆರಳುತ್ತಿದ್ದ ಮಾರ್ಗದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿತ್ತು. ಬಸ್ ಚಾಲಕ ರಸ್ತೆಯ ಹಂಪ್ ಅನ್ನು ತಪ್ಪಿಸಲು ಅಡ್ಡಾದಿಡ್ಡಿ ಬಸ್ ಚಾಲನೆ ಮಾಡಿದ್ದಾನೆ. ಈ ವೇಳೆ ಪಕ್ಕದಲ್ಲಿಯೇ ಇದ್ದ ಕಾರ್ಗಳಿಗೆ ಬಸ್ ಢಿಕ್ಕಿ ಹೊಡೆದಿದೆ. ಕಾರು ಚಾಲಕ ಬಸ್ ಅನ್ನು ನಿಲ್ಲಿಸಲು ಹೇಳಿದ್ದಾನೆ. ಅವರಿಂದ ತಪ್ಪಿಸಿಕೊಳ್ಳಲು ಆತ ಬಸ್ಅನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ ಎಂದು ತಿಳಿದುಬಂದಿದೆ.
“ಬಸ್ ಹಿಮ್ಮುಖವಾಗಿ ಚಲಿಸುವಾಗ ಹಿಂಬದಿಯಲ್ಲಿದ್ದ ಕೆಲವು ವಾಹನಗಳಿಗೂ ಢಿಕ್ಕಿ ಹೊಡೆದಿದೆ. ಬಳಿಕ, ಬಸ್ ಅನ್ನು ಮುಂದೆ ಚಾಲನೆ ಮಾಡಿದ್ದಾನೆ. ಈ ವೇಳೆ, ಕೆಲವರು ಬಸ್ ಚಾಲಕನನ್ನು ಬಲವಂತವಾಗಿ ನಿಲ್ಲಿಸಿದ್ದಾರೆ. ಚಾಲಕನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ” ಎಂದು ಚತುರ್ಶೃಂಗಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಕೋಲಿ ತಿಳಿಸಿದ್ದಾರೆ.
“ಪಿಎಂಪಿಎಂಎಲ್ ಬಸ್ ಚಾಲಕನನ್ನು ವಾರ್ಜೆ ಮಾಳವಾಡಿಯ ಅತುಲ್ನಗರ ನಿವಾಸಿ ನೀಲೇಶ್ ಜ್ಞಾನೇಶ್ವರ್ ಸಾವಂತ್ (31) ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಅಪರಾಧಿ ನರಹತ್ಯೆಗೆ ಪ್ರಯತ್ನ, ದುಡುಕಿನ ಚಾಲನೆ ಮತ್ತು ಸಾರ್ವಜನಿಕ ಆಸ್ತಿ ಹಾನಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯ ಆತನನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿ; ಬಯಲಾಯ್ತು ನಕಲಿ ಕಾರ್ಡ್ ಜಾಲ
“ಬಸ್ ಹಿಮ್ಮುಖ ದಿಕ್ಕಿನಲ್ಲಿ ಚಲಿಸುವಾಗ ಕನಿಷ್ಠ ಮೂರು ವಾಹನಗಳಿಗೆ ಢಿಕ್ಕಿ ಹೊಡೆದು ಹಾನಿಗೊಳಗಾದ ಬಗ್ಗೆ ನಮಗೆ ಮಾಹಿತಿ ಇದೆ. ಗಾಯಗೊಂಡಿರುವವರ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದಾಗ್ಯೂ, ಅಜಾಗರೂಕ ಕೃತ್ಯವು ಸಾವುನೋವುಗಳಿಗೆ ಕಾರಣವಾಗಬಹುದಾಗಿತ್ತು. ಅದು ಅಪರಾಧಿ ನರಹತ್ಯೆಗೆ ಸಂಬಂಧಿಸಿದ ನಿಬಂಧನೆಯನ್ನು ಅನ್ವಯಿಸಲಾಗಿದೆ” ಎಂದು ಚತುಶ್ರುಂಗಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಂಕುಶ್ ಚಿಂತಾಮನ್ ಹೇಳಿದರು.