ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜುಲೈ 9ರಿಂದ ಜಿ-20 ಶೃಂಗಸಭೆ ನಡೆಯಲಿದೆ. ಅದಕ್ಕಾಗಿ 47 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವ ರಾಜ್ಯ ಸರ್ಕಾರ, ಹಲವಾರು ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಈ ನಡುವೆ, ಹಂಪಿ ಪಾರಂಪರಿಕ ವಲಯದಲ್ಲಿದ್ದ 17 ರೆಸ್ಟೋರೆಂಟ್ಗಳು ಮತ್ತು ರೆಸಾರ್ಟ್ಗಳನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.
ರಕ್ಷಿತ ಅರಣ್ಯ ಪ್ರದೇಶ ವಲಯ ಮತ್ತು ಯುನೆಸ್ಕೋ ಅಡಿಯಲ್ಲಿ ಪಾರಂಪರಿಕ ತಾಣವೆಂದು ಗುರುತಿಸಲಾಗಿದ್ದ ಪ್ರದೇಶದಲ್ಲಿ ನಡೆಯುತ್ತಿದ್ದ ಹೋಮ್ಸ್ಟೇಗಳು, ರೆಸಾರ್ಟ್ಗಳು ಹಾಗೂ ರೆಸ್ಟೋರೆಂಟ್ಗಳನ್ನು ತೆರವುಗೊಳಿಸಿದ್ದಾರೆ. ಇವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮೂರು ತಿಂಗಳ ಹಿಂದೆಯೇ ನೋಟಿಸ್ ನೀಡಿದ್ದರು. ಆದರೂ, ಅವುಗಳ ಮಾಲೀಕರು ತೆರವುಗೊಳಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಬುಲ್ಡೋಜರ್ ಬಳಸಿ ನೆಲಸಮ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊಪ್ಪಳ ಜಿಲ್ಲೆಯ ಸಣಾಪುರ, ಆನೆಗುಂದಿ ಹಾಗೂ ವಿಜಯನಗರ ಜಿಲ್ಲೆಯ ಕಮಲಾಪುರ, ಕಡ್ಡಿರಾಂಪುರ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಹಲವಾರು ಜನರು ತಮ್ಮ ಮನೆಗಳ ಎದುರು ಕಟ್ಟಿಕೊಂಡಿದ್ದ ಆತಿಥ್ಯ ಕಟ್ಟಡಗಳನ್ನೂ ನೆಲಸಮ ಮಾಡಲಾಗಿದೆ ಎಂದು ಟಿಎನ್ಐಇ ವರದಿ ಮಾಡಿದೆ.
“ಪಾರಂಪರಿಕ ವಲಯದಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡುವಂತಿಲ್ಲ. ಆದರೆ, ನೆಲಸಮಗೊಂಡಿರುವ ಎಲ್ಲ ಕಟ್ಟಡಗಳು ಹಂಪಿ ಪಾರಂಪರಿಕ ವಲಯದಲ್ಲಿದ್ದವು. ಹೀಗಾಗಿ, ಅವುಗಳನ್ನು ನೆಲಸಮ ಮಾಡಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆಲಸಮವಾದ ಹೋಮ್ಸ್ಟೇಗಳು, ರೆಸಾರ್ಟ್ಗಳು ಹಾಗೂ ರೆಸ್ಟೋರೆಂಟ್ಗಳಿಗೆ ಸರ್ಕಾರ ಪರ್ಯಾಯ ಭೂಮಿಯನ್ನು ಸೂಚಿಸಿದೆ. ಅಲ್ಲಿ, ಹೋಮ್ಸ್ಟೇಗಳು, ರೆಸಾರ್ಟ್ಗಳು ಹಾಗೂ ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ?: ಹಂಪಿಯಲ್ಲಿ ಜಿ20 ಶೃಂಗಸಭೆ; ರಾಜ್ಯದ ಬೊಕ್ಕಸಕ್ಕೆ 47 ಕೋಟಿ ರೂ. ಹೊರೆ
ಈ ಹಿಂದೆಯೂ ಅಧಿಕಾರಿಗಳು ಹಂಪಿ ಸುತ್ತಮುತ್ತಲಿನ ಸುಮಾರು 40 ಹೋಮ್ಸ್ಟೇಗಳು, ರೆಸಾರ್ಟ್ಗಳು ಹಾಗೂ ರೆಸ್ಟೋರೆಂಟ್ಗಳನ್ನು ನೆಲಸಮ ಮಾಡಿದ್ದರು. ಆ ವೇಳೆ, ಅಧಿಕಾರಿಗಳ ವಿರುದ್ಧ ಸ್ಥಳೀಯರು ಮತ್ತು ರೆಸಾರ್ಟ್ಗಳ ಮಾಲೀಕರು ಪ್ರತಿಭಟನೆ ನಡೆಸಿದ್ದರು.
“ಹೋಮ್ಸ್ಟೇಗಳು, ರೆಸಾರ್ಟ್ಗಳು ಹಾಗೂ ರೆಸ್ಟೋರೆಂಟ್ಗಳು ತಾತ್ಕಾಲಿಕ ಕಟ್ಟಡಗಳಾಗಿವೆ. ಪ್ರವಾಸಿಗರಿಗೆ ತಂಗಲು, ವಿಶ್ರಾಂತಿ ಪಡೆಯಲು ನೆರವಾಗುತ್ತವೆ. ಅಲ್ಲದೆ, ಸ್ಥಳೀಯರಿಗೆ ಉದ್ಯೋಗವನ್ನೂ ನೀಡಿವೆ. ಆದರೆ, ಅಧಿಕಾರಿಗಳು ಅವುಗಳನ್ನು ನೆಲಸಮ ಮಾಡುತ್ತಿದ್ದಾರೆ. ನಮಗೆ ಪರ್ಯಾಯ ವ್ಯವಸ್ಥೆ ಮಾಡಬೇಕು” ಎಂದು ರೆಸಾರ್ಟ್ಗಳ ಮಾಲೀಕರು ಒತ್ತಾಯಿಸಿದ್ದಾರೆ.