ಶಿವಮೊಗ್ಗ ಗ್ರಾಮಾಂತರ ಭಾಗದ ಕೋಣೆ ಹೊಸೂರ್, ಚೋಡನಾಳ, ಬೇಡನಾಳ ಅಕ್ಕಪಕ್ಕ ಬರುವ ಈ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದಿಗೂ ಕೂಡಾ ಮೊಬೈಲ್ ನೆಟ್ವರ್ಕ್ ಸೇವೆ ಇಲ್ಲ. ಇಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಪ್ರಸ್ತುತ ನಾಗರಿಕ ಸೇವೆಗಳಿಂದ ವಂಚಿತರಾಗಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ಇಲ್ಲ. ಇದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಶಾಲಾ ಮಕ್ಕಳು ಹಾಗೂ ಪೋಷಕರು ಭಯಭೀತರಾಗಿದ್ದಾರೆ. ಶಾಲಾ ಕಾಂಪೌಂಡ್ ಕಾಂಟ್ರಾಕ್ಟ್ ತೆಗೆದುಕೊಂಡು ಕಟ್ಟಡ ಎಬ್ಬಿಸಿ ಸಂಪೂರ್ಣಗೊಳಿಸಿದ ಬಳಿಕ ಬಿಲ್ ಸಬ್ಮಿಟ್ ಮಾಡಿ ಹಣ ಪಡೆಯುವಂತೆ ಗ್ರಾಮ ಪಂಚಾಯಿತಿಯವರು ಮಾಹಿತಿ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಬಡವರ ಸಂಖ್ಯೆ ಜಾಸ್ತಿ ಇರುವ ಕಾರಣ ಮೊದಲೇ ದುಡ್ಡು ಖರ್ಚು ಮಾಡಿ ನಂತರ ಬಿಲ್ ಸಬ್ಮಿಟ್ ಮಾಡಿ ಹಣವನ್ನು ಪಡೆಯುವಷ್ಟು ಸ್ಥಿತಿವಂತರ ಸಂಖ್ಯೆ ಇಲ್ಲದ ಕಾರಣ ಶಾಲೆಯ ಕಾಂಪೌಂಡ್ ಮಾಡಲು ಆಗುತ್ತಿಲ್ಲ ಎಂಬುದು ಸ್ಥಳೀಯರ ಅವಲತ್ತಾಗಿದೆ.
ಕೋಣೆ ಹೊಸೂರಿನ ಗ್ರಾಮಸ್ಥ ನಂದನ್ ಕುಮಾರ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಜಿಯೋ ಟವರ್ ಹಾಕಿದ್ದಾರೆ. ಅದರೆ ಊರಿನಲ್ಲಿ ನೆಟ್ವರ್ಕ್ ಸೇವೆ ಸಿಗುವುದಿಲ್ಲ. ಹಾಗೆ ಬೆಟ್ಟ ಗುಡ್ಡ ತುದಿಯಲ್ಲಿ ನೆಟ್ವರ್ಕ್ಗೆ ಪ್ರಯತ್ನ ಮಾಡಬೇಕು. ಅದೂ ಕೂಡ ನಿಶ್ಚಿತವಿಲ್ಲ. ಇತ್ತೀಚಿನ ದಿನಗಳಲ್ಲಿ ಬಿಎಸ್ಎನ್ಎಲ್ ಟವರ್ ಸಿದ್ದಗೊಳಿಸಿದ್ದು, ಸಾರ್ವಜನಿಕ ಸೇವೆಗೆ ಯಾವಾಗ ಲಭ್ಯವಾಗುವುದೋ ಗೊತ್ತಿಲ್ಲ” ಎಂದು ತಿಳಿಸಿದರು.
ಗ್ರಾಮಸ್ಥ ನಾಗಾಲಿಂಗಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಊರಿನಲ್ಲಿ ಇರುವ ಕೆರೆ ಊಳೆತ್ತುವ ಕೆಲಸವಾಗಿಲ್ಲ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ನೀರು ಶೇಕರಣೆ ಇಲ್ಲದ ಕಾರಣ ಊರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದನ್ನೂ ಕೂಡಾ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಊರಿನಲ್ಲಿ ಸ್ಮಶಾನ ಭೂಮಿ ವ್ಯವಸ್ಥೆ ಇಲ್ಲ. ಸ್ಮಶಾನ ಭೂಮಿ ಜಾಗವನ್ನು ಅತಿಕ್ರಮ ಮಾಡಿಕೊಂಡಿದ್ದಾರೆ. ಈ ಕುರಿತು ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದರೂ ಕೂಡ ಈವರೆಗೂ ಯಾವುದೇ ಪರಿಹಾರವಾಗಿಲ್ಲ” ಎಂದರು.
“ಊರಿನಲ್ಲಿ ಬಸ್ ನಿಲ್ದಾಣವಿದೆ. ಆದರೆ ಸರ್ಕಾರಿ ಬಸ್ಗಳನ್ನು ನಿಲ್ಲಿಸುವುದಿಲ್ಲ. ಇಲ್ಲಿಂದ ಸುಮಾರು 4 ರಿಂದ 5 ಕೀ ಮೀ ದೂರದ ಬಸ್ ನಿಲ್ದಾಣಕ್ಕೆ ಬರಬೇಕು. ಅನಾರೋಗ್ಯ ಪೀಡಿತರು, ಗರ್ಭಿಣಿಯರು, ವೃದ್ಧರು, ಶಾಲಾ ಮಕ್ಕಳು 5 ಕಿಮೀ ನಡೆದು ಹೋಗುವುದು ಕಷ್ಟ. ಹಾಗಾಗಿ ನಮ್ಮ ಊರಿನ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕು” ಎಂದರು.
“ಶಾಲೆಗೆ ಆಟದ ಮೈದಾನವಿಲ್ಲ. ಆದರೂ ಸಹ ಶಾಲಾ ಮಕ್ಕಳು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಆಧುನಿಕ ಶಿಕ್ಷಣದ ಉಪಕರಣಗಳಾದ ಕಂಪ್ಯೂಟರ್, ಲ್ಯಾಪ್ಟಾಪ್, ಜೆರಾಕ್ಸ್, ಪ್ರಿಂಟರ್ ವ್ಯವಸ್ಥೆಗಳಿಲ್ಲ. ಶಿಕ್ಷಣ ಇಲಾಖೆಯಿಂದ ಬರುವಂತಹ ಆದೇಶ ಪ್ರತಿ ತೆಗಿಸಿಕೊಳ್ಳಲು ಪ್ರಿಂಟರ್ ಇಲ್ಲದೆ, ಜೆರಾಕ್ಸ್ ಮಾಡಿಸಿಕೊಳ್ಳಲು ಚೋರಡಿ ಅಥವಾ ಆಯನೂರ್, ಶಿವಮೊಗ್ಗ ಭಾಗಕ್ಕೆ ಬರಬೇಕು. ಇದರಿಂದ ಶಾಲೆಯ ಮಕ್ಕಳೂ ಕೂಡ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ವಂಚಿತರಗುತ್ತಿದ್ದಾರೆ” ಎಂದು ಹೇಳಿದರು.
“1951ರಲ್ಲಿ ಪ್ರಾರಂಭವಾದ ಈ ಶಾಲೆ ಗ್ರಾಮಾಂತರ ಭಾಗದಲ್ಲಿ ಉತ್ತಮ ವಿದ್ಯಾರ್ಥಿಗಳ ಸಂಖ್ಯೆಯೊಂದಿಗೆ ವಿದ್ಯಾಭ್ಯಾಸ ಮಾಡುತ್ತಿದ್ದು, ಇವರಿಗೆ ಆಧುನಿಕ ಸೌಲಭ್ಯಗಳನ್ನು ನೀಡುವ ಮೂಲಕ ಉನ್ನತ ಮಟ್ಟದ ವಿದ್ಯಾಭ್ಯಾಸ ದೊರೆಯಬೇಕಾಗಿದೆ” ಎಂದು ಕೋರಿದರು.
“ರಾಜ್ಯದಲ್ಲಿ ಹೊಸ ಸರ್ಕಾರ ಹಾಗೂ ಶಿಕ್ಷಣ ಸಚಿವರು ನಮ್ಮ ಜಿಲ್ಲೆಯರವರಾಗಿರುವುದರಿಂದ ಉತ್ತಮ ಸಹಾಯ ಸಹಕಾರ ಸಿಗಲಿದೆಯೆಂಬ ನಿರೀಕ್ಷೆಯಲ್ಲಿ ಇದ್ದೇವೆ” ಎಂದು ಗ್ರಾಮಸ್ಥರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಜಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ನ್ಯಾ. ವಿಶ್ವನಾಥ ಯಮಕನಮರಡಿ
ತುಪುರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಗನಾಥ್ ಈ ದಿನ.ಕಾಮ್ನೊಂದಿಗೆ
ಮಾತನಾಡಿ, “ತುಪುರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023-2024ರಲ್ಲಿ ಬಿಎಸ್ಎನ್ಎಲ್ ಟವರ್ಗೆ ಟೆಂಡರ್ ಆಗಿದ್ದು, ಕೆಲಸ ಪ್ರಾರಂಭವಾಗಿದೆ. ಆದರೆ ನೆಟ್ವರ್ಕ್ ಸೇವೆ ಒದಗಿಸಲು ಇನ್ನೂ ಎರಡ್ಮೂರು ತಿಂಗಳು ಆಗಬಹುದು” ಎಂದರು.
“ಊರಿನಲ್ಲಿ ಸ್ಮಶಾನ ಭೂಮಿ ಇಲ್ಲ ಹಾಗೂ ಒತ್ತುವರಿ ತೆರವಿಗೆ ಲೆಟರ್ ಮಾಡಿ ಕೊಟ್ಟಿದ್ದೇವೆ. ಹಾಗೆ ಮೇಲಧಿಕಾರಿಗಳಿಗೆ ಒಂದು ವರ್ಷದ ಹಿಂದೆಯೇ ಪತ್ರ ಬರೆದಿದ್ದೇವೆ. ಆದರೆ ಮೇಲಧಿಕಾರಿಗಳಿಂದ ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಕೆರೆಯಲ್ಲಿ ಊಳೆತ್ತಿಲ್ಲ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಈ ಕುರಿತು ಅಧಿಕಾರಿಗಳಿಗೆ ಬಹಳಷ್ಟು ತಿಂಗಳ ಹಿಂದೆಯೇ ಮಾಹಿತಿ ನೀಡಿದ್ದೇವೆ. ಆದರೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ” ಎಂದು ತಿಳಿಸಿದರು.