ರಾಜಕೀಯ ಪಕ್ಷಗಳು ನೀಡುವ ಚುನಾವಣಾ ಆಶ್ವಾಸನೆಗಳನ್ನು ಪೂರೈಸುವ ಕಾರ್ಯಸಾಧ್ಯತೆಯ ಬಗ್ಗೆ ಮತದಾರರಿಗೆ ತಿಳಿಯುವ ಹಕ್ಕಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಹೇಳಿದ್ದಾರೆ. ಆ ಹಕ್ಕು ನ್ಯಾಯಸಮ್ಮತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. “ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆಗಳನ್ನು ನೀಡುವ ಹಕ್ಕನ್ನು ಹೊಂದಿವೆ. ಅದೇ ರೀತಿ, ಇವುಗಳು ನಿಜವೇ ಮತ್ತು ಅವುಗಳಿಗೆ ಹಣವನ್ನು ಹೇಗೆ ನೀಡಬಹುದು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಮತದಾರರಿಗೆ ಇದೆ” ಎಂದು ಹೇಳಿದ್ದಾರೆ.
“ಚುನಾವಣಾ ಆಯೋಗವು ಪಕ್ಷಗಳು ತಮ್ಮ ಚುನಾವಣಾ ಭರವಸೆಗಳನ್ನು ಬಹಿರಂಗಪಡಿಸಲು ‘ಪ್ರೊಫಾರ್ಮಾ’ ಸಿದ್ಧಪಡಿಸಿದೆ. ಈ ಅಂಶವು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವಿಷಯಗಳಿಗೂ ಸಂಬಂಧಿಸಿರುತ್ತದೆ” ಎಂದು ತಿಳಿಸಿದ್ದಾರೆ.
“ಚುನಾವಣಾ ಸಮಯದಲ್ಲಿ ನಗದು ಮತ್ತು ಉಚಿತ ವಿತರಣೆಗಳಬಗ್ಗೆ ಜಾಗರೂಕರಾಗಿರಲು ಮತ್ತು ಅವುಗಳನ್ನು ತಡೆಯಲು ತನಿಖಾ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಆನ್ಲೈನ್ ವಹಿವಾಟಿನ ಮೇಲೆ ನಿಗಾ ಇಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಸಹ ಜವಾಬ್ದಾರಿ ವಹಿಸಲಾಗಿದೆ” ಎಂದು ಹೇಳಿದ್ದಾರೆ.