ರಾಜ್ಯ ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಿರಹಟ್ಟಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುರೇಶ ಕುಂಬಾರ ತಿಳಿಸಿದ್ದಾರೆ.
ಬೆಳೆ ವಿಮೆ ಕುರಿತು ಪ್ರಕಟಣೆ ಹೊರಡಿಸಿರುವ ಅವರು, “ವಿವಿಧ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಮಾಡಿಸಲು ಸರ್ಕಾರ ಮಂಜೂರಾತಿ ನೀಡಿದೆ. ಈ ಯೋಜನೆಯಡಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಮಾವು, ಪಪ್ಪಾಯ ಹಾಗೂ ದಾಳಿಂಬೆ ಅಧಿಸೂಚಿತ ತೋಟಗಾರಿಕೆ ಬೆಳೆಗಳಾಗಿವೆ” ಎಂದು ಹೇಳಿದ್ದಾರೆ.
“ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ, ಕೊಗನೂರ, ಮಾಚೇನಹಳ್ಳಿ, ಶಿರಹಟ್ಟಿ (ಯುಎಲ್ಬಿ)ಗಳಿಗೆ ಮಾವು; ಕಡಕೋಳ, ಮಜ್ಜೂರ ಗ್ರಾಮಗಳಿಗೆ ಮಾವು ಮತ್ತು ದಾಳಿಂಬೆ; ಮಾಗಡಿ ಗ್ರಾಮಕ್ಕೆ ಮಾವು ಪ್ಪಾಯ, ವಡವಿ ಗ್ರಾಮಕ್ಕೆ ಪಪ್ಪಾಯ ಮತ್ತು ದಾಳಿಂಬೆ ಬೆಳೆಗಳು ಅಧಿಸೂಚಿತ ತೋಟಗಾರಿಕೆ ಬೆಳೆಗಳಾಗಿವೆ” ಎಂದು ಅವರು ವಿವರಿಸಿದ್ದಾರೆ.
“ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ, ಬಾಲೆಹೊಸೂರ, ಗೊಜನೂರ, ರಾಮಗೇರಿ, ಸೂರಣಗಿ, ಹುಲ್ಲೂರ, ಲಕ್ಷ್ಮೇಶ್ವರ (ಯುಎಲ್ಬಿ)ಗಳಿಗೆ ಮಾವು; ಅಡ್ರಕಟ್ಟಿ ಗ್ರಾಮಕ್ಕೆ ಮಾವು ಮತ್ತು ದಾಳಿಂಬೆ; ದೊಡ್ಡೂರ, ಶಿಗ್ಲಿ, ಗೋವನಾಳಗ್ರಾಮಗಳಿಗೆ ಮಾವು ಮತ್ತು ಪಪ್ಪಾಯ ಬೆಳೆಗಳು ಅಧಿಸೂಚಿತ ಬೆಳೆಗಳಾಗಿವೆ” ಎಂದು ತಿಳಿಸಿದ್ದಾರೆ.
“ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ರೈತರು ವಿಮಾ ಕಂತು ಪಾವತಿಗೆ ಪಾಲ್ಗೊಳ್ಳಲು ಜುಲೈ 31 ಕೊನೆಯ ದಿನವಾಗಿದೆ. ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಸಂಸ್ಥೆಯು ವಿಮೆ ಮಾಡಿಕೊಡುತ್ತದೆ. ವಿಮೆ ಕುರಿತ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ, ಕಂದಾಯ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಹತ್ತಿರದ ಬ್ಯಾಂಕ್ ಶಾಖೆಗಳನ್ನು ರೈತರು ಸಂಪರ್ಕಿಸಬಹುದು” ಎಂದು ಹೇಳಿದ್ದಾರೆ.