ಧಾರ್ಮಿಕ ಸೌಹಾರ್ದತೆಗೆ ಹೆಸರಾದ ಬೀದರ್ ತಾಲೂಕಿನ ಅಷ್ಟೂರ್ ಗ್ರಾಮದಲ್ಲಿ ಐದು ದಿನಗಳ ಕಾಲ ಜರುಗಿದ ಅಲ್ಲಮಪ್ರಭುಗಳ ಜಾತ್ರೆಗೆ ಶುಕ್ರವಾರ ಸಂಭ್ರಮದೊಂದಿಗೆ ತೆರೆ ಬಿದ್ದಿದೆ.
ಶುಕ್ರವಾರ ನಡೆದ ಜಂಗಿ ಕುಸ್ತಿ ಸ್ಪರ್ಧೆಯಲ್ಲಿ 10 ವರ್ಷದ ಬಾಲಕಿ ಶ್ವೇತಾ ರಾಮೇಶ್ವರ ಕಾರಲೆ ತನ್ನದೇ ವಯಸ್ಸಿನ ಬಾಲಕನನ್ನು ಮಣಿಸುವ ಮೂಲಕ ಅಷ್ಟೂರಿನ ಜಾತ್ರೆಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಮಹಾರಾಷ್ಟ್ರ ರಾಜ್ಯದ ಧಾರಾಶಿವ ಜಿಲ್ಲೆಯ ಲೋಹಾರಾದ ಶ್ವೇತಾ ರಾಮೇಶ್ವರ ಕಾರಲೆ ಎಂಬ ಬಾಲಕಿ ಸ್ವಇಚ್ಛೆಯಿಂದ ಕುಸ್ತಿ ಅಖಾಡಕ್ಕಿಳಿದು ಎಲ್ಲರ ಗಮನ ಸೆಳೆದಳು. ಈಕೆಯ ಸ್ಪರ್ಧೆಗೆ ಆಯೋಜಕರು ಅವಕಾಶ ನೀಡಿ ಪ್ರೋತ್ಸಾಹಿಸಿದರು. ಶ್ವೇತಾ ಜೊತೆಗೆ ಮಹಾರಾಷ್ಟ್ರದ ಲಾತೂರಿನ ಸಮರ್ಥ ಎಂಬ 10 ವರ್ಷದ ಬಾಲಕ ಕಣಕ್ಕೆ ಇಳಿದಿದ್ದನು. ಜಿದ್ದಾಜಿದ್ದಿನಿಂದ ನಡೆದ ಸೆಣೆಸಾಟದಲ್ಲಿ ಶ್ವೇತಾ ಅಲ್ಪ ಸಮಯದಲ್ಲೇ ಸಮರ್ಥಗೆ ʼಚಿತ್ʼ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದಳು.
“ಶ್ವೇತಾ 4ನೇ ಓದುತ್ತಿದ್ದು, ಕುಸ್ತಿ ಪಟುವಾಗಿರುವ ತಂದೆ ರಾಮೇಶ್ವರ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.
ಮಗಳಿಗೆ ಅಂತಾರಾಷ್ಟ್ರೀಯ ಮಟ್ಡದ ಕುಸ್ತಿ ಪಟುವಾಗಿ ಮಾಡ ಓಲಿಂಪಿಕ್ಸ್ ನಲ್ಲಿ ಕಳಿಸುವ ಗುರಿಯಿದೆ” ಎಂದು ರಾಮೇಶ್ವರ ಹೇಳಿದರು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ವಿಭಾಗಗಳಲ್ಲಿ ಸುಮಾರು 65 ಕ್ಕೂ ಹೆಚ್ಚು ಕುಸ್ತಿಗಳು ನಡೆದವು. 200 ರೂ.ಗಳಿಂದ ಹಿಡಿದು ಗರಿಷ್ಠ 5 ಸಾವಿರ ರೂ.ವರೆಗೆ ಕುಸ್ತಿ ಪಂದ್ಯಗಳ ಜರುಗಿದವು.
ಕಲಬುರಗಿ ಜಿಲ್ಲೆಯ ಕಮಲಾಪುರದ ಪ್ರವೀಣ ಅವರು ಸುರಪುರದ ಬಸವರಾಜ ಅವರನ್ನು ಸೋಲಿಸಿ ಅಷ್ಟೂರ್ ಜಾತ್ರೆ ಕುಸ್ತಿಯ ಪೈಲ್ವಾನ್ ಆಗಿ ಹೊರಹೊಮ್ಮಿದರು. 5000 ರೂ.ಬಹುಮಾನ ಗೆದ್ದು ಮಿಂಚಿದರು.
ಸ್ಪರ್ಧೆಯಲ್ಲಿ ಗೆದ್ದ 10 ವರ್ಷದ ಬಾಲಕಿ ಶ್ವೇತಾಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.
ಸಮಾಜದ ಪ್ರಗತಿಗೆ ಧರ್ಮ ಸಮನ್ವಯ ಅಗತ್ಯ :
ಇಡೀ ದೇಶದಲ್ಲೇ ಅಷ್ಟೂರ್ ಜಾತ್ರೆ ವಿಶಿಷ್ಟವಾಗಿದೆ. ಒಂದೇ ದರ್ಗಾದಲ್ಲಿ ಹಿಂದು-ಮುಸ್ಲಿಂರು ಸೇರಿ ಅಹಮದ್ ಶಾ ವಲಿ ಜನ್ಮ ದಿವಸ, ಅಲ್ಲಮಪ್ರಭುಗಳ ಜಾತ್ರೆ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ನೂರಾರು ವರ್ಷಗಳಿಂದ ಈ ಜಾತ್ರೆ ಪರಂಪರೆ ಮುಂದುವರೆದುಕೊಂಡು ಬಂದಿದ್ದು, ಸಮಾಜಕ್ಕೆ ಧರ್ಮ ಸಮನ್ವಯತೆ, ಸೌಹಾರ್ದತೆ ಸಂದೇಶ ಸಾರುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಜಾತ್ರೆಯ ಕೊನೆ ದಿನ ಶುಕ್ರವಾರ ಗುಂಬಜ ಪಕ್ಕದಲ್ಲಿರುವ ಅಂಗಳದಲ್ಲಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, “ಸೌಹಾರ್ದತೆ, ಧರ್ಮ ಸಮನ್ವಯಕ್ಕೆ ಹೆಸರುವಾಸಿಯಾದ ಅಷ್ಟೂರ್ ಗ್ರಾಮದಲ್ಲಿರುವ ಐತಿಹಾಸಿಕ ಗುಂಬಜನಲ್ಲಿ ಮುಸ್ಲಿಂ ಸಮಾಜದವರು ಸುಲ್ತಾನ್ ಅಹಮದ್ ಶಾ ವಲಿ ಅವರ ಜನ್ಮದಿನವನ್ನು ʼಸಂದಲ್ʼ ಕಾರ್ಯಕ್ರಮ ಆಯೋಜಿಸಿದರೆ, ಇನ್ನೊಂದೆಡೆ ಹಿಂದು ಬಾಂಧವರು ಶ್ರೀ ಅಲ್ಲಮಪ್ರಭುಗಳ ಜಾತ್ರೆಯನ್ನು ʼಭಜನೆ-ಕೀರ್ತನೆʼ ನಡೆಸುವ ಮೂಲಕ ಶ್ರದ್ಧೆ, ಭಕ್ತಿ ಮೆರೆಯುತ್ತಾರೆ. ಇದು ಧಾರ್ಮಿಕ ಭಾವೈಕ್ಯತೆ ಸಾರುವ ಜಾತ್ರೆ” ಎಂದರು.
“ಸಮಾಜದ ಸಮಗ್ರ ಅಭಿವೃದ್ಧಿಗೆ ಇಂದು ಧರ್ಮ ಸಮನ್ವಯತೆ ತೀರ ಅಗತ್ಯವಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವ, ರಾಷ್ಟ್ರ ಮೊದಲು ಎಂಬ ಭಾವನೆ ಮೈಗೂಡಿಸಿಕೊಳ್ಳಬೇಕಾಗಿದೆ. ಎಲ್ಲ ಜಾತಿ, ಜನಾಂಗದವರು ಒಟ್ಟಾಗಿ ಧರ್ಮ ಸಮನ್ವಯ ಚಿಂತನೆಯಿಂದ ಸಾಗಿದಾಗ ಸಮಾಜ ಸಮೃದ್ಧ, ಶಾಂತಿ ಹಾಗೂ ನೆಮ್ಮದಿಯಿಂದ ಇರಲು ಸಾಧ್ಯ. ಪರಸ್ಪರ ಜಾತಿ, ಧರ್ಮದ ಮತಭೇದ ಇರದಿದ್ದಾಗ ಕೋಮುಭಾವನೆ ಮೂಡುವ, ಕೋಮುದ್ವೇಷ ನಿರ್ಮಾಣವಾಗುವ ಪ್ರಶ್ನೆಯೇ ಬರುವುದಿಲ್ಲ. ರಾಷ್ಟ್ರದ ಪ್ರಗತಿಗಾಗಿ ಎಲ್ಲರೂ ಒಗ್ಗಟ್ಟಾಗಿ ಸಾಗುವ ಸಂಕಲ್ಪ ಮಾಡಬೇಕು. ಇದಕ್ಕೆ ಅಷ್ಟೂರಿನಂಥ ಜಾತ್ರೆ ಪ್ರೇರಣೆಯಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿರ್ಮಲಾ ಸೀತಾರಾಮನ್ ಮುಕ್ತಮನಸ್ಸಿನಿಂದ ಚರ್ಚೆಯಲ್ಲಿ ಭಾಗವಹಿಸುವರೇ ?
ಕಾರ್ಯಕ್ರಮದಲ್ಲಿ ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ ಗಾದಗಿ, ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಜೋಶಿ, ಪ್ರಮುಖರಾದ ಇರ್ಷಾದ್ ಅಲಿ ಪೈಲ್ವಾನ್, ವಿಜಯಕುಮಾರ ಪಾಟೀಲ್ ಖಾಜಾಪುರ, ಶರಣಪ್ಪ ಓತಿ, ಶಶಿಧರ ಪಾಟೀಲ್, ಅರ್ಜುನರಾವ ಕಾಳಗೊಂಡ, ಶಿವಕುಮಾರ ನಾಗಲಗಿದ್ದಿ ಸೇರಿದಂತೆ ಇತರರಿದ್ದರು.