ಸೋಷಿಯಲ್ ಮೀಡಿಯಾದಲ್ಲಿ ‘ಆ್ಯಂಗ್ರಿ ರಾಂಟ್ಮ್ಯಾನ್’ ಎಂದೇ ಜನಪ್ರಿಯವಾಗಿದ್ದ ಹಿಂದಿ ಯೂಟ್ಯೂಬರ್ ಅಬ್ರದೀಪ್ ಸಹಾ ಅವರು 27ನೇ ವಯಸ್ಸಿಗೆ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಹಠಾತ್ ಸಾವು ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ಆಘಾತಕ್ಕೀಡು ಮಾಡಿದೆ.
ಅಬ್ರದೀಪ್ ಸಹಾ ಅವರು ಇತ್ತೀಚೆಗೆ ಹೃದಯಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಈ ಬಗ್ಗೆ ಅವರ ತಂದೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಇನ್ನೂ ಐಸಿಯುನಲ್ಲಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದರು.
ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿದ ಪರಿಣಾಮ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಏ.16ರ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 18, 2017ರಂದು ‘ಆಂಗ್ರಿ ರಾಂಟ್ಮ್ಯಾನ್'(ANGRY RANTMAN) ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ಅಬ್ರದೀಪ್, “2018ರ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಕನ್ನಡದ ಕೆಜಿಎಫ್ ಸಿನಿಮಾವನ್ನು ವಿಚಿತ್ರವಾಗಿ ವಿಮರ್ಶೆ ಮಾಡುವ ಮೂಲಕ ಅಬ್ರದೀಪ್ ಸಾಹ ಭಾರೀ ಹೆಸರು ಮಾಡಿದ್ದರು.
ಕೆಜಿಎಫ್ ಸಿನಿಮಾವನ್ನು ಹೊಗಳಿದ್ದ ಅಬ್ರದೀಪ್, ಬಾಲಿವುಡ್ ಸಿನಿಮಾರಂಗವನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಿನಿಮಾ ಹೇಗೆ ಮಾಡಬೇಕು ಎಂದು ದಕ್ಷಿಣ ಭಾರತೀಯ ಚಿತ್ರರಂಗ ನೋಡಿ ಕಲಿಯಿರಿ ಎಂದು ಹೇಳಿದ್ದರು. ಅಲ್ಲದೇ, ತಂದನಿ ತಾನೋ ತಾನಿ ತಂದಾನೋ ಟೋನ್ ಅನ್ನು ತನ್ನದೇ ವಿಚಿತ್ರ ಶೈಲಿಯಲ್ಲಿ ಬಳಸಿಕೊಂಡಿದ್ದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಗೊಳಗಾಗಿದ್ದರು. ಯಶ್ ಅವರನ್ನು ಹೊಗಳುವ ಮೂಲಕ ಕನ್ನಡಿಗರ ಮನಸ್ಸು ಕೂಡ ಗೆದ್ದಿದ್ದರು.
ಅವರ ವಿಡಿಯೋ ವ್ಯಾಪಕ ವೈರಲ್ ಆಗಿತ್ತು, ಮಾಧ್ಯಮಗಳಲ್ಲಿ ಕೂಡ ಅವರ ಬಗ್ಗೆ ವರದಿಗಳು ಬಂದಿದ್ದವು. ಅದಾದ ಬಳಿಕ ಅವರನ್ನು ‘ಆಂಗ್ರಿ ರಾಂಟ್ಮ್ಯಾನ್’ ಎಂದೇ ಎಲ್ಲರೂ ಕರೆಯಲು ಆರಂಭಿಸಿದರು. ಚಲನಚಿತ್ರಗಳ ಕುರಿತಂತೆ ವಿಭಿನ್ನವಾಗಿ ವಿಶ್ಲೇಷಣೆ ಮಾಡುತ್ತಿದ್ದ ಆಂಗ್ರಿ ರಾಂಟ್ಮಾನ್ ಯೂಟ್ಯೂಬ್ ಚಾನೆಲ್ನಲ್ಲಿ 4.80 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಸಿನಿಮಾ ಬಗ್ಗೆ ವಿಮರ್ಶೆಗಳನ್ನು ಮಾಡುತ್ತಲೇ ಅವರು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು.
ಕೇವಲ ಸಿನಿಮಾ ಮಾತ್ರವಲ್ಲದೇ ಫುಟ್ಬಾಲ್, ಕ್ರಿಕೆಟ್ ಪಂದ್ಯಗಳು, ಹಾಲಿವುಡ್ ಸಿನಮಾಗಳು ಸೇರಿದಂತೆ ಹಲವಾರು ರಂಗಗಳ ಬಗ್ಗೆ ವಿಶ್ಲೇಷಿಸುವುದು ಅವರ ಹವ್ಯಾಸವಾಗಿತ್ತು. ಅದನ್ನೇ ಅವರು ವಿಡಿಯೋ ಮಾಡಿ ತಮ್ಮ ಆ್ಯಂಗ್ರಿ ರ್ಯಾಂಟ್ ಮ್ಯಾನ್ ಯೂಟ್ಯೂಬ್ ಚಾನೆಲ್ ನಲ್ಲಿ ಅಬ್ರದೀಪ್ ಹಂಚಿಕೊಳ್ಳುತ್ತಿದ್ದರು.
ಜನಪ್ರಿಯ ಯೂಟ್ಯೂಬರ್ ಸಾವಿನ ಸುದ್ದಿ ತಿಳಿದ ತಕ್ಷಣ, ಸಾಮಾಜಿಕ ಮಾಧ್ಯಮ ಬಳಕೆದಾರರು ದಿಗ್ಭ್ರಾಂತರಾಗಿದ್ದಾರೆ. ಎಕ್ಸ್ನಲ್ಲಿ ಅವರಿಗೆ ಸಾವಿರಾರು ಮಂದಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಸಾವಿನ ಸುದ್ದಿಗೆ ಶಾಕ್ನಿಂದ ಪ್ರತಿಕ್ರಿಯೆ ನೀಡಿದ್ದಾರೆ.