ಗ್ರಾಮ ಪಂಚಾಯತಿ ಅಡಳಿತ ಮತ್ತು ಕ್ರಿಯಾ ಯೋಜನೆ ತಯಾರಿಸುವಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರ ಹಸ್ತಕ್ಷೇಪವನ್ನು ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟವು ವಿಜಯಪುರ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದೆ.
“ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯತಿಗಳಲ್ಲಿ ಮನರೇಗಾ ಕ್ರಿಯಾ ಯೋಜನೆ, 15ನೇ ಹಣಕಾಸಿಗೆ ಸಂಬಂಧಿತ ಯೋಜನೆ ಹಾಗೂ ಜನರ ಸಮಸ್ಯೆಗೆ ಅನುಗುಣವಾಗಿ ಕ್ರಿಯಾ ಯೋಜನೆಗಳನ್ನು ತಯಾರಿಸಲು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 243ಜೆ ಹೇಳುತ್ತದೆ. ಕ್ರಿಯಾ ಯೋಜನೆಗಳನ್ನು ತಯಾರಿಸುವುದು ಗ್ರಾಮ ಪಂಚಾಯತಿಗಳ ಜವಬ್ದಾರಿಯಾಗಿದ್ದು, ಅದರ ಪೂರ್ಣ ಅಧಿಕಾರ ಗ್ರಾಮ ಪಂಚಾಯತಿಗಳಿಗೆ ಇದೆ ಎಮದು ಹೇಳಿದೆ. ಆದರೂ, ವಿಜಯಪುರ ಜಿಲ್ಲಾ ಪಂಚಾಯತಿ ಸಿಇಒ ಹಸ್ತಕ್ಷೇಪ ಮಾಡುತ್ತಿದ್ದಾರೆ” ಎಂದು ಒಕ್ಕೂಟದ ಸದಸ್ಯರು ಆರೋಪಿಸಿದ್ದಾರೆ.
“ಜಿಲ್ಲಾ ಪಂಚಾಯತಿ ಸಿಇಒ ಅಧಿಕಾರಿಶಾಹಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಪಿಡಿಒಗಳ ಮೇಲೆ ಒತ್ತಡ ಹೇರಿ, ಚುನಾಯಿತ ಪ್ರತಿನಿದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕ್ರಿಯಾ ಯೋಜೆನೆಗಳನ್ನು ರಚಿಸುವಂತೆ ನಿರ್ದೇಶನ ನೀಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಿಕ ವಿರೋಧಿ ನಡೆಯಾಗಿದೆ. ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರಿಗೆ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ, ಒಕ್ಕೂಟದ ಇಸಾಕ ಎಚ್ ಪಠಾಣ್, ಪ್ರದೀಪ ಪಾಟೀಲ, ರಮೇಶ ಶರಣಪ್ಪ ಇಂಗಳಗಿ, ರಮೇಶ ಮಂಗಳೂರು, ಧರೆಯಪ್ಪ ಕಡಕೋಳ, ಭರಮಪ್ಪ ಚೌಧರಿ ನಿಡಗುಂದಿ ಇದ್ದರು.