
- ಕ್ರೀಡಾಕೂಟದ ಸರ್ವಧರ್ಮ ಪ್ರಾರ್ಥನೆಯಲ್ಲಿ ಆಝಾನ್
- ಶಾಲೆಯ ಎದುರು ಹಿಂದುತ್ವ ಮತೀಯವಾದಿಗಳ ದಾಂಧಲೆ
ಉಡುಪಿ ಜಿಲ್ಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಸರ್ವಧರ್ಮ ಪ್ರಾರ್ಥನೆ ವೇಳೆ ವಿದ್ಯಾರ್ಥಿಗಳು ಆಜಾನ್ ಹಾಕಿದ್ದಾರೆ. ಆಜಾನ್ಗೆ ಅವಕಾಶ ಕೊಟ್ಟ ಜೆಸ್ಯೂಟ್ ಶಾಲೆಯ ವಿರುದ್ದ ಹಿಂದುತ್ವವಾದಿ ಕೋಮು ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೇಟೆಯಲ್ಲಿರುವ ಮದರ್ ತೆರೇಸಾ ಸ್ಮಾರಕ ಶಾಲೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಕ್ರೀಡಾಕೂಟದ ಉದ್ಘಾಟನೆ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಆ ವೇಳೆ, ಎಲ್ಲ ಮತಗಳನ್ನು ಒಳ್ಳಗೊಳ್ಳುವ ಸಂದೇಶ ಸಾರುವ ಉದ್ದೇಶದಿಂದ ವಿದ್ಯಾರ್ಥಿಗಳು ಹಿಂದೂ, ಕ್ರೈಸ್ತ, ಮುಸ್ಲಿಂ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಅದರಲ್ಲಿ ಅಜಾನ್ ಕೂಡ ಇತ್ತಷ್ಟೇ.
ಆದರೆ, ಕಾರ್ಯಕ್ರಮದ ಉದ್ದೇಶವನ್ನೇ ತಿರುಚಿರುವ ಮತೀಯವಾದಿಗಳು, ಶಾಲೆಯಲ್ಲಿ ಆಝಾನ್ ಹಾಡುತ್ತಿರುವ ವಿಡಿಯೋವನ್ನಷ್ಟೇ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ಆಝಾನ್ ಹಾಡಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ, ಶಾಲೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಹಿಂದುತ್ವ ಮತೀಯವಾದಿಗಳ ದಾಂಧಲೆಗೆ ಮಣಿದು ಶಾಲೆಯ ಆಡಳಿತ ಮಂಡಳಿ ಕ್ಷಮೆ ಯಾಚಿಸಿದೆ.
"ಸಮಾಜದಲ್ಲಿ ಸಾಮರಸ್ಯ ಮತ್ತು ಸಮಾನತೆಯನ್ನು ತೋರಿಸಲು ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು. ಎಲ್ಲ ಧರ್ಮಗಳ ಪ್ರಮುಖ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿದ್ದರು. ಆದರೆ, ಅಝಾನ್ ಹೇಳಿರುವುದನ್ನೇ ಗುರಿಯಾಗಿಸಿಕೊಳ್ಳಲಾಗಿದೆ" ಎಂದು ಶಾಲೆಯ ಶಿಕ್ಷಕರು ಹೇಳುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಛತ್ತೀಸ್ಗಢ | ಸ್ವಯಂ ಕಲಿಕೆಗಾಗಿ ಡಿಜಿಟಲ್ ನೆರವು ನೀಡಲು ಬುಡಕಟ್ಟು ಮಕ್ಕಳಿಗೆ ಟ್ಯಾಬ್ಲೆಟ್ ವಿತರಣೆ
ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಮಾತನಾಡಿ, “ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವಂತೆ ಒತ್ತಾಯಿಸಿದ ಶಾಲಾ ಆಡಳಿತ ಮಂಡಳಿಯ ನಡೆಯನ್ನು ಖಂಡಿಸುತ್ತೇನೆ. ಈ ಹಿಂದೆ, ಇದೇ ಶಾಲೆಯಲ್ಲಿ ಹಿಂದು ವಿದ್ಯಾರ್ಥಿಗಳಿಗೆ ಹಣೆಗೆ ಬಿಂದಿಗೆ, ಬಳೆ, ಧರಿಸುವುದನ್ನು ನಿಷೇಧಿಸಲಾಗಿತ್ತು. ಇದು ಕರ್ನಾಟಕ ಶಿಕ್ಷಣ ಕಾಯ್ದೆಗೆ ವಿರುದ್ಧವಾಗಿದೆ” ಎಂದು ಆರೋಪಿಸಿದ್ದಾರೆ.