- ಗಣಿತ ವಿಭಾಗಕ್ಕೆ ತೆರಳಲು ಬಿಎಂಟಿಸಿ ಬಸ್ ಸಲುವಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ
- ಜೀವನ್ಮರಣ ಹೋರಾಟ ನಡೆಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ ಶಿಲ್ಪಶ್ರೀ
ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗೆ ಸಿಲುಕಿ ಸಾವನ್ನಪ್ಪಿದ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪಶ್ರೀ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಲು ಬೆಂಗಳೂರು ವಿಶ್ವವಿದ್ಯಾಲಯ (ಬಿಯು) ನಿರ್ಧರಿಸಿದೆ.
ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದ ಶಿಲ್ಪಶ್ರೀ (22) ಅವರು 2022ರ ಅಕ್ಟೋಬರ್ನಲ್ಲಿ ಗಣಿತ ವಿಭಾಗಕ್ಕೆ ತೆರಳಲು ಬಿಎಂಟಿಸಿ ಬಸ್ ಸಲುವಾಗಿ ಕಾಯುತ್ತಿದ್ದರು. ಈ ವೇಳೆ, ಬಸ್ ಹತ್ತುವಾಗ ಕೆಳಗೆ ಬಿದ್ದ ಶಿಲ್ಪಶ್ರೀ ಮೇಲೆ ಬಸ್ ಹರಿದಿತ್ತು. ಬಳಿಕ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದರು.
ವಿಶ್ವವಿದ್ಯಾನಿಲಯವು ಆಕೆಯ ವೈದ್ಯಕೀಯ ವೆಚ್ಚವನ್ನು ಭರಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಹಣಕಾಸಿನ ನೆರವು ಕೋರಿದೆ. ಒಂಬತ್ತು ತಿಂಗಳ ಬಳಿಕ ಜೂ.12ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಶಿಲ್ಪಶ್ರೀ ಕುಟುಂಬಕ್ಕೆ ₹4 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು.
ಈ ಘಟನೆಯ ನಂತರ 2023-24ರ ಬಜೆಟ್ನಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಅಪಘಾತಗಳು ಸಂಭವಿಸಿದಾಗ ವಿದ್ಯಾರ್ಥಿಗಳ ಅಪಘಾತ ವೆಚ್ಚ ಭರಿಸಲು ವಿಶ್ವವಿದ್ಯಾಲಯವು ₹5 ಲಕ್ಷ ನಿಧಿಯನ್ನು ಮೀಸಲಿಟ್ಟಿದೆ. ತಕ್ಷಣದ ಚಿಕಿತ್ಸೆಗೆ ಮೀಸಲಿಟ್ಟಿರುವ ಹಣವನ್ನು ಬಳಸಲು ವಿಶ್ವವಿದ್ಯಾಲಯ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಲುಷಿತ ನೀರು ಪೂರೈಕೆ; ಶುದ್ಧ ನೀರಿಗಾಗಿ ಮೈಕಲ್ ಪಾಳ್ಯ ನಿವಾಸಿಗಳ ಪರದಾಟ
“ಶಿಲ್ಪಶ್ರೀ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ವಿಶ್ವವಿದ್ಯಾನಿಲಯವು ₹4 ಲಕ್ಷ ಪರಿಹಾರ ನೀಡಲು ನಿರ್ಧರಿಸಿದೆ” ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.