ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮತ್ತು ಕೇಂದ್ರಿಯ ವಿಶ್ವವಿದ್ಯಾನಿಲಯದ ಪದವಿ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪರೀಕ್ಷೆ (ಸಿಯುಇಟಿ) ಒಂದೇ ದಿನ ನಿಗದಿಯಾಗಿದೆ. ಇದರಿಂದಾಗಿ, ರಾಜ್ಯದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದು ತಿಳಿದುಬಂದಿದೆ.
ಎರಡನೇ ಆವೃತ್ತಿಯ ಸಿಯುಇಟಿ–ಯುಜಿ ಪರೀಕ್ಷೆಯು ಇದೇ 21 ರಿಂದ 31ರವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ಟಿಎ) ಹೇಳಿದೆ. ಅದೇ ದಿನ ಕರ್ನಾಟಕದಲ್ಲಿ ಸಿಇಟಿ ಇರುವ ಕಾರಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಪೋಷಕರು ದೂರಿದ್ದಾರೆ.
ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ಕೃಷಿ ವಿಜ್ಞಾನ, ಫಾರ್ಮಸಿ ಮತ್ತು ಶುಶ್ರೂಷೆಯಂತಹ ವಿವಿಧ ಕಾರ್ಯಕ್ರಮಗಳ ಪ್ರವೇಶಕ್ಕೆ ಪ್ರಮುಖವಾದ ಸಿಇಟಿ ಮೇ 20 ಮತ್ತು 21ರಂದು ನಿಗದಿಪಡಿಸಲಾಗಿದೆ. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳು ಭಾನುವಾರದಂದು ನಡೆಯಲಿವೆ. ಅದೇ ದಿನ ದೆಹಲಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಆಯೋಜಿಸಿರುವ ಸಿಯುಇಟಿ-ಯುಜಿ ಪರೀಕ್ಷೆ ನಡೆಸಲಾಗುತ್ತಿದೆ.
ಕೆಲವೆಡೆ ನೋಂದಾಯಿತ ಅಭ್ಯರ್ಥಿಗಳ ಸಂಖ್ಯೆ ಅಧಿಕವಾಗಿದೆ. ಇಂತಹ ನಗರಗಳಲ್ಲಿ ಜೂನ್ 1, 2 ಮತ್ತು ಜೂನ್ 5, 6ರಂದೂ ಪರೀಕ್ಷೆ ನಡೆಸಲಾಗುತ್ತದೆ. ಜೊತೆಗೆ ಮೀಸಲು ಜೂನ್ 7 ಮತ್ತು 8 ದಿನಗಳೂ ಇರಲಿವೆ ಎಂದು ಎನ್ಟಿಎ ಹಿರಿಯ ನಿರ್ದೇಶಕಿ (ಪರೀಕ್ಷೆ) ಸಾಧನಾ ಪರಶಾರ್ ಹೇಳಿದ್ದಾರೆ.
“ನಾವು ಸಿಇಟಿ ಆರಂಭವಾಗುವ ವೇಳಾ ಪಟ್ಟಿಯನ್ನು ಒಂದು ತಿಂಗಳ ಹಿಂದೆಯೇ ನಿಗದಿ ಪಡಿಸಿದ್ದೆವು. ಆದರೆ, ಈ ಬಗ್ಗೆ ಎನ್ಟಿಎ ಕಾಳಜಿ ವಹಿಸಿ ಪರಿಷ್ಕೃತ ವೇಳಾಪಟ್ಟಿ ಸಿದ್ದಪಡಿಸಬೇಕಿತ್ತು. ಕರ್ನಾಟಕದ ವಿದ್ಯಾರ್ಥಿಗಳು ಸಿಯುಇಟಿ-ಯುಜಿ ಪರೀಕ್ಷೆ ಎದುರಿಸುವುದಿಲ್ಲ. ಎರಡೂ ಪರೀಕ್ಷೆ ಬರೆಯುತ್ತಿರುವ ಆಕಾಂಕ್ಷಿಗಳು ಯಾರ್ಯಾರು ಇದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ” ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಹೇಳಿದ್ದಾರೆ.