- ಹಾಸನಕ್ಕೆ ತೆರಳಿ, ಹಾಸನಾಂಬೆಯ ದರ್ಶನ ಪಡೆದ ಶಾಸಕರು
- ದೂರ ಯಳಿದ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಪರೇಷನ್ ಹಸ್ತ ಕಾರ್ಯಾಚರಣೆ ನಡೆಯುತ್ತಿದೆ ಎನ್ನುವ ಆರೋಪ ಮತ್ತು ಬಿಜೆಪಿ ಜೊತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಕೆಲವು ಶಾಸಕರು ಪಕ್ಷ ತೊರೆಯಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜೆಡಿಎಸ್ನ ಎಲ್ಲ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದರು.
ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ನೇತೃತ್ವದಲ್ಲಿ ಎಲ್ಲರೂ ಹಾಸನಕ್ಕೆ ತೆರಳಿ, ಹಾಸನಾಂಬೆಯ ದರ್ಶನ ಪಡೆದರು. ಆದರೆ, ಈ ಶಕ್ತಿ ಪ್ರದರ್ಶನದ ವಿದ್ಯಮಾನದಿಂದ ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ಮಾತ್ರ ದೂರ ಉಳಿದರು.
ಹಾಸನಾಂಬೆಯ ದರ್ಶನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಕಾಂಗ್ರೆಸ್ನ ಆಮಿಷಗಳಿಗೆ ಒಳಗಾಗಿ ಜೆಡಿಎಸ್ ಬಿಟ್ಟು ಹೋಗುವ ಶಾಸಕರು ಯಾರೂ ಇಲ್ಲ. ನಮ್ಮ ಪಕ್ಷದ ಶಾಸಕರ ಬಗ್ಗೆ ಅನುಮಾನ ಪಡುವ ಪರಿಸ್ಥಿತಿಯಿಲ್ಲ. ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೇವೆ” ಎಂದರು.
“ಪಕ್ಷದಲ್ಲಿ ಅಸಮಾಧಾನಗೊಂಡು ಬಿಟ್ಟು ಹೋಗುವವರು ಯಾರೂ ಇಲ್ಲ. ಆದರೂ ಕಾಂಗ್ರೆಸ್ನವರು ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪದೇ ಪದೇ ಕಾಂಗ್ರೆಸ್ನವರು ಇಂತಹ ಗೊಂದಲದ ಸುದ್ದಿಯನ್ನು ಹರಡುತ್ತಿದ್ದಾರೆ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ” ಎಂದು ಹೇಳಿದರು.
“ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸಭೆ ನಡೆಸಿ ಶಾಸಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ. ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹಿತಕ್ಕಾಗಿ ಹೊಂದಾಣಿಕೆ ಹೊರತು ಬೇರೆನೂ ಇಲ್ಲ. ಈ ಹೊಂದಾಣಿಕೆ ಅಧಿಕಾರ, ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ” ಎಂದು ತಿಳಿಸಿದರು.
ನಮ್ಮ @JanataDal_S ಪಕ್ಷದ ಶಾಸಕರೆಲ್ಲರೂ ಸೇರಿ ಇಂದು ಶ್ರೀ ಹಾಸನಾಂಬೆ ಅಮ್ಮನವರ ದರ್ಶನ ಪಡೆದುಕೊಂಡೆವು. ನಾಡಿನಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲಿ ಎಂದು ಎಲ್ಲರೂ ಪ್ರಾರ್ಥನೆ ಸಲ್ಲಿಸಿದೆವು.#ಹಾಸನಾಂಬೆ #ಹಾಸನ pic.twitter.com/w7HQjTCfnv
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 8, 2023
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?
“ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸೀಟು ಗಳಿಸಲಿದೆ ಎಂಬುದು ಮುಖ್ಯವಲ್ಲ. ಜೆಡಿಎಸ್, ಬಿಜೆಪಿ ಸೇರಿ ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದೇ ನಮ್ಮ ಮೊದಲ ಗುರಿಯಾಗಿದೆ” ಎಂದು ಹೇಳಿದರು.
“ಮುಖ್ಯಮಂತ್ರಿ ನಿವಾಸದಲ್ಲಿ ಉಪಾಹಾರ ಸಭೆ ನಡೆಸಿ ಕೆಲವು ಮಂತ್ರಿಗಳಿಗೆ ಪಕ್ಷಕ್ಕೆ ಬರುವವರನ್ನು ಕರೆ ತರಲು ಟಾಸ್ಕ್ ಕೊಟ್ಟಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿಗಳು ಪದೇ ಪದೇ 45 ಮಂದಿ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ. ಇದನ್ನು ತಡೆಯಲು ಯಾರು ಕಸರತ್ತು ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದರು.
“ಈ ಸರ್ಕಾರ 5 ವರ್ಷ ಇದ್ದರೆ 10 ಲಕ್ಷ ಕೋಟಿ ಸಾಲ ಆಗಲಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಗ್ಯಾರಂಟಿ ಯೋಜನೆಗಳು. ಬರವೀಕ್ಷಣೆ ನೆಪದಲ್ಲಿ ಎಲ್ಲೆಲ್ಲಿ ಸಮರ್ಥ ನಾಯಕರು ಇರುತ್ತಾರೋ, ಅವರನ್ನು ಹುಡುಕಿಕೊಂಡು ಕರೆದುಕೊಂಡು ಬನ್ನಿ” ಎಂದು ಕಿಡಿಕಾರಿದರು.
ಈ ವೇಳೆ ಜಿ ಟಿ ದೇವೇಗೌಡ, ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಪಕ್ಷದ ಶಾಸಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.