ಕಾಂಗ್ರೆಸ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾಗೂ ಇತರ ಆರು ಮಂದಿಯ ವಿರುದ್ಧ 2016ರಲ್ಲಿ ದಾಖಲಾಗಿದ್ದ ಕಾನೂನು ಬಾಹಿರ ಸಭೆ, ಗಲಭೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಗುಜರಾತ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಹೆಚ್ಚುವರಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಪಿ ಎನ್ ಗೋಸ್ವಾಮಿ ಅವರು ಜಿಗ್ನೇಶ್ ಮೇವಾನಿ, ಮನಬಾಯಿ ಪಟೇಲಿಯಾ, ಮುಖೇಶ್ ಪಟೇಲ್, ದಶರತ್ ಪಾಗಿ, ಮೀಶ್ ನರ್ಶಿನಿ ಹಾಗೂ ದರ್ಶನ್ ಪಟದಿಯಾ ವಿರುದ್ಧ ದಾಖಲಾಗಿದ್ದ ಕಾನೂನು ಬಾಹಿರ ಸಭೆ, ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದಾರೆ.
2016ರ ಸೆಪ್ಟೆಂಬರ್ನಲ್ಲಿ ಅಹಮದಾಬಾದ್ನ ಮುನ್ಸಿಪಲ್ ಕಾರ್ಪೋರೇಷನ್ನ ಪೌರ ಕಾರ್ಮಿಕರನ್ನು ಬೆಂಬಲಿಸಿ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಿ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿದ್ದಕ್ಕಾಗಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಈ ಪ್ರಕರಣದಲ್ಲಿ ಮೇವಾನಿ ಹಾಗೂ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ),146(ಗಲಭೆ),147,294(ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ), 332(ಸರ್ಕಾರಿ ಅಧಿಕಾರಿ ಕರ್ತವ್ಯದಲ್ಲಿರುವಾಗ ತೊಂದರೆಯುಂಟು ಮಾಡುವುದು) ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಜಿಗ್ನೇಶ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲರಾದ ಕಾರಣ ನ್ಯಾಯಾಲಯ ಪ್ರಕರಣಗಳನ್ನು ರದ್ದುಗೊಳಿಸಿತು.
2022ರ ಗುಜರಾತ್ ವಿದಾನಸಭೆಯ ವಡಗಾವ್ ವಿಧಾನಸಭೆಯಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ ಗೆಲುವು ಸಾಧಿಸಿದ್ದರು. ಜಿಗ್ನೇಶ್ ಅವರು ಗುಜರಾತ್ನ ಕಾಂಗ್ರೆಸ್ನ ಕಾರ್ಯಕಾರಿ ಅಧ್ಯಕ್ಷ ಹಾಗೂ ಸರ್ಕಾರೇತರ ಸಂಸ್ಥೆ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ನ ಸಂಚಾಲಕ ಕೂಡ ಆಗಿದ್ದಾರೆ.
ಇದಲ್ಲದೆ 2017ರಲ್ಲಿ ಗುಜರಾತ್ ಸರ್ಕಾರದ ವಿರುದ್ಧದ ಪ್ರತಿಭಟನೆಯ ವೇಳೆ ರೈಲು ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿಯೂ ಜಿಗ್ನೇಶ್ ಮೆವಾನಿ ಮತ್ತು ಇತರ 30 ಮಂದಿಯನ್ನು ಮೆಟ್ರೋಪಾಲಿಟನ್ ನ್ಯಾಯಾಲಯ ಖುಲಾಸೆಗೊಳಿಸಿದೆ.